ದೈವಾನುಗ್ರಹದಿಂದ ನಾಡಿಗೆ ಒಳಿತಾಗಲಿದೆ: ಬಿಎಸ್ ವೈ

| Published : Feb 14 2024, 02:15 AM IST

ಸಾರಾಂಶ

ನಾಡಿನ ಜನರ ಪೂಜಾ ಕೈಂಕರ್ಯಗಳಿಗೆ ದೇವರು ಕರುಣಿಸಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬಿ ರೈತರಿಗೆ ಒಳ್ಳೆಯ ಕಾಲ ಬರಲು ಸಾಧ್ಯ. ಹಾಗಾಗಿ ದೇಶಕ್ಕೆ ಉತ್ತಮವಾಗಿ ಮಳೆ, ಬೆಳೆಯಾಗಿ ದೇಶದ ಜನರು ನಿಶ್ಚಿಂತೆಯಿಂದಿರಲು ನಾನೂ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಈಗಾಗಲೇ ಬರಗಾಲ ತಾಂಡವಾಡುತ್ತಿದೆ. ಮಳೆ ಇಲ್ಲದೇ ಜನ, ಜಾನುವಾರುಗಳು ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಬರಗಾಲ ಭೀಕರವಾಗುವ ಸಾಧ್ಯತೆಯಿದೆ. ಇದನ್ನು ದೇವರೊಬ್ಬನಿಂದ ಮಾತ್ರ ತಡೆಯಲು ಸಾಧ್ಯ. ಆ ದೇವರು ಮನಸ್ಸು ಮಾಡಿದರಷ್ಟೇ ಈ ದುಸ್ಥಿತಿಯಿಂದ ದೂರವಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.

ತಾಲೂಕಿನ ದಬ್ಬೇಘಟ್ಟ ಹೋಬಳಿಯ ಮುದಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಭದ್ರಕಾಳಿದೇವಿ ಹಾಗೂ ನವಗ್ರಹ ದೇವಾಲಯಗಳ ಶಿಲಾಮಂಟಪಗಳ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ನಮ್ಮ ದುರ್ದೈವಕ್ಕೆ ಸರಿಯಾದ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಬೋರ್‌ವೆಲ್‌ಗಳಲ್ಲಿ ನೀರು ಸಿಗದಂತಾಗಿದೆ. ತೋಟಗಳು ಒಣಗಿ ಹೋಗುತ್ತಿವೆ. ನಾಡಿನ ಜನರ ಪೂಜಾ ಕೈಂಕರ್ಯಗಳಿಗೆ ದೇವರು ಕರುಣಿಸಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬಿ ರೈತರಿಗೆ ಒಳ್ಳೆಯ ಕಾಲ ಬರಲು ಸಾಧ್ಯ. ಹಾಗಾಗಿ ದೇಶಕ್ಕೆ ಉತ್ತಮವಾಗಿ ಮಳೆ, ಬೆಳೆಯಾಗಿ ದೇಶದ ಜನರು ನಿಶ್ಚಿಂತೆಯಿಂದಿರಲು ನಾನೂ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಾಡಿನ ಉದ್ದಗಲಕ್ಕೂ ಈ ರೀತಿಯ ಧರ್ಮ ಕಾರ್ಯಗಳನ್ನು ಜನರು ಕೈಗೊಳ್ಳುವುದರಿಂದ ದೇವರ ಅನುಗ್ರಹವಾಗಿ ನಾಡಿಗೆ ಒಳಿತಾಗಲಿದೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ರೈತರ ಪರ ಹೋರಾಟ ಮಾಡಿದವರು ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತ್ರ. ಇವರಿಬ್ಬರೇ ಹಲವು ಹೋರಾಟಗಳ ಮೂಲಕ ರೈತರಿಗೆ ನ್ಯಾಯ ಕೊಡಿಸಿದ್ದಾರೆ. ನಾವು ದೇವರ ನಂಬಿ ಜೀವನ ನಡೆಸುವವರು. ಪ್ರತಿ ಗ್ರಾಮದಲ್ಲಿ ದೇವಾಲಯಗಳನ್ನು ನಿರ್ಮಿಸಿ ಪೂಜೆ ಮಾಡುವುದು ನಮ್ಮ ಸನಾತನ ಧರ್ಮದಲ್ಲಿನ ಒಂದು ಭಾಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ೨೯ ರು.ಗಳಿಗೆ ಕೆ.ಜಿ ಅಕ್ಕಿ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯವನ್ನು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಮಸಾಲ ಜಯರಾಮ್ ಮಾತನಾಡಿದರು.

ಸಮಾರಂಭದಲ್ಲಿ ಮುಖಂಡರಾದ ಎಂ.ಡಿ.ಮೂರ್ತಿ, ಡಿ.ಆರ್.ಬಸವರಾಜು, ಮಲ್ಲಿಕಾರ್ಜುನ್, ಎ.ಬಿ.ಜಗದೀಶ್, ವಿ.ಬಿ.ಸುರೇಶ್, ಚಿದಾನಂದ್, ಗೊಟ್ಟಿಕೆರೆ ಕಾಂತರಾಜು, ರಮೇಶ್ ಗೌಡ, ಸೋಮಶೇಖರ್ ದೇವಾಲಯ ಟ್ರಸ್ಟ್ ಅಧ್ಯಕ್ಷ ಚಿಕ್ಕವೀರಯ್ಯ, ಉಪಾಧ್ಯಕ್ಷ ಕೆಂಪೇಗೌಡ, ನಾರಾಯಣ್ ಸೇರಿ ಹಲವು ಮುಖಂಡರು, ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮಸ್ಥರು, ಭಕ್ತಾದಿಗಳು ಇದ್ದರು. ಸವಿತಾ ಶಿವಕುಮಾರ್ ನಿರೂಪಿಸಿದರು. ಶಿಕ್ಷಕ ನಟೇಶ್ ಸ್ವಾಗತಿಸಿದರು. ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕೇಂದ್ರದ ಅಕ್ಕಿ ಯೋಜನೆಯನ್ನು ಸದ್ಬಳಸಿಕೊಳ್ಳಿಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಮಾತನಾಡಿ ನಾರಿಶಕ್ತಿ, ಯುವಶಕ್ತಿ, ರೈತಶಕ್ತಿ ಮತ್ತು ದಲಿತ ಶಕ್ತಿಗಳು ಒಂದಾದರೆ ನಮ್ಮ ದೇಶವನ್ನು ಬಹಳ ಎತ್ತರಕ್ಕೆ ಕೊಂಡಯ್ಯಬಹುದು ಎಂದು ತಿಳಿಸಿದ್ದಾರೆ. ಬಡವ, ಶ್ರೀಮಂತರೆಂಬ ಭೇಧವಿಲ್ಲದೇ ಕೇವಲ ೨೯ ರು. ಗಳಿಗೆ ಉತ್ತಮ ಗುಣಮಟ್ಟದ ಒಂದು ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ೧೨ ಜಿಲ್ಲೆಯಲ್ಲಿನ ತೆಂಗು ಬೆಳೆಯುವ ರೈತರ ಬದುಕು ಅತಂತ್ರವಾಗಿದೆ. ಕೊಬ್ಬರಿ ಬೆಳೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ನ್ಯಾಫೆಡ್ ಮೂಲಕ ಕೇವಲ ೬೨ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಿದರೆ ಸಾಲದು. ಕೂಡಲೇ ರೈತರು ಬೆಳೆದಿರುವ ೨ ಲಕ್ಷದ ೫೦ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು ಎಂದು ಒತ್ತಾಯಿಸಿದರು.