ಸಾರಾಂಶ
ಈ ಹೇಮಾವತಿ ನಾಲಾ ಅಧುನೀಕರಣ ಕಾಮಗಾರಿಯು ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಅನವಶ್ಯಕವಾಗಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ೩೪ ಕಿಮೀ ಉದ್ದದ ಎಕ್ಸ್ಪ್ರೆಸ್ ಕೆನಾಲ್ ಪೈಪ್ ಲೈನ್ ನನ್ನು ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಉದ್ದೇಶವು ದುರುದ್ದೇಶದಿಂದ ಕೂಡಿದ್ದು, ಈ ಯೋಜನೆಯು ತುಮಕೂರು ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮರಣ ಶಾಸನವಾಗಲಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ ನನ್ನ ವಿರೋಧವಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಮಕೂರು ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರಿನ ಪ್ರಮಾಣ 24.08 ಟಿಎಂಸಿಯಾಗಿದ್ದು, ಇಂದಿನವರೆಗೂ ನಮಗೆ ಸಿಗಬೇಕಾದ ಸಂಪೂರ್ಣ ಪಾಲು ನಮ್ಮ ಜಿಲ್ಲೆಗೆ ಸಿಕ್ಕಿಲ್ಲ ಎಂಬ ಬೇಸರ ನಮಗಿದೆ. 2019ರಲ್ಲಿ ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಡೆ ನೀಡಿ, ಹೇಮಾವತಿ ನಾಲಾ ಆಧುನೀಕರಣ ಯೋಜನೆಗೆ ಟಿಬಿಸಿ 0 ಕಿಮೀಯಿಂದ 70 ಕಿಮೀವರೆಗೂ ಹಾಗೂ 71 ಕಿಮೀಯಿಂದ 165 ಕಿಮೀವರೆಗೂ ಸಾವಿರಾರು ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿಯಾದ ಶ್ರೀ ಬಸವರಾಜ ಬೊಮ್ಮಾಯಿಯವರ ಅಧಿಕಾರದ ಅವಧಿಯಲ್ಲಿ ಹೇಮಾವತಿ ನಾಲಾ ಅಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಯು ಭಾಗಶಃ ಪೂರ್ಣಗೊಂಡಿದೆ ಎಂದು ತಿಳಿಸಿದರು.ಅದರೆ, ಈ ಹೇಮಾವತಿ ನಾಲಾ ಅಧುನೀಕರಣ ಕಾಮಗಾರಿಯು ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಅನವಶ್ಯಕವಾಗಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ೩೪ ಕಿಮೀ ಉದ್ದದ ಎಕ್ಸ್ಪ್ರೆಸ್ ಕೆನಾಲ್ ಪೈಪ್ ಲೈನ್ ನನ್ನು ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಉದ್ದೇಶವು ದುರುದ್ದೇಶದಿಂದ ಕೂಡಿದ್ದು, ಈ ಯೋಜನೆಯು ತುಮಕೂರು ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮರಣ ಶಾಸನವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲು ನಾವು ಬಿಡುವುದಿಲ್ಲ. ತುಮಕೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ, ಮಾಜಿ ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘಟನೆಗಳ, ಹೋರಾಟಗಾರರ ಹಾಗೂ ನಾಗರಿಕ ವೇದಿಕೆಗಳ ಪಕ್ಷಾತೀತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗುವುದು ನಮ್ಮ ಕರ್ತವ್ಯವಾಗಿರುತ್ತದೆ. ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ನನ್ನ ವಿರೋಧವಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.