ಕಾರ್ಯಕ್ರಮದ ಕೊನೆಯಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕ ತರಬೇತಿಗೆ ನೋಂದಾಯಿಸಿಕೊಂಡಿದ್ದ 88 ಜನರಿಗೆ ಪ್ರಮಾಣ ಪತ್ರ ವಿತರಿಸಿದರು.

ಭಟ್ಕಳದಲ್ಲಿ ಅಡ್ವಾನ್ಸ ಯೋಗ ಶಿಕ್ಷಕರ ತರಬೇತಿ ಸಮಾರೋಪದಲ್ಲಿ 88 ಜನರಿಗೆ ಪ್ರಮಾಣ ಪತ್ರ

ಕನ್ನಡಪ್ರಭ ವಾರ್ತೆ ಭಟ್ಕಳ

ಪತಂಜಲಿ ಯೋಗ ಪರಿವಾರ ಭಟ್ಕಳ ಮತ್ತು ಶ್ರೀ ಗೋವಿಂದ ಗುರೂಜಿ ನೇತೃತ್ವದಲ್ಲಿ ಶ್ರೀ ನಾಗ ಮಾಸ್ತಿ ಯೋಗ ಕೇಂದ್ರ ಮಣ್ಕುಳಿಯಲ್ಲಿ ಜರುಗಿದ ಅಡ್ವಾನ್ಸ್ ಯೋಗ ಶಿಕ್ಷಕ ತರಬೇತಿ ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಯೋಗ ಶಿಕ್ಷಣ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕ ತರಬೇತಿಗೆ ನೋಂದಾಯಿಸಿಕೊಂಡಿದ್ದ 88 ಜನರಿಗೆ ಪ್ರಮಾಣ ಪತ್ರ ವಿತರಿಸಿದರು.

ಸಮಾರೋಪ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿದ ಭವರಲಾಲ್ ಆರ್ಯ ಮಾತನಾಡಿ, ಪ್ರತಿಯೊಬ್ಬರೂ ಯೋಗ ಮಾಡಿ ನಿರೋಗಿಯಾಗಬೇಕೆಂಬುದು ಬಾಬಾ ರಾಮದೇವರ ಕನಸಾಗಿದೆ. ತರಬೇತಿ ಪಡೆದ ಪ್ರತಿ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ 10 ಜನಕ್ಕಾದರೂ ಯೋಗ ಶಿಕ್ಷಣವನ್ನ ಹೇಳಿಕೊಡುವುದರ ಮೂಲಕ ಯೋಗದ ವ್ಯಾಪ್ತಿಯನ್ನು ವಿಸ್ತರಿಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗ ಮಾಸ್ತಿ ಕ್ಷೇತ್ರದ ಅಧ್ಯಕ್ಷರು ಹಾಗೂ ಪತಂಜಲಿ ಭಾರತ ಸ್ವಾಭಿಮಾನ ಟ್ರಸ್ಟಿನ ಪ್ರಭಾರಿ ಸತೀಶ್ ಕುಮಾರ್ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಭಟ್ಕಳದ ಯೋಗು ಗುರು ಶ್ರೀ ಗೋವಿಂದ ದೇವಾಡಿಗ ಉಪಸ್ಥಿತರಿದ್ದರು. ಜೊತೆಯಲ್ಲಿ ಪತಂಜಲಿ ತಾಲೂಕು ಪ್ರಭಾರಿ ಶ್ರೀ ದುರ್ಗಾದಾಸ ನಾಯ್ಕ, ಪತಂಜಲಿ ರಾಜ್ಯ ಸಮಿತಿ ಟ್ರಸ್ಟಿಗಳು ಹಾಗೂ ಉತ್ತರ ಕನ್ನಡ ಉಸ್ತುವಾರಿ ರಘುರಾಮ್ ಹೆಗಡೆ, ಉತ್ತರ ಕನ್ನಡ ಜಿಲ್ಲಾ ಪತಂಜಲಿ ಕಿಸಾನ್ ವಿಭಾಗದ ಪ್ರಭಾರಿ, ರಾಜ್ಯ ಪ್ರಮುಖ ನಾಗೇಂದ್ರ ಭಟ್ ಗೋಕರ್ಣ, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಶ್ರೀನಾಥ್ ಗೌಡ, ಭಟ್ಕಳ ತಾಲೂಕು ಪತಂಜಲಿ ಮಹಿಳಾ ಪ್ರಭಾರಿ ಲತಾ ನಾಗರಾಜ್ ನಾಯ್ಕ, ಅತಿಥಿಗಳಾಗಿ ಹೆಸ್ಕಾಂ ಅಭಿಯಂತರ ಶಿವಾನಂದ ನಾಯ್ಕ್ ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಯೋಗಾಸಕ್ತರನ್ನು ಸಂಘಟಿಸಿದ ಶ್ರೀ ಗೋವಿಂದ್ ಗುರೂಜಿ ಅವರನ್ನು, ಶ್ರೀ ನಾಗ ಮಾಸ್ತಿ ಟ್ರಸ್ಟಿನ ಅಧ್ಯಕ್ಷ ಸತೀಶ್ ಕುಮಾರ್‌ರನ್ನು, ಪತಂಜಲಿ ತಾಲೂಕು ಪ್ರಭಾರಿಯಾದ ದುರ್ಗಾ ದಾಸ್ ನಾಯ್ಕ, ಮಹಿಳಾ ಪ್ರಭಾರಿಯಾದ ಲತಾ ನಾಗರಾಜ್ ನಾಯ್ಕ, ನಿರೂಪಕ ನಾರಾಯಣ ನಾಯ್ಕ ಹಾಗೂ ಜವಾಬ್ದಾರಿ ನಿರ್ವಹಿಸಿದ ಪ್ರಮುಖರನ್ನು ಹಾಗೂ ನೂತನ ಪದಾಧಿಕಾರಿಗಳನ್ನು ಗುರುತಿಸಿ ಗೌರವಿಸಲಾಯಿತು.