ಸಾರಾಂಶ
ತಿರಂಗಾ ಯಾತ್ರೆ । ಸೈನಿಕರಿಗೆ ಗೌರವ, ನೈತಿಕ ಸ್ಥೈರ್ಯಕ್ಕಾಗಿ ಕಾರ್ಯಕ್ರಮ । ರಾಷ್ಟ್ರಧ್ವಜ ಹಿಡಿದು ಮೆರವಣಿಗೆ
ಕನ್ನಡಪ್ರಭ ವಾರ್ತೆ ಹೊನ್ನಾಳಿಕಾಶ್ಮೀರದ ಪ್ರವಾಸದಲ್ಲಿದ್ದ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ತಮ್ಮ ಧರ್ಮ ಕೇಳಿ 26 ಹಿಂದುಗಳನ್ನು ಹತ್ಯೆ ಮಾಡಿದ ಉಗ್ರರನ್ನು ಕೇವಲ 25 ನಿಮಿಷದಲ್ಲಿ ಉಗ್ರರನ್ನು ಹಾಗೂ ಉಗ್ರರ ನೆಲೆಯನ್ನು ಧ್ವಂಸ ಮಾಡಿದ ನಮ್ಮ ವೀರ ಯೋಧರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಕಾಶ್ಮೀರದಲ್ಲಿ ಹಿಂದುಗಳನ್ನು ಹತ್ಯೆ ಮಾಡಿದ ಉಗ್ರರನ್ನು ಹಾಗೂ ಅವರ ನೆಲೆಯನ್ನು ಧ್ವಂಸ ಮಾಡಿದ ನಮ್ಮ ವೀರ ಯೋಧರಿಗೆ ಗೌರವಿಸಲು ಹಾಗೂ ಅವರಿಗೆ ನೈತಿಕ ಸ್ಥೈರ್ಯ ತುಂಬಲು ತಾಲೂಕಿನ ಕುಂದೂರು ಗ್ರಾಮದಲ್ಲಿ ಹಮ್ಮಿಂಕೊಂಡಿದ್ದ ತಿರಂಗಾ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.ಭಾರತ ಎಂದೂ ಉಗ್ರ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನಮ್ಮ ವೀರ ಯೋಧರು ತೋರಿಸಿಕೊಟ್ಟಿದ್ದಾರೆ, ವಿಶ್ವದ ಮುಂದೆ ಪಾಕಿಸ್ತಾನ ಆರೋಪಿ ಸ್ಥಾನದಲ್ಲಿ ನಿಂತಿದೆ, ಇಂತಹ ಪಾಕಿಸ್ತಾನವನ್ನು ಮಟ್ಟ ಹಾಕಬೇಕಾದರೆ ಭಾರತೀಯರೆಲ್ಲರೂ ಒಂದಾಗಬೇಕು, ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು. ನಾವುಗಳ್ಲೆಲ್ಲರೂ ಒಂದಾಗಿ ಉಗ್ರರನ್ನು ಎದುರಿಸಬೇಕು. ಅದನ್ನು ಬಿಟ್ಟು ದೇಶದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಪಾಕಿಸ್ತಾನ ಸುಖಾಸುಮ್ಮನೆ ನಮನ್ನು ಕೆಣಕುವುದಕ್ಕಾಗಿಯೇ ಉಗ್ರರನ್ನು ಬೆಳಸುತ್ತಿದ್ದಾರೆ,ಅವರಿಗೆ ನಮ್ಮ ವೀರ ಯೋಧರು ತಕ್ಕಪಾಠ ಕಲಿಸಿದರೂ ಇನ್ನೂ ಬುದ್ದಿ ಬಂದಿಲ್ಲ ಎಂದ ಅವರು ಮುಂದೊಂದು ದಿನ ಪಾಕಿಸ್ತಾನ ಸೈನಿಕರಿಗೆ ಕಾದಿದೆ ಹಬ್ಬ ಎಂದರು.ನೀವು ಇನ್ನೊಮ್ಮೆ ಏನಾದರೂ ಭಾರತದ ವಿರುದ್ದ ದಾಳಿ ಮಾಡಲು ಭಂಡ ದೈರ್ಯ ಪ್ರದರ್ಶನ ಮಡಿದ್ದೇ ಆದರೆ, ಜಗತ್ತಿಗೆ ಪಾಕಿಸ್ತಾನ ಇತ್ತು ಎಂಬುದೇ ಮರೆತು ಹೋಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ನಮಗೆ ಇತ್ತೀಚಿಗೆ ಬಾಹ್ಯ ಶತೃಗಳಿಗಿಂತ ಆಂತರಿಕ ಶತ್ರುಗಳೇ ಹೆಚ್ಚಾಗಿದ್ದಾರೆ, ಭಾರತವನ್ನು ಸುಖಾಸುಮ್ಮನೆ ಟೀಕಿಸುವುದು,ನಮ್ಮ ರಹಸ್ಯಗಳನ್ನು ಪಾಕಿಸ್ತಾನದ ಜತೆ ಹಂಚಿಕೊಳ್ಳುವುದು,ಬೇರೆ ದೇಶಕ್ಕೆ ಹೋದಾಗ ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಬದಲು ನಮ್ಮ ದೇಶದ ವಿರುದ್ದವೇ ಮಾತನಾಡುವ ಚಾಳಿ ಹೆಚ್ಚಾಗಿದೆ, ಇಂತಹ ಆಂತರಿಕ ದೇಶದ್ರೋಹಿಗಳಿಗೆ ಕೇಂದ್ರ ತಕ್ಕಪಾಠ ಕಲಿಸಬೇಕು ಎಂದರು.ವಿದ್ಯಾರ್ಥಿಗಳು ಹಾಗೂ ಕೆಲ ಸಾರ್ವಜನಿಕರು ಮಾತನಾಡಿದರು.
ಶಾಲಾ ಕಾಲೇಜಿನ ಮಕ್ಕಳು 100 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡು ಭಾರತ್ ಮಾತಾಕಿ ಜೈ, ವೀರ ಯೋಧರಿಗೆ ಜೈಕಾರ ಹಾಕುತ್ತ ಕುಂದೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ ಅರಕೆರೆ,ನೆಲಹೊನ್ನೆ ಮಂಜುನಾಥ್,ಕುಂದೂರು ಅನಿಲ್,ಸುರೇಂದ್ರನಾಯ್ಕ್, ಕೆ,ರೆಂಗಪ್ಪ,ಕೂಲಂಬಿ ಸಿದ್ದಲಿಂಗಪ್ಪ ಹಾಗೂ ಇತರರು ಇದ್ದರು.