ಸಾರಾಂಶ
ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು. ಹಳಕಟ್ಟಿ ಅವರ ತ್ಯಾಗ, ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯವಾದುದು ಎಂದು ಬಿವಿವಿಎಸ್ ಅಕ್ಕನ ಬಳಗದ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಭದ್ರಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು. ಹಳಕಟ್ಟಿ ಅವರ ತ್ಯಾಗ, ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯವಾದುದು ಎಂದು ಬಿವಿವಿಎಸ್ ಅಕ್ಕನ ಬಳಗದ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಭದ್ರಶೆಟ್ಟಿ ಹೇಳಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹೀಳಾ ವೇದಿಕೆ ಮತ್ತು ಬಸವೇಶ್ವರ ಬಾಲಕಿಯರ ಪ್ರೌಢಶಾಲೆ ಸಹಯೋಗದಲ್ಲಿ ವಚನ ಸಂಶೋಧನಾ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ 144ನೆಯ ಜನ್ಮದಿನೋತ್ಸವ, ವಚನ ಸಾಹಿತ್ಯ ಸಂರಕ್ಷಣೆ ದಿನದ ಅಂಗವಾಗಿ ಲಿಂ.ವೀರಪ್ಪ ಮತ್ತು ಲಿಂ.ಮಲ್ಲವ್ವ ಡಂಬಳ ಹಾಗೂ ಲಿಂ.ಶಿವಬಸಪ್ಪ ಮತ್ತು ಲಿಂ.ಈರಮ್ಮ ಅಳ್ಳಿಮಟ್ಟಿ ಬಾಗಲಕೋಟೆ ಇವರ ಸ್ಮರಣಾರ್ಥ ಬಸವೇಶ್ವರ ಬಾಲಕಿಯ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿ ಮಾತನಾಡಿದರು.
ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿಗಳನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಗ್ರಂಥ ರೂಪದಲ್ಲಿ ಓದಲು ಅನನುಕೂಲವಾಗುವಂತೆ ಮುದ್ರಿಸಿದ ಫ.ಗು. ಹಳಕಟ್ಟಿಯವರ ಕಾರ್ಯದಿಂದ ಇಂದು ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ, ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಸಂದೇಶಗಳು, ವಿಶ್ವಶಾಂತಿ, ವಿಶ್ವಪ್ರೇಮ ಮೂಡಿಸುತ್ತವೆ. ವಚನ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕೆ ಮನೆ ಮನೆಗಳಿಗೆ ತೆರಳಿ ಬೇಡಿದ ಅವರ ತ್ಯಾಗ ಅರ್ಪಣಾ ಮನೋಭಾವ ಶ್ಲಾಘನೀಯ. ವಚನಗಳ ಸಂರಕ್ಷಣೆ ಹಾಗೂ ಮುದ್ರಣಕ್ಕೆ ಜೀವನವನ್ನೇ ಮುಡಿಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯಿಂದ ವಚನ ಸಾಹಿತ್ಯದ ಪಿತಾಮಹ ಎಂದು ಗುರುತಿಸುವಂತೆ ಮಾಡಿದೆ ಎಂದರು.ಕದಳಿ ವೇದಿಕೆ ಅಧ್ಯಕ್ಷೆ ಎಸ್.ಎಚ್. ಶೆಟ್ಟರ ಮಾತನಾಡಿ, ಇಂದಿನ ಯವಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಪ್ರೌಢಶಾಲೆ ಮುಖ್ಯಶಿಕ್ಷಕ ದಯಾನಂದ ಸಿಕ್ಕೇರಿ ವಹಸಿದ್ದರು. ಮುಖ್ಯ ಅತಿಥಿ, ದಾನಿಗಳಾದ ನಿವೃತ್ತ ಶಿಕ್ಷಕ ಈರಣ್ಣ ಅಳ್ಳಿಮಟ್ಟ, ಜಿ.ಶ.ಸಾ. ಪರಿಷತ್ ಅಧ್ಯಕ್ಷ ಎ.ಎಸ್. ಪಾವಟೆ, ಎನ್.ಎಸ್. ಖೋತ ಸೇರಿದಂತೆ ಅನೇಕರು ಇದ್ದರು.