ವಿಶ್ವದ ಎಲ್ಲ ಜನರ ಅರೋಗ್ಯವನ್ನು ಸುಧಾರಿಸುವ ಮತ್ತು ಆರೋಗ್ಯವಂತ ವಿಶ್ವವನ್ನು ನಿರ್ಮಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು 1948ರ ಜಿನೇವಾ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಹೇಳಿದ್ದಾರೆ.
- ಸರ್ಕಾರಿ ಕಾಲೇಜಿನಿಂದ ವಿಶ್ವ ಆರೋಗ್ಯ ದಿನ- ನಶಾಮುಕ್ತ ಭಾರತ ಜಾಗೃತಿ ಆಭಿಯಾನ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿಶ್ವದ ಎಲ್ಲ ಜನರ ಅರೋಗ್ಯವನ್ನು ಸುಧಾರಿಸುವ ಮತ್ತು ಆರೋಗ್ಯವಂತ ವಿಶ್ವವನ್ನು ನಿರ್ಮಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು 1948ರ ಜಿನೇವಾ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಹೇಳಿದರು.ಅವರು ಮಂಗಳವಾರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಸಹಯೋಗದಲ್ಲಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನ ಮತ್ತು ನಶಾಮುಕ್ತ ಭಾರತ, ಆರೋಗ್ಯಕ್ಕಾಗಿ ನಡಿಗೆ ಜಾಗೃತಿ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷದ ಧ್ಯೇಯ ವಾಕ್ಯದಂತೆ ಈ ವರ್ಷದ ಧ್ಯೇಯ, ವಿಜ್ಞಾನದ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಆರೋಗ್ಯಕ್ಕಾಗಿ ಜೊತೆಗೊಡೋಣ ಎಂಬುದಾಗಿದೆ. ಇದರಂತೆ ವಿಜ್ಞಾನದ ಮಾರ್ಗದರ್ಶನ ಪಡೆದು ಸಮುದಾಯದ ಆರೋಗ್ಯ ಸುಧಾರಣೆಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗಳು ಶ್ರಮಿಸಬೇಕಿದೆ ಎಂದರು.ಮೌಢ್ಯ, ಕಂದಾಚಾರಗಳ ಮೂಲಕ ಅನಾರೋಗ್ಯ ತಂದುಕೊಳ್ಳುವ, ರೋಗಗ್ರಸ್ತ ಸಮಾಜ ನಿರ್ಮಾಣದ ಬದಲಿಗೆ ವೈಜ್ಞಾನಿಕ ವಿಧಾನದಲ್ಲಿ ಉತ್ತಮ ಆರೋಗ್ಯ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಪ್ರಯತ್ನಶೀಲರಾಗಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಯುವಶಕ್ತಿಯು ದೇಶದ ಸಂಪತ್ತಾಗಿದೆ. ಅವರು ಸದೃಢ ಆರೋಗ್ಯವಂತರಾಗಿರಬೇಕು. ವಿದ್ಯಾರ್ಥಿಗಳು ನಶಾಮುಕ್ತ ಭಾರತ ನಿರ್ಮಾಣ ಮಾಡಲು ಕೈ ಜೋಡಿಸಬೇಕು, ನಶೆ ಅಥವಾ ದುಶ್ಚಟಗಳಿಗೆ ದಾಸರಾದ ಯುವಕರು ವೈಯಕ್ತಿಕ, ಕೌಟಂಬಿಕ ಹಾಗೂ ಸಾಮಾಜಿಕವಾಗಿ ವಿಘಟನೆಗೊಳ್ಳುತ್ತಾರೆ. ಎಲ್ಲರೂ ನಶೆಗಳಿಗೆ ದಾಸರಾಗುವುದಿಲ್ಲವೆಂದು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಕಾರ್ಯಕ್ರಮ ಅಧಿಕಾರಿಗಳಾದ ಬಿ.ತಿಪ್ಪೇಶ ಮತ್ತು ಡಾ.ಶ್ರೀನಿವಾಸ ಕೆ.ಎಂ., ಸಾಂಸ್ಕೃತಿಕ ವಿಭಾಗದ ಸಂಚಾಲಕ ಹರಾಳು ಮಹಾಬಲೇಶ್ವರ, ಐ.ಕ್ಯು.ಎ.ಸಿ. ಸಂಚಾಲಕ ಶ್ರೀ ರಾಘವೇಂದ್ರ ರಾವ್, ಕನ್ನಡ ವಿಭಾಗದ ಮುಖ್ಯಸ್ಥರಾದ ದಿಲೀಪ ಕೆ. ಕಂಬಳಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗೊವಿಂದಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಅಧ್ಯಾಪಕರು ಕಾಲೇಜಿನಿಂದ ಟಿ.ಬಿ. ಸರ್ಕಲ್ ವರೆಗೆ ಜಾಗೃತಿ ಜಾಥಾ ನಡೆಸಿದರು.- - -
-7ಎಚ್ಎಲ್.ಐ1: ಜಾಗೃತಿ ಜಾಥಾಕ್ಕೆ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಚಾಲನೆ ನೀಡಿದರು.