ಕಂಪ್ಲಿ: ದೇಶವನ್ನು ಸಂಪೂರ್ಣ ಪೊಲಿಯೋ ಮುಕ್ತವಾಗಿಡುವ ನಿಟ್ಟಿನಲ್ಲಿ ಪಾಲಕರು ತಮ್ಮ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಪ್ಪದೇ ಪೊಲಿಯೋ ಲಸಿಕೆ ಹಾಕಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಕರೆ ನೀಡಿದರು.
ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಜೂ. 28ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಅಂಗವಾಗಿ ಗುರುವಾರ ಆಯೋಜಿಸಿದ್ದ ಭಿತ್ತಿಪತ್ರ ಹಾಗೂ ಬ್ಯಾನರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲಿಯೋ ರೋಗವು ಮಕ್ಕಳ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯಕಾರಿ ಕಾಯಿಲೆಯಾಗಿದ್ದು, ಲಸಿಕೆ ನೀಡುವ ಮೂಲಕ ಮಾತ್ರ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ. ದೇಶದಲ್ಲಿ ಪೊಲಿಯೋ ನಿರ್ಮೂಲನೆಗೊಂಡಿದ್ದರೂ, ಭವಿಷ್ಯದಲ್ಲಿ ಯಾವುದೇ ಮಗುವಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಪ್ರತಿ ವರ್ಷ ಪಲ್ಸ್ ಪೊಲಿಯೋ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆತಂದು ಎರಡು ಹನಿ ಜೀವ ರಕ್ಷಕ ಔಷಧಿ ಹಾಕಿಸಬೇಕು ಎಂದು ಮನವಿ ಮಾಡಿದರು.ಶಿರಸ್ತೇದಾರರಾದ ಜಿ. ಪಂಪಾಪತಿ ಹಾಗೂ ಎಸ್.ಡಿ. ರಮೇಶ್ ಮಾತನಾಡಿ, ಪಲ್ಸ್ ಪೊಲಿಯೋ ಅಭಿಯಾನದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ. ಬಸವರಾಜ ಉಪಸ್ಥಿತರಿದ್ದರು.ಪಲ್ಸ್ ಪೊಲಿಯೋ ಜಾಥಾಕ್ಕೆ ಚಾಲನೆ: ರಾಷ್ಟ್ರೀಯ ಪಲ್ಸ್ ಪೊಲಿಯೋ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಾಥಾಕ್ಕೆ ಆಡಳಿತ ವೈದ್ಯಾಧಿಕಾರಿ ಡಾ. ರವೀಂದ್ರ ಕನಕೇರಿ ಚಾಲನೆ ನೀಡಿದರು. ವೈದ್ಯರಾದ ಡಾ. ಭರತ್ ಪದ್ಮಶಾಲಿ, ಡಾ. ದೇವರಾಜ, ಡಾ. ಹಾರಿಕಾ, ಸಿಬ್ಬಂದಿ ಕೆ. ಶೋಭಾ, ಚನ್ನಬಸವರಾಜ, ಉಪಪ್ರಾಚಾರ್ಯೆ ಸುಜಾತಾ, ಶಿಕ್ಷಕಿ ಸರೋಜಾ ಭಾಗವಹಿಸಿದ್ದರು.