ಹೆಣ್ಣುಮಕ್ಕಳು ಓದಿದರೆ ಒಂದು ಶಾಲೆ ತೆರೆದಂತೆ. ಅಕ್ಷರ ಕಲಿತು ಹೆಣ್ಣುಮಕ್ಕಳು ಕುಟುಂಬವನ್ನು ಬಹಳ ಸರಳವಾಗಿ ನಿರ್ವಹಣೆ ಮಾಡುತ್ತಾರೆ

ಕೊಪ್ಪಳ: ಮುದುಕರು ಇಂದು ಅಂಗಳದಲ್ಲಿದ್ದಾರೆ. ಆದರೆ ಯುವಕರು ಮನೆಯಲ್ಲಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ 2025-26 ಸಾಲಿನ ಸಹಪಠ್ಯ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಓದಿದರೆ ಒಂದು ಶಾಲೆ ತೆರೆದಂತೆ. ಅಕ್ಷರ ಕಲಿತು ಹೆಣ್ಣುಮಕ್ಕಳು ಕುಟುಂಬವನ್ನು ಬಹಳ ಸರಳವಾಗಿ ನಿರ್ವಹಣೆ ಮಾಡುತ್ತಾರೆ. ಮಹಿಳೆಯರಿಗೆ ಎಲ್ಲ ರಂಗದಲ್ಲಿ ಪ್ರಾಶಸ್ತ್ಯ ಸಿಕ್ಕರೆ ದೇಶ ಸುಲಭವಾಗಿ ಅಭಿವೃದ್ಧಿ ಆಗುತ್ತದೆ. ಸಮಾನತೆ ಹೆಸರಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ,ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ವಿಶ್ವವಿದ್ಯಾನಿಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಮಹಿಳೆಯರ ಜ್ಞಾನ, ಸಾಮರ್ಥ್ಯ ಮತ್ತು ಧೈರ್ಯ ಸರಿಯಾಗಿ ಬಳಸಿಕೊಳ್ಳಬೇಕು.

ಪ್ರಭುತ್ವವು ಮಹಿಳೆಯರು ಮೌನವಾಗಿರಬೇಕು ಎಂದು ಬಯಸುತ್ತವೆ. ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಬಲೀಕರಣವಾಗಬೇಕು. ಮೊದಲಿಂದಲೂ ಪ್ರಭುತ್ವವು ಮಹಿಳೆಯರಿಗೆ ಅವಕಾಶ ಮತ್ತು ಜಾಗ ಕೊಟ್ಟಿಲ್ಲ.ಆದ್ದರಿಂದ ಅವರು ಕಲೆ,ಸಾಂಸ್ಕೃತಿಕ ಮತ್ತು ವಿಜ್ಞಾನದಿಂದ ದೂರವಾಗಿದ್ದಾರೆ. ಚರಿತ್ರೆ ರೂಪಿಸುವಾಗ ಮಹಿಳೆಯರನ್ನು ಮತ್ತು ಶೂದ್ರರನ್ನು ಹೊರಗೆ ಇಟ್ಟಿದ್ದಾರೆ. ಹೆಣ್ಣನ್ನು ಕೇವಲ ಸೌಂದರ್ಯ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಉನ್ನತ ಶಿಕ್ಷಣವು ವ್ಯಕ್ತಿತ್ವ ರೂಪಿಸುತ್ತವೆ. ಆದ್ದರಿಂದ ಎಲ್ಲರೂ ಉನ್ನತ ಶಿಕ್ಷಣ ಪಡೆಯಿರಿ ಎಂದು ಹೇಳಿದರು.

ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕಿ ಡಾ.ಹುಲಿಗೆಮ್ಮ ಪ್ರಾಸ್ತವಿಕವಾಗಿ ಮಾತನಾಡಿ, 2025-26 ಸಾಲಿನ ಕಾಲೇಜಿನ ಎಲ್ಲ ಘಟಕಗಳ ವಾರ್ಷಿಕ ವರದಿ ಮಂಡಿಸಿದರು. ಸಹ ಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತ ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ವಿದ್ಯಾರ್ಥಿಗಳು ಸರ್ಕಾದ ಸೌಲಭ್ಯ ಬಳಸಿಕೊಳ್ಳಬೇಕು. ಸರ್ಕಾರ ಮತ್ತು ಖಾಸಗಿ ಶಿಷ್ಯವೇತನಗಳ ಕುರಿತು ಮಾಹಿತಿ ನೀಡಿದರು.

ಶಿಕ್ಷಣಪ್ರೇಮಿ ಬಿ.ಜಿ.ಕರಿಗಾರ ಮತ್ತು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ 2024-25 ಸಾಲಿನಲ್ಲಿ ಬಿಎಸ್ಸಿ ಭೌತಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಮುಖ್ಯ ಅಥಿತಿಗಳ ಪರಿಚಯಿಸಿದರು. ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಕ್ರೀಡೆ, ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ಡಾ.ಪ್ರದೀಪ್ ಕುಮಾರ, ಡಾ.ನರಸಿಂಹ, ಶುಭ, ಸುಮಿತ್ರ, ಸುಮಯ್ಯ, ಶರಣಪ್ಪ ಮೂಲಿ, ಶಿವಪ್ರಸಾದ್ ಹಾದಿಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮೂಕಮ್ಮ ಸಂಗಡಿಗರು ಪ್ರಾರ್ಥಿಸಿದರು. ಸಂಗಪ್ಪ ಬ್ಯಾಳಿ ನಿರೂಪಿಸಿದರು. ಡಾ.ಪ್ರಕಾಶ ಹುಲ್ಲೂರು ಸ್ವಾಗತಿಸಿದರು. ರುದ್ರವ್ವ ಹಟ್ಟಿಹೊಳಿ ವಂದಿಸಿದರು.