ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಜ್ಞಾನ ಇಲ್ಲದೆ ಯಾವ ನೂತನ ಅವಿಷ್ಕಾರಗಳು, ಸಂಶೋಧನೆಗಳು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಮತ್ತು ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅಪಾರವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ. ಬಸಪ್ಪ ತಿಳಿಸಿದರು.ಸರಸ್ವತಿಪುರಂ ವಿಜಯ ವಿಠ್ಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ಅತ್ಯುನ್ನತ ತರಬೇತಿಯನ್ನು ಹೊಂದುವ ಕೌಶಲ್ಯವನ್ನು ಪಡೆಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ. ಕಲಿಕೆಯ ಉದ್ದೇಶ ಮತ್ತು ಗುರಿಯನ್ನು ಅರಿತು ಯಾವ ಕ್ಷೇತ್ರವನ್ನು ಆರಿಸಿಕೊಳ್ಳುವಿರೋ ಅದರಲ್ಲಿ ನೀವು ಸಂಪೂರ್ಣ ಜ್ಞಾನವನ್ನು ಪಡೆಯಲು ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ಕೌಶಲ್ಯಾಧಾರಿತ, ನವನವೀನ ವೈಜ್ಞಾನಿಕ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ದೇಶದ ಗೌರವವನ್ನು ಹೆಚ್ಚಿಸಬೇಕು. ಪರಿಸರಕ್ಕೆ ಪೂರಕವಾದ ಚಟುವಟಿಕೆಗಳಾದ ಪ್ಲಾಸ್ಟಿಕ್ ಬಳಕೆ ನಿಷೇಧ, ನೀರಿನ ಸದ್ಬಳಕೆ ಮುಂತಾದ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ವಿಜ್ಞಾನದಲ್ಲಿ ಸತತ ಅಧ್ಯಯನಶೀಲರಾಗಬೇಕು ಎಂದು ಅವರು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠ್ಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ಮಾನವ ಜೀವನವನ್ನು ಉತ್ತಮಪಡಿಸಲು ವಿದ್ಯಾವಂತರಾಗುವುದೇ ಮಾತ್ರವಲ್ಲದೆ ಹೊಸ ಹೊಸ ಅವಿಷ್ಕಾರಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಮನುಕುಲದ ಉದ್ಧಾರಕ್ಕೆ ವಿಜ್ಞಾನಿಗಳ ಕೊಡುಗೆ ಅವಿಸ್ಮರಣೀಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ವೈಜ್ಞಾನಿಕ ಮನೋಭಾವ, ಚಿಂತನೆಯು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನ ವೇದಿಕೆಯ ಸದ್ಬಳಕೆಯನ್ನು ಮಾಡಿಕೊಳ್ಳುವುದರಿಂದ ಪ್ರಶ್ನಿಸುವ, ತಾರ್ಕಿಕ ಮನೋಭಾವ ಹೆಚ್ಚುತ್ತದೆ ಎಂದು ಹೇಳಿದರು.ವಿಜ್ಞಾನ ಸಂಘದ ಸಂಚಾಲಕಿ ಶ್ವೇತಾ ಅವರು, ವಿಜ್ಞಾನ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಉಪನ್ಯಾಸಕರದಾದ ಮಯೂರಲಕ್ಷ್ಮಿ, ಅನಿತಾ, ಭಾವನಾ ಭಾರದ್ವಾಜ್ ಇದ್ದರು. ಪಂಚಮಿ ಮತ್ತು ಸಾಗರಿಕ ಪ್ರಾರ್ಥಿಸಿದರು. ಆರ್. ಬಿಂದುಶ್ರೀ ಅತಿಥಿಯನ್ನು ಪರಿಚಯಿಸಿದರು. ಫಾಸ್ಟಿನಾ ಸ್ವಾಗತಿಸಿದರು. ಖುಷಿ ಎಂ. ಗೌಡ ನಿರೂಪಿಸಿದರು. ಸಾರಿಕಾ ವಂದಿಸಿದರು.