ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಕೇವಲ ಕುಟುಂಬದ ಮಟ್ಟದಲ್ಲಷ್ಟೇ ಅಲ್ಲದೆ, ಶಾಲಾ, ಜಿಲ್ಲಾ ಹಾಗೂ ರಾಜ್ಯ/ಸರ್ಕಾರಿ ಮಟ್ಟದಲ್ಲಿಯೂ ಸೂಕ್ತ ಕ್ರಮಗಳು ಮತ್ತು ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ
ಧಾರವಾಡ: ಇಲ್ಲಿಯ ನರೇಂದ್ರ ಬೈಪಾಸ್ ಬಳಿ ಇರುವ ಇಸ್ಕಾನ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಂಭ್ರಮ ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಿತು.
ಮಹೋತ್ಸವದ ಅಂಗವಾಗಿ ಜರುಗಿದ ಭಗವದ್ಗೀತಾ ಮೌಲ್ಯ ಶಿಕ್ಷಣ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನೆರವೇರಿಸಿದ ಎಸ್ಡಿಎಂ ಆಸ್ಪತ್ರೆಯ ಪ್ರಾಚಾರ್ಯ ಡಾ. ವಿಜಯ ಕುಲಕರ್ಣಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಹಾಗೂ ವ್ಯಸನದಿಂದ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೋಷಕರ ಮಕ್ಕಳ ಮೇಲೆ ವಿಶೇಷ ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವಿದೆ ಎಂದ ಅವರು, ಕ್ರೀಡೆ ಮತ್ತು ದೈಹಿಕ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ, ರಾಷ್ಟ್ರೀಯ ಏಕತೆ ಹಾಗೂ ದೇಶದ ಬಗ್ಗೆ ಹೆಮ್ಮೆ ಮತ್ತು ಜವಾಬ್ದಾರಿಯನ್ನು ಮಕ್ಕಳಿಗೆ ಬೆಳೆಸಲು ಸಲಹೆ ನೀಡಿದರು.ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಕೇವಲ ಕುಟುಂಬದ ಮಟ್ಟದಲ್ಲಷ್ಟೇ ಅಲ್ಲದೆ, ಶಾಲಾ, ಜಿಲ್ಲಾ ಹಾಗೂ ರಾಜ್ಯ/ಸರ್ಕಾರಿ ಮಟ್ಟದಲ್ಲಿಯೂ ಸೂಕ್ತ ಕ್ರಮಗಳು ಮತ್ತು ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ದೇವರ ದರ್ಶನ, ಕೀರ್ತನೆ-ಭಜನೆ, ಅಭಿಷೇಕ, ಆಧ್ಯಾತ್ಮಿಕ ಪ್ರವಚನಗಳು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೃಷ್ಣ ಪ್ರಸಾದ ವಿತರಣೆ ನಡೆಯಿತು. ಜಿಲ್ಲೆಯ 22 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಈ ಮಹೋತ್ಸವದಲ್ಲಿ ಸುಮಾರು 5,000 ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಸಂಸ್ಕಾರ, ಶಿಸ್ತು, ಸದಾಚಾರ ಹಾಗೂ ಭಗವದ್ಗೀತೆಯ ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಇಸ್ಕಾನ್ ಧಾರವಾಡ ಅಧ್ಯಕ್ಷ ಸದಯೋಗಿ ದಾಸ ಪ್ರಭು, ಭಾಗವತ ಶ್ರವಣ ಪ್ರಭು ಹೇಳಿದರು.ಇಸ್ಕಾನ್ನ ಭಕ್ತರು, ವಿವಿಧ ಸೇವಾ ವಿಭಾಗಗಳ ಮುಖ್ಯಸ್ಥರು ಹಾಗೂ ಸ್ವಯಂಸೇವಕರು ಇದ್ದರು.