ಎಲ್ಲರೂ ಸಂವಿಧಾನ ಗೌರವಿಸಿ: ಎಂಎಲ್‌ಸಿ ಶಾಂತಾರಾಮ ಸಿದ್ದಿ

| Published : Jan 28 2025, 12:45 AM IST

ಸಾರಾಂಶ

ನಾವು ಹಕ್ಕು ಪಡೆಯುವ ಚಿಂತನೆಗೂ ಮುನ್ನ ನಮ್ಮ ಕರ್ತವ್ಯಗಳ ಕುರಿತಾಗಿಯೂ ಯೋಚಿಸಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಯಲ್ಲಾಪುರ: ದೇಶದ ಸಂವಿಧಾನ, ರಾಷ್ಟ್ರಗೀತೆ, ಧ್ವಜ, ನೆಲ, ಜಲವನ್ನು ಗೌರವಿಸಿ ಬದುಕುವಂತಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಜ. ೨೬ರಂದು ತಾಲೂಕಿನ ಗಡಿಭಾಗದ ಚಿಪಗೇರಿಯ ಸ.ಹಿ.ಪ್ರಾ. ಶಾಲೆಗೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಿಂದ ನಿರ್ಮಿಸಿದ ಬಯಲು ರಂಗಮಂದಿರ, ನಲಿ- ಕಲಿ ಕೊಠಡಿಯ ವಸ್ತು ಪ್ರದರ್ಶನ ಉದ್ಘಾಟಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮಾತನಾಡಿದರು.ನಾವು ಹಕ್ಕು ಪಡೆಯುವ ಚಿಂತನೆಗೂ ಮುನ್ನ ನಮ್ಮ ಕರ್ತವ್ಯಗಳ ಕುರಿತಾಗಿಯೂ ಯೋಚಿಸಬೇಕಿದೆ. ಇಲ್ಲಿಯ ಶಾಲೆ ಮತ್ತು ವನವಾಸಿ ವಿದ್ಯಾರ್ಥಿನಿಲಯದ ನಡುವಿನ ಅವಿನಾಭಾವ ಸಂಬಂಧ ಉಲ್ಲೇಖನೀಯ. ಆದ್ದರಿಂದ ಇಲ್ಲಿನ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಉತ್ತಮ ಸ್ವರೂಪದ ಸಂಘಟಕರಾಗಿ ಮನಸ್ತಾಪಗಳಿಗೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಿದರೆ ಒಳ್ಳೆಯದು ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಇಲ್ಲಿಯ ಬಯಲು ರಂಗಮಂದಿರಕ್ಕೆ ₹೧ ಲಕ್ಷ ಅನುದಾನದ ನೆರವು ನೀಡಿದ ವಿಧಾನಪರಿಷತ್ ಸದಸ್ಯರಿಗೆ ಶಾಲೆಯ ಪರವಾಗಿ ಧನ್ಯವಾದ ತಿಳಿಸಿದರು.ನಿಖಿತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯಾಧ್ಯಾಪಕಿ ಗೀತಾ ಭಟ್ಟ ಸ್ವಾಗತಿಸಿದರು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಶ್ರೀರಾಮ ವನವಾಸಿ ವಿದ್ಯಾರ್ಥಿನಿಲಯದ ಅಧ್ಯಕ್ಷ ಮಂಜುನಾಥ ಶಾಸ್ತ್ರಿ, ನಿಲಯದ ವ್ಯವಸ್ಥಾಪಕ ವಿಜಯಕುಮಾರ, ಗುತ್ತಿಗೆದಾರ ವೀರಪ್ಪ ಹುಸರಿ, ಹಿರಿಯ ನಾಗರಿಕ ಎಂ.ಕೆ. ಹೆಗಡೆ, ಎಸ್‌ಡಿಎಂಸಿ ಸದಸ್ಯರು ವೇದಿಕೆಯಲ್ಲಿದ್ದರು.

ಸಹ ಶಿಕ್ಷಕರಾದ ವಾಣಿಶ್ರೀ ಹೆಗಡೆ ನಿರ್ವಹಿಸಿದರು. ಮನೋಹರ ಇಂಗಳಕಿ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ನೆರವು ನೀಡಿದ ಶಾಂತಾರಾಮ ಸಿದ್ದಿ ಮತ್ತು ಶಾಲಾ ಆವಾರ ಗೋಡೆ ನಿರ್ಮಿಸಿದ ವೀರಪ್ಪ ಉಸರಿ ಅವರನ್ನು ಎಸ್‌ಡಿಎಂಸಿ ಪರವಾಗಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ಭಾರತಮಾತೆಗೆ ಎಲ್ಲರೂ ಋಣಿಯಾಗಿ: ಗಣಪತಿ ಭಟ್ಟ

ಯಲ್ಲಾಪುರ: ನಮ್ಮ ದೇಶ ಋಷಿ ಪ್ರಣಿತವಾದದ್ದು. ನಮಗೆಲ್ಲರಿಗೂ ಎರಡು ತಾಯಿ. ಹೆತ್ತವಳೊಬ್ಬಳಾದರೆ, ಹೊತ್ತವಳೊಬ್ಬಳು. ಭಾರತಮಾತೆ ನಮಗೆಲ್ಲ ಚೈತನ್ಯದಾಯಕಳಾಗಿದ್ದಾಳೆ. ಈ ಕರ್ಮ ಭೂಮಿಯಲ್ಲಿ ನಾವು ವೇದ, ತ್ಯಾಗ, ಧರ್ಮ, ಭೂಮಿಯೆಂದು ನಂಬಿಕೊಂಡ ಪರಂಪರೆಯವರು ನಾವು ಎಂದು ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ತಿಳಿಸಿದರು.ಪಟ್ಟಣದ ರವೀಂದ್ರ ನಗರದ ಅನಂತ್ ಗಾಂವ್ಕರ್ ನಿವಾಸದಲ್ಲಿ ಭಾರತ ಮಾತಾ ಪೂಜನಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಇಡೀ ಜಗತ್ತಿನಲ್ಲೇ ಭಾರತದಲ್ಲಿ ಮಾತ್ರ ಸೂರ್ಯನ ಶಾಖ, ಮಳೆ, ಚಳಿ ಎಲ್ಲವೂ ಸಮ ಪ್ರಮಾಣದಲ್ಲಿ ದೊರೆಯುತ್ತದೆ. ಅಂತೆಯೇ ನದಿಗಳೂ ಈ ಪುಣ್ಯ ಭೂಮಿಯಲ್ಲಿ ಸಮೃದ್ಧಿಯನ್ನು ಉಂಟುಮಾಡುತ್ತಿವೆ. ಈ ದೇಶ ಅನೇಕ ವಸಾಹತುಶಾಹಿಗಳ ಆಕ್ರಮಣಕ್ಕೆ ಗುರಿಯಾದರೂ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಲ್ಲಿ ಗೆದ್ದಿದೆ. ತಾಯಿ ಭಾರತ ಮಾತೆಗೆ ಋಣಿಯಾಗಿರಬೇಕು, ಗೌರವ ನೀಡಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ವಿವೇಕಾನಂದರು ಹೇಳಿದಂತೆ ಯುವಶಕ್ತಿಯ ಕೈಯಲ್ಲಿ ದೇಶದ ಭವಿಷ್ಯವಿದೆ. ಭಾರತೀಯರಾದ ನಾವೆಲ್ಲ ಇನ್ನೂ ಮಲಗಿದ್ದೇವೆ, ಇಂತಹ ಕಾರ್ಯಕ್ರಮಗಳನ್ನು ಮನೆ ಮನೆಗಳಲ್ಲಿ ಮಾಡುವ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದರು.

ವಿ. ವೆಂಕಟ್ರಮಣ್ ಭಟ್ಟ ಚಂದಗುಳಿ ಭಾರತಾಷ್ಟಕವನ್ನು ಪ್ರಸ್ತುತಪಡಿಸಿದರು. ಮಾತೆಯರು ಮತ್ತು ಸಾರ್ವಜನಿಕರು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಠಿಸಿದರು. ಅನಂತ್ ಗಾಂವ್ಕರ್ ಕಂಚೀಪಾಲ್ ಸ್ವಾಗತಿಸಿದರು. ರಾಮಕೃಷ್ಣ ಕವಡೀಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ವಹಿಸಿದರು. ಉಷಾ ಗಂವ್ಕರ್ ವಂದಿಸಿದರು. ಸುಬ್ರಾಯ್ ಭಟ್ಟ ಹಂಡ್ರಮನೆ ಶಂಖನಾದ ಮೊಳಗಿಸಿದರು.