ಫಾದರ್‌ ಮುಲ್ಲರ್‌ ಸಂಸ್ಥೆಯಿಂದ ಉತ್ಕೃಷ್ಟ ಸೇವೆ: ಬಿಷಪ್‌

| Published : Mar 20 2024, 01:20 AM IST

ಫಾದರ್‌ ಮುಲ್ಲರ್‌ ಸಂಸ್ಥೆಯಿಂದ ಉತ್ಕೃಷ್ಟ ಸೇವೆ: ಬಿಷಪ್‌
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳ ಹೃದಯದಲ್ಲಿ ಭರವಸೆ ತುಂಬುವ ಕೆಲಸವನ್ನು ವೈದ್ಯ ಸೇವೆಯಲ್ಲಿರುವ ಪ್ರತಿಯೊಬ್ಬರೂ ಮಾಡಬೇಕಿದೆ. ರೋಗದಿಂದ ಗುಣಮುಖರಾಗುವ ಆತ್ಮಸ್ಥೈರ್ಯ ತುಂಬಿದಾಗ ವೈದ್ಯ ಸೇವೆಗೆ ನಿಜಾರ್ಥ ಬರುತ್ತದೆ ಎಂದು ಬಿಷಪ್‌ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಫಾದರ್ ಮುಲ್ಲರ್ ಸಂಸ್ಥೆಯು ಬಡವರ ಕಣ್ಣೀರು ಒರೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಅಲ್ಲದೆ, ಸಮಾಜಕ್ಕೆ ಉತ್ಕೃಷ್ಟ ದರ್ಜೆಯ ಸೇವೆ ಒದಗಿಸುತ್ತಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ.ಪೀಟರ್‌ ಪಾವ್ಲ್‌ ಸಲ್ಡಾನಾ ಹೇಳಿದ್ದಾರೆ.ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಕಾಲೇಜು ಆಫ್ ಫಿಸಿಯೋಥೆರಫಿ ವಿಭಾಗಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಫಾದರ್‌ ಮುಲ್ಲರ್‌ ಮೆಡಿಕಲ್ ಕಾಲೇಜಿನ ಮೇಲೆ ನಂಬಿಕೆ ಇಟ್ಟು ಪೋಷಕರು ತಮ್ಮ ಮಕ್ಕಳನ್ನು ಸಂಸ್ಥೆಗೆ ಸೇರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಫಾದರ್‌ ಮುಲ್ಲರ್‌ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ ಎಂದು ಆವರು ಹೇಳಿದರು.ರೋಗಿಗಳ ಹೃದಯದಲ್ಲಿ ಭರವಸೆ ತುಂಬುವ ಕೆಲಸವನ್ನು ವೈದ್ಯ ಸೇವೆಯಲ್ಲಿರುವ ಪ್ರತಿಯೊಬ್ಬರೂ ಮಾಡಬೇಕಿದೆ. ರೋಗದಿಂದ ಗುಣಮುಖರಾಗುವ ಆತ್ಮಸ್ಥೈರ್ಯ ತುಂಬಿದಾಗ ವೈದ್ಯ ಸೇವೆಗೆ ನಿಜಾರ್ಥ ಬರುತ್ತದೆ ಎಂದು ಬಿಷಪ್‌ ಕಿವಿಮಾತು ಹೇಳಿದರು.

ಭಾರತ ಸರ್ಕಾರದ ಬಾಹ್ಯ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಡಾ.ಎ.ವಿ.ಎಸ್. ರಮೇಶ್ ಚಂದ್ರ ಮಾತನಾಡಿ, ವೈದ್ಯಕೀಯ ಸೇವೆ ಶ್ರೇಷ್ಠವಾದುದು ಎಂಬುದಕ್ಕೆ ಕೋವಿಡ್ ಸಂದರ್ಭ ಉತ್ಯುತ್ತಮ ನಿದರ್ಶನವಾಗಿತ್ತು. ವೈದ್ಯ ಸೇವೆಯಿಂದ ಸ್ವಪ್ರಗತಿಯೊಂದಿಗೆ ಸಮಾಜಿಕ ಪ್ರಗತಿಯ ಕಾರ್ಯಗಳೂ ನಡೆಯಬೇಕು ಎಂದು ಆಶಿಸಿದರು.ದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ಸಮೂಹ ಆಸ್ಪತ್ರೆಯ ನಿರ್ದೇಶಕ ಡಾ. ಸುಭಾಶ್‌ಗಿರಿ ಮಾತನಾಡಿ, ವೈದ್ಯರು ಹಣದ ಹಿಂದೆ ಹೋಗದೆ ಸೇವೆಯೇ ಶ್ರೇಷ್ಠ ಎನ್ನುವುದನ್ನು ಮನಗಾಣಬೇಕು. ಬಡ ಜನರಿಗೆ ಹಣಕಾಸಿನ ಅಡೆತಡೆಗಳು ಸಹಜ. ಇಂತಹ ಸಂದರ್ಭಗಳಲ್ಲಿ ವೈದ್ಯರು ತಮ್ಮ ಸೇವೆಯನ್ನು ನಿಸ್ವಾರ್ಥವಾಗಿ ನೀಡಬೇಕು. ಸಾಮಾಜಿಕ ಬದ್ಧತೆಯೊಂದಿಗೆ ನಡೆದಾಗ ಮಾತ್ರವೇ ಗಳಿಸಿದ ಶಿಕ್ಷಣಕ್ಕೆ ಅರ್ಥ ಹಾಗೂ ಸಾರ್ಥಕತೆ ಸಿಗಲು ಸಾಧ್ಯ ಎಂದು ಕರೆ ನೀಡಿದರು.ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಜಿತ್ ಮಿನೇಜಸ್ ವಾರ್ಷಿಕ ವರದಿ ಮಂಡಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೆರಾ, ಸಹಾಯಕ ಆಡಳಿತಾಧಿಕಾರಿ ವಂ. ನೆಲ್ಸನ್ ದೀರಜ್ ಪಾಯಿಸ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಆಡಳಿತಾಧಿಕಾರಿ ಫಾ. ಸಿಲ್ವೆಸ್ಟರ್, ಡೀನ್ ಆ್ಯಂಟನಿ ಸಿಲ್ವನ್ ಡಿಸೋಜ, ವೈಸ್ ಡೀನ್ ವೆಂಕಟೇಶ್ ಬಿ.ಎನ್., ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್ ಕೆ., ಫಿಜಿಯೋಥೆರಫಿ ಕಾಲೇಜು ಪ್ರಾಂಶುಪಾಲೆ ಪ್ರೊ. ಚರಿಷ್ಮಾ ಇದ್ದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ದೆಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು. ಕಾಲೇಜ್ ಆಫ್ ಅಲೈಡ್ ಸೈನ್ಸ್ ಪ್ರಾಂಶುಪಾಲೆ ಡಾ. ಹೀಲ್ಡಾ ಡಿಸೋಜ ವಂದಿಸಿದರು. ಡಾ. ಶ್ರೇಯಸ್ ಹಾಗೂ ಡಾ. ಸವಿತಾ ಲಸ್ರಾದೊ ನಿರೂಪಿಸಿದರು.