ಕನ್ನಡಪ್ರಭ ವಾರ್ತೆ ವಿಜಯಪುರ
ಏಕಾಗ್ರತೆ, ಯೋಗ, ಧ್ಯಾನ, ತಪಸ್ಸು, ಸಕಾರಾತ್ಮಕ ಚಿಂತನೆಗಳ ಮೂಲಕ ಚಂಚಲ ಮನಸ್ಸನ್ನು ನಿಗ್ರಹಿಸಲು ಸಾಧ್ಯ. ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಸನ್ನಿವೇಶ- ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ಹಿತ-ಮಿತವಾಗಿ ವ್ಯಕ್ತಪಡಿಸಬಹುದು. ಆದರೆ ಮಾನವನ ಅತಿಯಾದ ಆಸೆ, ನಿರಾಶೆ ಮತ್ತು ಹತಾಶೆಗಳೇ ಮನಃಶಾಂತಿ ಮತ್ತು ನೆಮ್ಮದಿಯನ್ನು ಕಡಿಮೆಯಾಗಿಸುತ್ತಿವೆ ಎಂದು ಶಿರಹಟ್ಟಿ ಬಾಳೆಹೊಸೂರಿನ ಮಠದ ಪೀಠಾಧಿಪತಿ ಶ್ರೀ ನಿರಂಜನ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಕುಂಭ ಮೇಳ ಹಾಗೂ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧ್ಯಾತ್ಮಿಕ ಚಿಂತನೆಗಳು ಆತ್ಮದ ಅರಿವು, ಪರಮಾತ್ಮನ ಸಾಕ್ಷಾತ್ಕಾರ ಮತ್ತು ಸಾರ್ಥಕ ಜೀವನಕ್ಕೆ ಅಗತ್ಯ. ಸತ್ಸಂಗ, ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಜನರಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ, ಆತ್ಮಶಾಂತಿ ಒಡಮೂಡುತ್ತದೆ. ಚಿಂತನಾಗೋಷ್ಠಿಗಳಲ್ಲಿ ಬೋಧಿಸುವ ತತ್ವಗಳ ಸಾರ ಸಂದೇಶದಿಂದ ಮಾನವನಲ್ಲಿರುವ ಕಲ್ಮಶ ಭಾವನೆಗಳು ದೂರಾಗಿ ತಾತ್ವಿಕ ಜ್ಞಾನದೊಂದಿಗೆ ಜೀವನ ಸುಂದರ ಮತ್ತು ಬಂಗಾರವನ್ನಾಗಿಸಲು ಸಹಕಾರಿಯಾಗಿವೆ. ಸಂಕಷ್ಟಗಳನ್ನು ಎದುರಿಸುವ ಸಮಯದಲ್ಲಿ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಧನಾತ್ಮಕ ಶಕ್ತಿ ತಂದಕೊಂಡು ಶಾಂತಿಯುತ ಬದುಕು ಸಾಗಿಸುವಲ್ಲಿ ಅಧ್ಯಾತ್ಮಿಕ ಚಿಂತನೆಗಳು ಪೂರಕವಾಗಿವೆ ಎಂದರು.
ಶ್ರೀ ಶಿವಲಿಂಗೇಶ್ವರ ದೇವರು ಆಶಿರ್ವಚನ ನೀಡಿ, ಉಪಾಸನೆ ಮತ್ತು ಸತ್ಕರ್ಮಗಳನ್ನು ನಿರಂತರವಾಗಿ ಮಾಡುತ್ತಿದ್ದರೆ ನಮ್ಮಲ್ಲಿನ ಅಜ್ಞಾನ- ಅಂಧಕಾರ ದೂರಾಗಿ ಜೀವನದಲ್ಲಿ ಯೋಗ್ಯ ಫಲ ಪ್ರಾಪ್ರಿಯಾಗುತ್ತದೆ. ಧರ್ಮ-ಸಂಸ್ಕೃತಿ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಅರಿತು ಬಾಳಲು ನಾವೆಲ್ಲರೂ ಬದುಕುತ್ತಾ, ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಗುರು-ಶಿಷ್ಯರ ಸಂಬಂಧ ಮುಖ್ಯವಾಗಿ ಅನ್ಯೋನ್ಯವಾಗಿದ್ದು, ಸದಾ ಭಕ್ತಿಮಾರ್ಗವನ್ನು ಅನುಸರಿಸಿ, ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕು ಎಂದರು.ನಾಗಾವಿಯ ಬಸವಲಿಂಗ ಪರಮ ಪೂಜ್ಯರು, ಬೀಳಗಿಯ ನಾಗರಾಜದೇವರು. ಶ್ರೀ ಶಿವಾನಂದ ದೇವರು, ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ರಾಜಶೇಖರ ಉಮರಾಣಿ, ಬಸವರಾಜ ಕುಂಬಾರ, ಡಾ.ರಾಜಕುಮಾರ ಜೊಳ್ಳಿ, ಅರವಿಂದ ಹಂಗರಗಿ, ನಿಂಗಪ್ಪ ನಿಂಬಾಳಕರ, ಶೋಭಾ ಚವ್ಹಾಣ, ಶ್ರೀಶೈಲ ಅವಜಿ, ಬಿ.ಡಿ.ಕಡಕೋಳ, ಶಾಂತಾ ಕಪಾಳಿ, ಎಸ್.ಎಲ್.ಇಂಗಳೇಶ್ವರ, ಮಹೇಶಸಿಂಗ ಪತ್ತಾರ, ಮಂಜುಳಾ ನಿಂಬಾಳಕರ, ಕಾಶಿನಾಥ ಶೇಗಾವಿ, ಸಾಬು ಅಗ್ರಾಣಿ ಇದ್ದರು.