ಬೋಚಬಾಳದಲ್ಲಿ ಮಾಜಿ ಶಾಸಕ ಯಾದವಾಡರಿಗೆ ತರಾಟೆ!

| Published : Apr 29 2024, 01:38 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ತಾಲೂಕಿನ ಕೊನೆಯ ಹಳ್ಳಿ ಬೋಚಬಾಳ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನ ಕೊನೆಯ ಹಳ್ಳಿ ಬೋಚಬಾಳ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌ ಆಗಿದೆ.

ವಿಡಿಯೋದಲ್ಲಿ ಏನಿದೆ?:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳಲು ಬಾರದ ತಾವು ಲೋಕಸಭೆಯ ಚುನಾವಣೆಯಲ್ಲಿ ಮತ ಕೇಳಲು ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಿಲ್ಲ. ಬಿಜೆಪಿ ಪ್ರಚಾರಕ್ಕೆ ಬರುವಂತೆ ಜಿಲ್ಲಾ ಮತ್ತು ರಾಜ್ಯ ನಾಯಕರು ನನ್ನನ್ನು ಕರೆಯಲಿಲ್ಲ. ಕೇವಲ ಒಂದು ವಾರದಲ್ಲಿ ಬಿಜೆಪಿಗೆ ಬಂದವರಿಗೆ ವಿಧಾನಸಭೆ ಟಿಕೆಟ್ ನೀಡಿದ್ದರಿಂದ ಪಕ್ಷಕ್ಕೆ ಮತ ಕೇಳಲು ಬಂದಿರಲಿಲ್ಲ ಎಂದು ಮಹಾದೇವಪ್ಪ ಯಾದವಾಡ ಸಮಜಾಯಿಸಿದ್ದಾರೆ.ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಗ್ರಾಮದ ಬಹುತೇಕರು ನಿರ್ಧರಿಸಿದ್ದೇವೆ. ಆದರೆ, ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ತಾವು ತಟಸ್ಥರಾಗಿದ್ದಕ್ಕೆ ಅನಾಥರಾಗಿದ್ದೆವು. ಈಗ ಮತ್ತೇ ಬಿಜೆಪಿ ಗೆಲ್ಲಿಸಲು ಆಗಮಿಸುವುದು ಸೂಕ್ತವಲ್ಲವೆಂದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಗ್ರಾಮದ ಹಿರಿಯರು ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಪರ ಗ್ರಾಮದಲ್ಲಿ ಮತಯಾಚನೆ ಮಾಡಿದರು.