ಮುಂಡರಗಿ: ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥ. ಆದರೆ ಅದಕಿಂತಲೂ ಹೆಚ್ಚಾಗಿ ಅನುಭಾವ ಸಿದ್ಧಾಂತ ಮುಖ್ಯವಾಗುತ್ತದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.ಶ್ರೀಮಠದ ಸಾಂಸ್ಕೃತಿಕ ವೇದಿಕೆಯಲ್ಲಿ ಸೋಮವಾರ ತಾಲೂಕು ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂಡರಗಿ ಅನ್ನದಾನೀಶ್ವರ ಮಠ ಗುರು- ವಿರಕ್ತರನ್ನು ಒಂದುಗೂಡಿಸಿದ ಮಠ. ಇಲ್ಲಿ ಹಲವು ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಒಗ್ಗೂಡಿಸಿಕೊಂಡು ನಡೆದುಕೊಂಡು ಬಂದಿವೆ. ಜಂಗಮ ಸಮಾಜದಿಂದ ಏನಾದರೂ ಸಹಾಯ- ಸಹಕಾರ ಮಾಡುವುದಾದರೆ ಕೇವಲ ಜಂಗಮ ಸಮಾಜವನ್ನು ಪರಿಗಣಿಸದೆ ಸಮಗ್ರ ವೀರಶೈವ ಸಮಾಜವನ್ನು ಪರಿಗಣಿಸಿ ಮಾಡಬೇಕು ಎಂದರು.

ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಾಷ್ಟ್ರನಾಯಕರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿರುವುದು ವಿಷಾದದ ಸಂಗತಿ. ಅದರಂತೆ ಜಗದ್ಗುರು ರೇಣುಕರು ಒಂದು ಸಮಾಜಕ್ಕೆ ಮಾತ್ರ ಮೀಸಲಾದವರಲ್ಲ. ಅವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಯಾವುದೇ ಜಾತಿ ಭೇದವಿಲ್ಲದೇ ಇಡೀ ಮಾನವ ಕುಲಕ್ಕೆ ಜಯವಾಗಲಿ ಎಂದು ತಿಳಿಸಿದ್ದಾರೆ ಎಂದರು.

ಹಂಪಸಾಗರದ ಕಟ್ಟಿಮನಿ ಹಿರೇಮಠದ ರುದ್ರಮುನಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಪರಸ್ಪರ ಗೌರವ ಅತ್ಯಂತ ಅವಶ್ಯವಾಗಿದೆ. ಇವುಗಳನ್ನೇ ಜಗದ್ಗುರು ರೇಣುಕರು ತಮ್ಮ ಜೀವನದ ಮೂಲಕ ಬೋಧಿಸಿದ್ದಾರೆ ಎಂದರು.

ಡಾ. ಸುಜ್ಞಾನದೇವ ಶಿವಾಚಾರ್ಯರು, ಕಲಕೇರಿಯ ಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು ಮತ್ತು ಅಭಿನವ ಮುದುಕೇಶ್ವರ ಸ್ವಾಮೀಜಿ, ಕುಮಾರಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಅಧ್ಯಕ್ಷತೆ ವಿ.ಜೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಯಶರಣ ಸಲೂಸೆನ್ಸ್‌ನ ಅನ್ನದಾನಿ ಹಿರೇಮಠ, ರಾಜ್ಯ ಪ್ರಶಸ್ತಿ ಪುರಸ್ಕೃತ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ನವಲಿಹಿರೇಮಠ ಸ್ವಾಗತಿಸಿದರು. ಯುವ ಘಟಕದ ಅಧ್ಯಕ್ಷ ವಿನಯಕುಮಾರ ಗಂಧದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಹಂಪಿಮಠ ನಿರೂಪಿಸಿದರು.ಸೋಮವಾರ ಬೆಳಗ್ಗೆ 9.30ಕ್ಕೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿತು. ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮೆರವಣಿಗೆಗೆ ಚಾಲನೆ ನೀಡಿದರು.