ಜಾತಿ ವ್ಯವಸ್ಥೆ ಕಿತ್ತುಹಾಕಲು ಎಲ್ಲರೂ ಶ್ರಮಿಸಬೇಕು

| Published : Nov 20 2024, 12:34 AM IST

ಸಾರಾಂಶ

ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲರೂ ಶ್ರಮಿಸಬೇಕು. ಸಮಾಜ ಸುಧಾರಣೆಗೆ ಕನಕದಾಸರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಆದರೆ ಇಂದಿನ ಕಾಲಘಟ್ಟದಲ್ಲಿ ಕನಕದಾಸರ ಆದರ್ಶಗಳನ್ನು ಯಾರೂ ಸಹ ಸ್ವೀಕಾರ ಮಾಡುತ್ತಿಲ್ಲ. ಆಧುನಿಕ ಕಾಲಘಟ್ಟದಲ್ಲಿ ಜಾತಿ ಜಾತಿ ನಡುವೆ ಸಂಘರ್ಷ ಮಿತಿಮೀರಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಮಾಜದಲ್ಲಿ ಎಲ್ಲ ಜಾತಿ ಜನಾಂಗದವರು ಸಮಾನರಾಗಿದ್ದು, ಪ್ರತಿಯೊಬ್ಬರೂ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದ ಮಹಾನ್ ಸಂತ ಕನಕದಾಸರು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಕನಕ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎಂದು ೧೪ನೇ ಶತಮಾನದಲ್ಲಿಯೇ ಹೇಳಿದ್ದರು. ಆದರೂ ಸಹ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಜಾತಿ ಜಾತಿ ನಡುವೆ ಸಂಘರ್ಷ ಮಿತಿಮೀರಿದೆ ಎಂದರು.

ಜಾತಿ ವ್ಯವಸ್ಥೆ ಕಿತ್ತುಹಾಕಿ

ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲರೂ ಶ್ರಮಿಸಬೇಕು. ಸಮಾಜ ಸುಧಾರಣೆಗೆ ಕನಕದಾಸರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಆದರೆ ಇಂದಿನ ಕಾಲಘಟ್ಟದಲ್ಲಿ ಕನಕದಾಸರ ಆದರ್ಶಗಳನ್ನು ಯಾರೂ ಸಹ ಸ್ವೀಕಾರ ಮಾಡುತ್ತಿಲ್ಲ. ಆದರೂ ಸಹ ೫೦೦ ವರ್ಷಗಳು ಕಳೆದರೂ ಅವರ ಆದರ್ಶ ಮತ್ತು ಕೊಡುಗೆಗಳನ್ನು ಕಂಡರೆ ಮತ್ತು ಇತರೆ ಎಲ್ಲಾ ಸಮುದಾಯದವರ ಬಗ್ಗೆ ಅವರಿಗುದ್ದ ಕಾಳಜಿಯನ್ನು ತೋರಿಸುತ್ತದೆ ಎಂದರು.

ರಸ್ತೆ, ಸಿಸಿ ರಸ್ತೆ ನಿರ್ಮಾಣ

ಬಂಗಾರಪೇಟೆ ಬೂದಿಕೋಟೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಗಾಜಗ ಗ್ರಾಮದಿಂದ ಬೂದಿಕೋಟೆ ಗ್ರಾಮದವರೆಗೂ ೩.೫ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ದಿ ಮಾಡಲಾಗುತ್ತದೆ. ಗ್ರಾಮದಲ್ಲಿ ೮೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಗ್ರಾಮಸ್ಥರ ಒತ್ತಾಸೆಯಂತೆ ಹಳೇ ಆಸ್ಪತ್ರೆ ಆವರಣದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ ಎಂದು ಬರವಸೆ ನೀಡಿದರು.ಈ ವೇಳೆ ಗ್ರಾ.ಪಂ ಅಧ್ಯಕ್ಷ ಬಿ.ಆರ್ ಮಂಜುನಾಥ, ಕುರುಬರ ಸಂಘದ ತಾ.ಅಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾಧ್ಯಕ್ಷ ಅಪ್ಪೇಗೌಡ, ಸಮಾಜ ಸೇವಕ ಎ.ಬಾಬು, ಜಿ.ಪಂ ಮಾಜಿ ಸದಸ್ಯ ಕೃಷ್ಣ, ದೊಡ್ಡಪ್ಪ, ಗ್ರಾಪಂ ಸದಸ್ಯ ಸುರೇಶ್‌ಕುಮಾರ್, ಕೃಷ್ಣಪ್ಪ ಶೆಟ್ಟಿ ಮುಂತಾದವರು ಹಾಜರಿದ್ದರು.