ಸಾರಾಂಶ
ಕನ್ನಡಪ್ರಭ ವಾರ್ತೆ ಮಾನ್ವಿ
ತಾಲೂಕಿನ ಕುರ್ಡಿ, ಅರೋಲಿ, ಜಾಗೀರವೆಂಕಟಪಾರು, ಗೋನಾಳ, ಪತೇಪುರ, ರಾಜೋಳಿ ಗ್ರಾಮಗಳ ರೈತರ ಜಮೀನಿಗಳಿಗೆ ವಿಜ್ಞಾನಿಗಳ, ಅಧಿಕಾರಿಗಳ ತಂಡವು ಭೇಟಿ ನೀಡಿ ರೈತರೊಂದಿಗೆ ನೇರ ಸಂವಾದ ಮತ್ತು ಮಾಹಿತಿ ಕಾರ್ಯಾಗಾರಗಳನ್ನು ನಡೆಸಿತು.ರಾಯಚೂರು ಕೃಷಿ ವಿಜ್ಞಾನ ಕೇಂದ್ರ, ನೇತೃತ್ವದಲ್ಲಿ ಭಾರತೀಯ ತೋಟಗಾರಿಕೆ ಸಂಸ್ಥೆಯ ವಿಜ್ಞಾನಿಗಳು ಕೃಷಿ ಅಧಿಕಾರಿಗಳು ಮತ್ತು ಇಫ್ಕೋ ಸಂಸ್ಥೆಯ ನ್ನೋಳಗೊಂಡ ವಿಜ್ಞಾನಿಗಳ ತಂಡದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ನಡೆಸಿದ ಈ ಸಂವಾದ ಕಾರ್ಯಕ್ರಮಗಳಲ್ಲಿ ಕಿಸಾನ್-ಡ್ರೋನ್ ಮೂಲಕ ನ್ಯಾನೋ ರಸಗೊಬ್ಬರ ಮತ್ತು ಪೀಡೆನಾಶಕ ಸಿಂಪರಣೆಯ ಪ್ರಾತ್ಯಕ್ಷಿಕೆ, ಕೃಷಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಕೃಷಿ ಅನುಸಂದಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಅಧಿಕ ಇಳುವರಿ ಕೊಡುವ ತಳಿಗಳ ಮಾಹಿತಿ, ಮಣ್ಣು ಫಲವತ್ತತೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳು, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ಮಹತ್ವ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ, ಮೆಣಸಿನಕಾಯಿ ಬೆಳೆಯ ಮಾರುಕಟ್ಟೆ, ಇ-ಮಾರುಕಟ್ಟೆ, ಫಸಲ್ ಭೀಮಾ ಯೋಜನೆ, ಕೃಷಿ ಸಿಂಚಾಯಿ, ಹಾಗೂ ಹತ್ತಿ, ತೊಗರಿ ಮತ್ತು ಪಪ್ಪಾಯ, ಪೇರಲ ಹಾಗೂ ಮಾವಿನ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಒಟ್ಟು 1,360 ಕ್ಕೂ ಹೆಚ್ಚು ರೈತರು ಭಾಗವಹಿಸಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡರು.
ವಿಜ್ಞಾನಿಗಳಾದ ಡಾ.ಶ್ರೀವಾಣಿ ಜಿ.ಎನ್., ಡಾ.ಮಲ್ಲರೆಡ್ಡಿ, ಡಾ.ಹರೀಶ್, ಡಾ.ಎ.ನಾಗರಾಜ, ವಿಶ್ವನಾಥ್, ಡಾ.ಉಮೇಶ ಬಾಬು ಬಿ.ಎಸ್., ಡಾ.ಅಫ್ಸನ್ಭಾನು ಮಾಣಿಕ್, ಅಮರೇಶ, ಶಿವಪ್ಪ ಇವರು ಪಾಲ್ಗೊಂಡಿದ್ದರು.