ಸಮಾಜ ತಿದ್ದುವ ಕಾರ್ಯಕ್ಕೆ ಎಲ್ಲರೂಕೈಜೋಡಿಸಿ : ಬಿ.ವೈ.ವಿಜಯೇಂದ್ರ

| N/A | Published : Jun 23 2025, 01:17 AM IST / Updated: Jun 23 2025, 12:12 PM IST

ಸಮಾಜ ತಿದ್ದುವ ಕಾರ್ಯಕ್ಕೆ ಎಲ್ಲರೂಕೈಜೋಡಿಸಿ : ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜವನ್ನು ತಿದ್ದುವ ಜೊತೆಗೆ ಸರಿದಾರಿಗೆ ತರುವ ಮಠಮಾನ್ಯಗಳ ಕೆಲಸಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

 ಬೆಂಗಳೂರು :  ಸಮಾಜವನ್ನು ತಿದ್ದುವ ಜೊತೆಗೆ ಸರಿದಾರಿಗೆ ತರುವ ಮಠಮಾನ್ಯಗಳ ಕೆಲಸಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು ಹೊರವಲಯದ ನಗರೂರಿನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನಮಠದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ಣಾನಂದ ಪುರಿ ಶ್ರೀಗಳ 4ನೇ ಪಟ್ಟಾಭಿಷೇಕ ಮಹೋತ್ಸವ, ನೂತನ ಜ್ಞಾನಮಂದಿರ (ಯೋಗ ಮತ್ತು ಧ್ಯಾನಕೇಂದ್ರ) ಹಾಗು ಗಾಣಿಗರ ಟ್ರಸ್ಟ್‌ನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾರ್ಥಸಾಧನೆಯೆ ಮೇಲಾಗಿರುವ ಇಂದಿನ ಕಾಲದಲ್ಲಿ ಸಮಾಜದ ಏಳಿಗೆ ಬಯಸುವವರು ವಿರಳ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಜೊತೆಗೆ ಗುಣ, ಸಂಸ್ಕಾರ ನೀಡಬೇಕಿದೆ. ಸಮಾಜಕ್ಕೆ ಭಾರವಾಗದ ರೀತಿಯಲ್ಲಿ ಅವರನ್ನು ಬೆಳೆಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ ಎಂದರು.

ಶ್ರದ್ಧೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಪೂರ್ಣಾನಂದ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ಅವರು ಪೂರ್ವಾಶ್ರಮದಲ್ಲಿದ್ದಾಗ ಯಡಿಯೂರಪ್ಪನವರ ಕಷ್ಟದ ಸಂದರ್ಭದಲ್ಲಿ ನೈತಿಕ ಸ್ಥೈರ್ಯ ತುಂಬಿದ್ದರು. ಹಿಂದೆ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮಾಜಕ್ಕೆ ನೀಡಿದ ಜಾಗ ಮತ್ತು ಅನುದಾನವನ್ನು ಸದ್ವಿನಿಯೋಗಿಸುವಲ್ಲಿ ಪೂರ್ಣಾನಂದ ಪುರಿ ಶ್ರೀಗಳು ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಒಂದರ ಮೇಲೊಂದು ಸರ್ಕಾರಿ ಪ್ರಾಯೋಜಿತ ಹಗರಣಗಳು ನಡೆಯುತ್ತಿವೆ. ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.

ಕೈಲಾಸಾಶ್ರಮದ ಮಹಾಸಂಸ್ಥಾನ ಮಠದ ಜಯೇಂದ್ರ ಪುರಿ ಶ್ರೀಗಳು ಮಾತನಾಡಿ, ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಜನೋಪಯೋಗಿ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಸ್ಥಳದಲ್ಲೆ 2000 ಉದ್ಯೋಗ ನೀಡುವುದು ಸಾಮಾನ್ಯ ಸಂಗತಿಯಲ್ಲ. ಜನಸೇವೆ ಮಾಡುವುದರ ಮೂಲಕ ಪೂರ್ಣಾನಂದ ಪುರಿ ಶ್ರೀಗಳು ಸಾರ್ಥಕ್ಯ ಸಾಧಿಸಿದ್ದಾರೆ ಎಂದರು.

ದೊಡ್ಡಬಳ್ಳಾಪುರ ತೊಗಟವೀರ ಕ್ಷತ್ರಿಯ ಮಠದ ದಿವ್ಯಜ್ಞಾನಾನಂದ ಗಿರಿ ಶ್ರೀ ಮಾತನಾಡಿ, ಒಗ್ಗಟ್ಟು ವಿದ್ಯೆ ಉತ್ಸಾಹ ಇದ್ದರೆ ಸಮಾಜದ ಏಳಿಗೆ ಸಾಧ್ಯ, ಗಾಣಿಗ ಸಮಾಜಕ್ಕೆ ಪೂರ್ಣಾನಂದ ಶ್ರೀಗಳು ಅವನ್ನು ತುಂಬುತ್ತಿದ್ದಾರೆ ಎಂದರು.

ವನಕಲ್ಲು ಬಸವರಮಾನಂದ ಶ್ರೀ, ಬೆಳಗಾವಿ ಮಡಿವಾಳೇಶ್ವರ ಶ್ರೀ, ಹೊಸಕೋಟೆ ತಿಗಳ ಮಹಾಸಂಸ್ಥಾನದ ಗೋವರ್ಧನ ನಂದಪುರಿ ಶ್ರೀಗಳು, ನೆಲಮಂಗಲ ಶಿವಾನಂದಾಶ್ರಮದ ರಮಣಾನಂದ ಶ್ರೀಗಳು ಇದ್ದರು.

ಸುಮಾರು 400 ಜನರಿಗೆ ಉಚಿತ ಆರೋಗ್ಯ ತಪಾಸಣೆ, ಹೃದಯ ಪರೀಕ್ಷೆ ನಡೆಯಿತು. ಕಣ್ಣಿನ ತಪಾಸಣೆ ನಡೆಸಿ ಹಲವರಿಗೆ ಕನ್ನಡಕ ವಿತರಿಸಲಾಯಿತು. ಗಾಣಿಗ ವಧುವರರ ಅನ್ವೇಷಣೆ, ಪ್ರತಿಭಾಪುರಸ್ಕಾರ, ಉದ್ಯೋಗ ಮೇಳದಲ್ಲಿ 35ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದವರು.

Read more Articles on