ಸಾರಾಂಶ
- ಜಿಲ್ಲೆಯಲ್ಲಿರುವ 1230 ಮತಗಟ್ಟೆಗಳಲ್ಲಿ ಜಾತಿ ಗಣತಿ । ತಾಂತ್ರಿಕ ದೋಷಗಳಿಂದ ಸುಧಾರಣೆ
ಕನ್ನಡಪ್ರಭ ವಾರ್ತೆ, ಬೀರೂರುಮೇ 5ರಿಂದ ಜಿಲ್ಲೆಯಲ್ಲಿ ಶುರುವಾಗಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯಕ್ಕೆ ಆರಂಭದಿಂದಲೇ ತಲೆದೋರಿರುವ ಹಲವು ತಾಂತ್ರಿಕ ದೋಷಗಳಿಂದ ಸುಧಾರಿಸಿಕೊಳ್ಳುತ್ತಿರುವ ನಡುವೆಯೆ ಗಡಿಬಿಡಿಯಲ್ಲಿ ನಡೆದಿರುವ ಸಮೀಕ್ಷೆ ನಡೆಸುವವರ ತರಬೇತಿ, ಸಿದ್ಧತೆಗಳಿಂದ ಹಲವು ಗೊಂದಲಗಳು ಹಾಗೂ ಎದುರಾಗಿರುವ ಸಮಸ್ಯೆ ಬಗೆಹರಿಸಲು ಕಸರತ್ತು ನಡೆಸಲಾಗುತ್ತಿದೆ.ಜಿಲ್ಲೆಯ ಒಟ್ಟು 1, 230 ಮತಗಟ್ಟೆಗಳಲ್ಲಿ ಜಾತಿ ಗಣತಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ ಶೇ.10ರಷ್ಟು ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ನೇಮಿಸಲಾಗಿದೆ. 1,518 ಜಾತಿಗಣತಿದಾರರಲ್ಲಿ ಯಾರಿಗಾದರೂ ತೊಂದರೆಯಾದರೆ ಬದಲಿಯಾಗಿ ಬಳಸಲು ನಿರ್ಧರಿಸಲಾಗಿದೆ. ಪ್ರತಿ 10 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಿದ್ದು ತೊಂದರೆ ಯಾದರೂ ಬಗೆಹರಿಸಿ ಅಧಿಕಾರಿಗಳ ತಂಡವಿದೆ.ತಾಂತ್ರಿಕತೆಯೇ ಕಿರಿಕಿರಿ:
ಮೇ 5ರ ಮಧ್ಯಾಹ್ನದಿಂದ ಜಾತಿಗಣತಿ ಪ್ರಕ್ರಿಯೆ ಶುರುವಾಗಿದೆ. ಇದೇ ಮೊದಲ ಬಾರಿಗೆ ಆ್ಯಪ್ ಮೂಲಕ ಜಾತಿಗಣತಿ ನಡೆಸಲಾಗುತ್ತಿದ್ದು, ಕೆಲವು ಕಾಲಂಗಳಲ್ಲಿ ಸರಿಯಾದ ಮಾಹಿತಿ ಲಭ್ಯವಾಗದಿರುವುದು, ಮನೆಗೆ ಹೊಸ ಸದಸ್ಯರು ಸೇರ್ಪಡೆಯಾಗಿದ್ದರೆ ಅವರ ಹೆಸರು ಸೇರಿಸುವುದು, ಸ್ಥಳದ ನಿಖರತೆಯಲ್ಲಿ ಹಲವು ಏರುಪೇರುಗಳಿವೆ. ಅವುಗಳ ನಿವಾರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.ಶಿಕ್ಷಕರಿಂದಲೇ ಗಣತಿಕಾರ್ಯ: ಈ ಹಿಂದೆ ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ಶಿಕ್ಷಕರನ್ನೇ ಜಾತಿಗಣತಿಗೆ ನೇಮಿಸ ಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬದಲಾಗಿ ಶಿಕ್ಷಕರನ್ನೇ ನೇಮಿಸಲಾಗಿದೆ. ಅಲ್ಲದೇ ಈ ಹಿಂದೆ ಇರುವ ಬೂತ್ ಮಟ್ಟದ ಅಧಿಕಾರಿಗಳು ನೆರವು ನೀಡಲು ಸೂಚಿಸಲಾಗಿದೆ. ಹೀಗಾಗಿ ಕರಾರುವಾಕ್ಕಾಗಿ ಜಾತಿಗಣತಿ ಮಾಡಲು ಸಹಕಾರಿಯಾಗಿದ್ದು ಯಾವುದೇ ತಾಂತ್ರಿಕ ಸಮಸ್ಯೆ ಬಂದರೆ ಪರಿಹರಿಸಲು ಜಿಲ್ಲಾ ಮಟ್ಟದಲ್ಲಿ ಯೋಜನಾ ವ್ಯವಸ್ಥಾಪಕರನ್ನು ನೇಮಿಸಲಾಗಿದೆ.
ಪ್ರಶ್ನೆಗಳೇ ನೂರೆಂಟು ! ಪರಿಶಿಷ್ಟ ಜಾತಿ ಗಣತಿ ಎಷ್ಟು ಸಮಗ್ರವಾಗಿದೆಯೆಂದರೆ ಹೆಸರು, ಲಿಂಗ, ಉದ್ಯೋಗ, ವೈವಾಹಿಕ ಸಂಬಂಧ, ಶಾಲೆ ಬಿಡಲು ಕಾರಣ, ಸರಕಾರಿ/ ಖಾಸಗಿ ನೌಕರರ, ಕುಶಲ ಕರ್ಮಿ, ಮನೆಗೆಲಸ, ಆದಾಯ ತೆರಿಗೆ ಪಾವತಿದಾರರು, ರಾಜಕೀಯ ಕ್ಷೇತ್ರದಲ್ಲಿ ಹೊಂದಿರುವ ಸ್ಥಾನಮಾನ, ಮೂಲ ಜಾತಿ, ಸಮಾಜದಲ್ಲಿ ಏನಾದರೂ ತಾರತಮ್ಯ ಆಗಿದೆಯಾ?, ವಾಹನಗಳು ಎಷ್ಟಿವೆ?, ಸರಕಾರದಿಂದ ಪಡೆದಿರುವ ಸೌಲಭ್ಯಗಳೇನು? ಗೃಹ ಸಾಲವಿದೆಯಾ? ಸ್ಥಿರಾಸ್ತಿ, ಚರಾಸ್ತಿ ಎಷ್ಟಿದೆ ಎಂಬುದರ ಹಿಗೇ ಪ್ರಶ್ನೆಗಳ ಸರಮಾಲೆ ಒಳಗೊಂಡಿದೆ.ಇತರರ ಗಣತಿ ಸುಲಭ: ಪರಿಶಿಷ್ಟ ಉಪಜಾತಿಯ ಸಮಗ್ರ ಜಾತಿಗಣತಿ ಇದಾಗಿದೆ. ಬೇರೆ ಜಾತಿಗಳ ಗಣತಿಯೂ ನಡೆಯುತ್ತಿದೆ. ಆದರೆ ಇಷ್ಟೊಂದು ಸಮಗ್ರವಾಗಿಲ್ಲ. ಕೇವಲ ಮನೆಯಲ್ಲಿರುವ ಸದಸ್ಯರನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಕೇವಲ ಪರಿಶಿಷ್ಟ ಜಾತಿ ಮನೆಗಳ ಸಮಗ್ರ ಗಣತಿ ಯಾಗಿರುವುದರಿಂದ ನಿಗದಿತ ಮೇ 17ರೊಳಗೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದರ ಕಾರ್ಯ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದೆಡೆ ಜಾತಿಗಣತಿಯಲ್ಲಿ ಮೂಲ ಜಾತಿ ಮತ್ತು ಉಪ ಜಾತಿಗಳ ನಮೂದು ಮಾಡುವ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ. ಇದರ ಬಗ್ಗೆ ಸಾಕಷ್ಟು ಜನರಲ್ಲಿ ಸಮುದಾಯದವರು ಪ್ರತ್ಯೇಕವಾಗಿ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊಸ ಮಾದರಿ ಜನಗಣತಿ ಇದಾಗಿದ್ದು, ಪ್ರತಿ ದಿನ ಎಷ್ಟು ಜನರ ಗಣತಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಜಿಲ್ಲೆಯಲ್ಲಿ 59296 ಕುಟುಂಬಗಳಿದ್ದವು, ಇದರಲ್ಲಿ ಗ್ರಾಮೀಣ (51432), ನಗರ (7864) ಕುಟುಂಬಗಳಿರುವ ಬಗ್ಗೆ ಅಂದಾಜಿಸಲಾಗಿದೆ.ಸಮಸ್ಯೆ ಆಗುತ್ತಿರುವುದೇನು?ಪ್ರತಿಯೊಂದು ಪರಿಶಿಷ್ಠ ಜಾತಿ, ಉಪ ಜಾತಿ ಮಾದಿಗರ ಮನೆ ಬಳಿ ಕನಿಷ್ಠ 30-35 ನಿಮಿಷ ಸಮಯ ಹಿಡಿಯುತ್ತಿದೆ. ಗಣತಿ ಮಾಡಲು ಬಂದಾಗ ಮನೆಯಲ್ಲಿ ಯಾರಾದರೊಬ್ಬರು ಇರಬೇಕು. ಅವರು ಕುಟುಂಬದ ಇತರೆ ಸದಸ್ಯರ ಮಾಹಿತಿ ನೀಡಬೇಕು. ರೇಷನ್ ಕಾರ್ಡ್ ಇದ್ದರೆ ಅದರಲ್ಲಿನ ಸದಸ್ಯರ ಹೆಸರು ನೋಂದಣಿಯಾಗುತ್ತದೆ. ಇಲ್ಲವಾದಲ್ಲಿ ಕುಟುಂಬ ಸದಸ್ಯರ ಅಧಾರ್ ಕಾಡ್ , ಫೋಟೊ ಪಡೆಯಬೇಕಾಗುತ್ತದೆ. ಹೀಗೆ ಎಲ್ಲವನ್ನು ಆ್ಯಪ್ನಲ್ಲಿ ನಮೂದಿಸಬೇಕು. ಎಲ್ಲ ಪ್ರಕ್ರಿಯೆ ಮುಗಿದ ನಂತರ ಕೋಡ್ ಬರಲಿದ್ದು ಆ ಕೋಡನ್ನು ಹಾಕಿದರೆ ಗಣತಿ ಮುಗಿಯಲಿದೆ. ಆದರೆ ಕೆಲವು ಕಡೆ ಗಣತಿ ಕೊನೆ ಹಂತದಲ್ಲಿ ಸಮಸ್ಯೆಯಾಗಿ ಮತ್ತೆ ಹೊಸದಾಗಿ ಎಲ್ಲವನ್ನೂ ಮಾಡಬೇಕಾದ ಪ್ರಸಂಗಗಳು ಇಂದಿಗೂ ನಡೆಯುತ್ತಿವೆ.ನಗರ ಸಮೀಕ್ಷೆಯೆ ಕಷ್ಟ!: ಜಾತಿಗಣತಿಯಲ್ಲಿ ನಗರಕ್ಕಿಂತ ಗ್ರಾಮಾಂತರ ಪ್ರದೇಶಗಳೇ ಹೆಚ್ಚು ಗಣತಿ ಕಾರ್ಯವಾಗುತ್ತದೆ. ಸ್ಥಳೀಯ ಪೂರ್ಣ ಮಾಹಿತಿ ಹೊಂದಿರುವ ಕುಟುಂಬಗಳು ಆದಷ್ಟು ಪೂರಕ ಮಾಹಿತಿಯನ್ನು ಗಣತಿದಾರರಿಗೆ ನೀಡಲಾಗುತ್ತದೆ. ಅದರೆ ನಗರ ಪ್ರದೇಶದಲ್ಲಿ ಮನೆಯ ಸಂಪರ್ಕಿಸುವವರು ಅಕ್ಕಪಕ್ಕದವರ ಮಾಹಿತಿ ಸೇರಿದಂತೆ ಗಣತಿ ಕಾಲಂನಲ್ಲಿನ ಇತರೆ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕುತ್ತಿರುವುದು ಸಮೀಕ್ಷೆ ಕಾರ್ಯದಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಒಟ್ಟಾರೆ ಸಮಸ್ಯೆಗಳ ನಡುವೆ ಗಣತಿಕಾಯ್ ಮುಂದುವರಿಯುತ್ತಿದ್ದು ಸಕಾಲದಲ್ಲಿ ಮುಗಿಸುವ ಧಾವಂತದಲ್ಲಿ ಗಣತಿದಾರರಿದ್ದಾರೆ.
-- ಕೋಟ್--ಆರಂಭದಲ್ಲಿ ಜಾತಿ ಗಣತಿ ಆಪ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಶನಿವಾರದ ಬಳಿಕ ಸಮಸ್ಯೆಯನ್ನು ಹಿರಿಯ ತಾಂತ್ರಿಕ ತಜ್ಞರು ಸರಿಪಡಿಸಿದ್ದು ಇದೀಗ ಪ್ರಕ್ರಿಯೆ ಸಾರಾಗವಾಗಿ ನಡೆಯುತ್ತಿದೆ ಕೆಲವು ಮತಗಟ್ಟೆ ಭಾಗದಲ್ಲಿನ ಸಮೀಕ್ಷೆ ವೇಳೆ ಉಂಟಾಗುವ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ಸೂಚನೆ ಮೇರೆಗೆ ಸರಿಪಡಿಸಿಕೊಳ್ಳಲಾಗುತ್ತಿದೆ.
- ಕೆ.ನಟರಾಜ್,ತಾಲೂಕು ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ, ಕಡೂರು.
--12 ಬೀರೂರು 1ಕಡೂರು ತಾಲೂಕಿನಲ್ಲಿ ಆ್ಯಪ್ ಮೂಲಕ ಜಾತಿಗಣತಿ ನಡೆಸುತ್ತಿರುವ ಅಧಿಕಾರಿಗಳು12ಬೀರೂರು 2ಕೆ.ನಟರಾಜ್ ಸಮಾಜ ಕಲ್ಯಾಣ ಇಲಾಖೆ ಕಡೂರು