ಎಲ್ಲರೂ ಆತ್ಮಸಾಕ್ಷಿಯಿಂದ ಮತ ಚಲಾಯಿಸಿ: ಡೀಸಿ

| Published : Mar 28 2024, 12:48 AM IST

ಸಾರಾಂಶ

ಯಾರೂ ಕೂಡ ಮತದಾನದಿಂದ ಹಿಂದೆ ಉಳಿಯದೇ ಮತ್ತು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಆತ್ಮಸಾಕ್ಷಿಗೆ ಅನುಗುಣವಾಗಿ ಎಲ್ಲರೂ ಮತ ಚಲಾಯಿಸುವ ಮೂಲಕ ಶೇಕಡಾ ನೂರರಷ್ಟು ಮತ ಪ್ರಮಾಣ ಸಾಧಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಯಾರೂ ಕೂಡ ಮತದಾನದಿಂದ ಹಿಂದೆ ಉಳಿಯದೇ ಮತ್ತು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಆತ್ಮಸಾಕ್ಷಿಗೆ ಅನುಗುಣವಾಗಿ ಎಲ್ಲರೂ ಮತ ಚಲಾಯಿಸುವ ಮೂಲಕ ಶೇಕಡಾ ನೂರರಷ್ಟು ಮತ ಪ್ರಮಾಣ ಸಾಧಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ ೨೦೨೪ರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ಚುನಾವಣೆ ಪರ್ವ ದೇಶದ ಗರ್ವ’ ಘೋಷಣೆಯೊಂದಿಗೆ ಮತದಾನ ಜಾಗೃತಿ ಜಾಥಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿ, ಮಾತನಾಡಿದ ಅವರು, ಎಲ್ಲರೂ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ೮೫ ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಲ್ಲೇ ಮತ ಚಲಾಯಿಸುವ ಅವಕಾಶ ನೀಡಲಾಗಿದೆ. ಕೆಲ ವಯೋವೃದ್ಧರು ಮತಗಟ್ಟೆಗೇ ನೇರವಾಗಿ ಬಂದು ಮತ ಹಾಕುವುದಾಗಿ ಹೇಳಿದ್ದು, ಕಳೆದ ಲೋಕಾಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತದಾನ ಮಾಡಬೇಕು. ಮತದಾನದಂದು ರೆಸಾರ್ಟ್, ಹೋಂ ಸ್ಟೇ ಎಲ್ಲವನ್ನೂ ರದ್ದುಪಡಿಸಿ ನಿಮ್ಮ ಹಕ್ಕನ್ನು ಚಲಾಯಿಸಬೇಕು. ಮೇಲು, ಕೀಳು, ಬಡವ, ಬಲ್ಲಿದನೇ ಆಗಲಿ ಹಾಗೂ ಅಂಬಾನಿಯಿಂದ ಸಾಮಾನ್ಯ ಮನುಷ್ಯನಿಗೂ ಕೂಡ ಇರುವುದು ಒಂದೇ ಮತ. ಆದ್ದರಿಂದ ಮತ ಚಲಾಯಿಸುವ ಮೂಲಕ ಭಾರತದ ಪ್ರಜೆಯಾಗಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಸ್ವೀಪ್ ಸಮಿತಿ ಅಧ್ಯಕ್ಷರಾಗಿ ನಮ್ಮ ಸಿಒ ಇರುತ್ತಾರೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮತದಾನ ಪಟ್ಟಿಯನ್ನು ನೋಡಲಾಗಿ ಜಿಲ್ಲೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು, ಎಲ್ಲ ಪೊಲೀಸ್ ಠಾಣೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಜಿಪಂ ಮುಖ್ಯ ಸಿಇಒ ಪೂರ್ಣಿಮಾ ಮಾತನಾಡಿ, ಜಿಲ್ಲಾ ಸ್ವೀಫ್ ಸಮಿತಿಯಿಂದ ಪ್ರತಿ ತಾಲೂಕಿನಲ್ಲೂ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, ೨೦೧೯ ಲೋಕಾಸಭಾ ಚುನಾವಣೆಯಲ್ಲಿ ಶೇ. ೭೭.೧೯ ರಷ್ಟು ಮತದಾನವಾಗಿತ್ತು. ಈ ಬಾರಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇಕಡವಾರು ನೂರರಷ್ಟು ಸಾಧಿಸಿ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಚುನಾವಣೆಯ ಪ್ರಚಾರದ ಅಂಬಾಸಿಡರ್ ಸುಷ್ಮಾ ಮಾತನಾಡಿ, ಮತದಾನ ಮಾಡಲು ಅಂಗವಿಕಲರಿಗೂ ಸೌಲಭ್ಯ ನೀಡಲಾಗಿದೆ. ಎಲ್ಲರೂ ಮರೆಯದೇ ಮತ ಚಲಾಯಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪಂಚಾಯತ್ ನ ಪರಪ್ಪಸ್ವಾಮಿ, ಜಿಲ್ಲಾ ಆರೋಗ್ಯಧಿಕಾರಿ ಅನಿಲ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಹಿಮ್ಸ್ ಜಿಲ್ಲಾ ಸರ್ಜನ್ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ, ನಗರಸಭೆ ಜೂನಿಯರ್ ಇಂಜಿನಿಯರ್ ಕೆ.ಆರ್. ಕವಿತಾ, ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.