ಲಕ್ಷ್ಮೇಶ್ವರ: ವಿದ್ಯಾರ್ಥಿ ಜೀವನ ವಿದ್ಯಾರ್ಜನೆಯ ಮಹತ್ವಪೂರ್ಣ ಘಟ್ಟವಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು. ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಛಲ ಎಲ್ಲರಲ್ಲಿ ಬರಬೇಕು ಎಂದು ಪಿಎಸ್ಐ ನಾಗರಾಜ ಗಡಾದ ಹೇಳಿದರು.
ಶನಿವಾರ ಪಟ್ಟಣದ ಪುರಸಭೆ ಪದವಿಪೂರ್ವ ಮಹಾವಿದ್ಯಾಲಯದ ೨೦೨೬- ೨೭ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಪಡೆಯುವತ್ತ ನಮ್ಮ ಗಮನ ಇರಬೇಕು. ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸು ಛಲ ಇದ್ದಲ್ಲಿ ಸಾಧನೆ ಅಸಾಧ್ಯವೇನಲ್ಲ. ಸಾಧನೆ ಎನ್ನುವುದು ಸಾಧಕರ ಸ್ವತ್ತೆ ಹೊರತು ಸಾಮಾನ್ಯರ ಸ್ವತ್ತಲ್ಲ. ನೀವು ವಿದ್ಯಾವಂತರಾಗಬೇಕು ಎನ್ನುವ ಉದ್ದೇಶದಿಂದ ತಂದೆ, ತಾಯಿ ಯವರು ಕಷ್ಟಪಟ್ಟು ತಮ್ಮ ಶ್ರಮ ಮರೆತು ಹಣ ಕೂಡಿಟ್ಟು ವಿದ್ಯಾರ್ಜನೆ ಮಾಡಿಸುತ್ತಾರೆ. ತಂದೆ- ತಾಯಿಯವರಿಗೆ ಸಂತೋಷ ತರುವಂತಹ ಮಕ್ಕಳಾಗಬೇಕು ಎಂದರು.
ಪ್ರಾಚಾರ್ಯ ಎ.ವೈ. ಕಳ್ಳಿಮನಿ ಮಾತನಾಡಿ, ಪಟ್ಟಣದ ಪುರಸಭೆ ಪಪೂ ಕಾಲೇಜು ಸುಮಾರು ೭೬ ವರ್ಷಗಳ ಭವ್ಯ ಇತಿಹಾಸ ಹೊಂದಿದ್ದು, ಇಲ್ಲಿ ಕಲಿತ ಅನೇಕರು ದೇಶ- ವಿದೇಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಇಲ್ಲಿ ದೊರೆಯುವ ಶಿಕ್ಷಣದಿಂದ ಉತ್ತಮ ಮೂರ್ತಿಗಳಾಗಿ ಹೊರಹೊಮ್ಮುವ ಭರವಸೆ ಇದೆ ಎಂದರು.ಸಭೆಯ ಉಪನ್ಯಾಸಕರಾದ ಎಸ್.ಜಿ. ಹುಳಕನವರ, ಮಂಜುನಾಥ ಬೂದಿಹಾಳ, ಎಚ್.ಎಲ್. ಕೋರಿ, ಎಂ.ಎಲ್. ಬೋದ್ಲೆಖಾನ್, ಎಫ್.ಎಂ. ಚಕಾರದ, ಪಿ.ಡಿ. ದೇಶಪಾಂಡೆ, ಎಫ್.ಜಿ. ಕರೆಪ್ಪಗೌಡ್ರ, ಜಿ.ಪಿ. ಹಿರೇಮಠ, ಐ.ಎಂ. ಸಿಂಗಟಾಲೂರ, ಡಿ.ಎಂ. ಪೂಜಾರ, ಬಿ.ಜೆ. ಪಾಟೀಲ, ಎಂ.ಆರ್. ಬನ್ನಿಕೊಪ್ಪ ಮುಂತಾದವರಿದ್ದರು.
ಈ ವೇಳೆ ೨೦೨೫- ೨೬ರ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ನೀಲಪ್ಪ ಗೊರವರ, ಯಶವಂತ ಸೂರಣಗಿ, ಅನ್ನಪೂರ್ಣ ದುರ್ಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ನೂತನ ಸಂಸತ್ತನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಾದ ನಾಗವೇಣಿ ಶರಸೂರಿ, ನಾಗಲಕ್ಷ್ಮೀ ಪಾಟೀಲ, ಪವಿತ್ರಾ ಕಿಳ್ಳಿಕ್ಯಾತರ ಕಾರ್ಯಕ್ರಮ ನಿರೂಪಿಸಿದರು.