ಎಲ್ಲರೂ ಚೆನ್ನಮ್ಮಳ ಆದರ್ಶ ಮೈಗೂಡಿಸಿಕೊಳ್ಳಿ: ಬಸವಲಿಂಗಪ್ಪ ಭೂತೆ

| Published : Oct 25 2024, 12:46 AM IST / Updated: Oct 25 2024, 12:47 AM IST

ಸಾರಾಂಶ

ಬ್ರಿಟಿಷರ ವಿರುದ್ಧ ಹೋರಾಡಿದ ಅನೇಕ ಧೀರ ಮಹಿಳೆಯರ ಪೈಕಿ ಚೆನ್ನಮ್ಮ ಅವರ ಹೆಸರು ಮುಂಚೂಣಿಯಲ್ಲಿರುವುದು ನಾಡಿನ ಹೆಮ್ಮೆ ಸಂಗತಿ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರರಾಣಿ ಕಿತ್ತೂರು ಚೆನ್ನಮ್ಮಳ ಶೌರ್ಯ, ಧೈರ್ಯ, ಕ್ರಾಂತಿಕಾರಿ ವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವುದು ಅವಶ್ಯ ಎಂದು ಜಿಲ್ಲಾ ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಸವಲಿಂಗಪ್ಪ ಭೂತೆ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ಬುಧವಾರ ತಾಲೂಕಾಡಳಿತ ಹಾಗೂ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಅನೇಕ ಧೀರ ಮಹಿಳೆಯರ ಪೈಕಿ ಚೆನ್ನಮ್ಮ ಅವರ ಹೆಸರು ಮುಂಚೂಣಿಯಲ್ಲಿರುವುದು ನಾಡಿನ ಹೆಮ್ಮೆ ಸಂಗತಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಉಪನ್ಯಾಸ ನೀಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ತನ್ನ ೧೫ನೇ ವಯಸ್ಸಿನಲ್ಲಿ ತನ್ನ ರಾಜ್ಯದ ಜನತೆಯ ಕಾಪಾಡಲು ಹುಲಿ ಬೇಟೆಯಾಡಿ ಸಂಹಾರ ಮಾಡಿ ಕೆಚ್ಚೆದೆಯ ವೀರ ವನಿತೆ ಎನಿಸಿಕೊಂಡಳು. ಬ್ರಿಟಿಷರು ಭಾರತದ ಕೆಲವು ರಾಜ್ಯಗಳನ್ನು ವಶಪಡಿಸಿಕೊಂಡು ಕಿತ್ತೂರು ಸಂಸ್ಥಾನಕ್ಕೆ ಲಗ್ಗೆ ಇಟ್ಟು ನೇರವಾಗಿ ಚೆನ್ನಮ್ಮಳಿಗೆ ಕಪ್ಪ ಕಟ್ಟುವಂತೆ ಒತ್ತಾಯಿಸಿದ ಸಂದರ್ಭ ಪ್ರತಿಧ್ವನಿಸಿದ ಚೆನ್ನಮ್ಮ ನಿಮಗೇಕೆ ಕೊಡಬೇಕು ಕಪ್ಪ, ರಾಜ್ಯ ಪ್ರವೇಶಿಸಲು ಅನುಮತಿ ನೀಡಿದ್ದೆ ತಪ್ಪಾಯಿತೇ ಕೂಡಲೇ ಇಲ್ಲಿಂದ ತೊಲಗಿ ಇಲ್ಲವಾದರೆ ನಿಮ್ಮ ನಾಲಿಗೆ ಸೀಳಿಬಿಟ್ಟೆನು ಎಚ್ಚರ ಎಂಬ ನುಡಿಗೆ ಬ್ರಿಟಿಷರು ತತ್ತರಿಸಿದ್ದರು. ಆ ಮಾತೆಯ ಸ್ಥೈರ್ಯ ಎಲ್ಲ ಮಹಿಳೆಯರಲ್ಲಿ ಹೊರಹೊಮ್ಮಬೇಕು. ಆಕೆಯ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಆಚರಣೆಗೆ ಹೆಚ್ಚು ಅರ್ಥ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡ ವೀರಣ್ಣ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅತಿಥಿಗಳಾಗಿ ಗ್ರೇಟ್-೨ ತಹಸೀಲ್ದಾರ ವಿ.ಎಚ್. ಹೊರಪೇಟಿ, ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೇಲೇರಿ, ತಾಲೂಕಾಧ್ಯಕ್ಷ ಕೆ.ಜಿ. ಪಲ್ಲೇದ, ವೀರಣ್ಣ ಅಣ್ಣಿಗೇರಿ, ಸಿ.ಎಚ್. ಪಾಟೀಲ, ಕಳಕನಗೌಡ ಜುಮ್ಲಾಪೂರ, ಬಹದ್ದೂರ ದೇಸಾಯಿ, ವೀರನಗೌಡ ಬನ್ನಪ್ಪಗೌಡ್ರ, ವೀರಣ್ಣ ಉಳ್ಳಾಗಡ್ಡಿ, ರಾಜಶೇಖರ ನಿಂಗೋಜಿ, ಆನಂದ ಉಳ್ಳಾಗಡ್ಡಿ, ಪ್ರಕಾಶ ಬೇಲೇರಿ, ಗೀತಾ ನಿಂಗೋಜಿ, ಸುರೇಶ ಶಿವನಗೌಡ್ರ, ಎಸ್.ಎನ್. ಶ್ಯಾಗೋಟಿ, ಸಿದ್ದರಾಮೇಶ ಬೇಲೇರಿ, ಅಮರೇಶ ಹುಬ್ಬಳ್ಳಿ, ಮುಖ್ಯಾಧಿಕಾರಿ ನಾಗೇಶ, ಶರಣಪ್ಪ ಅರಕೇರಿ, ಬಸವರಾಜ ಗುಳಗುಳಿ, ಪಪಂ ಸರ್ವ ಸದಸ್ಯರು ಇದ್ದರು.