ಸಾರಾಂಶ
ಧಾರವಾಡ: ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನ ಹರಿಸಬೇಕು. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಬಿ. ವಾಲಿಕಾರ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಮತ್ತು ಪಾವಟೆ ಇನ್ಸಿಟಿಟ್ಯೂಟ್ ಆಫ್ ಮೆತ್ಯಾಮೇಟಿಕಲ್ ಸೈನ್ಸ್ ಸಹಯೋಗದಲ್ಲಿ ಸೆನೆಟ್ ಸಭಾಂಗಣದಲ್ಲಿ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಮೂರು ದಿನಗಳ ನೆಟ್, ಗೇಟ್ ಮತ್ತು ಕೆ-ಸೆಟ್ ಪರೀಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವರ್ಷ ಕನಿಷ್ಠ ಹತ್ತು ವಿದ್ಯಾರ್ಥಿಗಳು ಜೆ.ಆರ್.ಎಫ್.ಪರೀಕ್ಷೆ ಉತ್ತೀರ್ಣರಾಗುವಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಗಣಿತ, ವಿಜ್ಞಾನ ವಿಭಾಗ ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ವಿಷಯದ ಕುರಿತು ಆಳವಾಗಿ ಅಧ್ಯಯನ ಮಾಡುವುದು, ಅಧ್ಯಯನದಲ್ಲಿ ಮತ್ತು ಗಣಿತತಾತ್ಮಕ ವಿಷಯಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಮತ್ತು ಹೊಸ ಆವಿಷ್ಕಾರಗಳನ್ನು ರೂಪಿಸುವಲ್ಲಿ ತೊಡಗಿಸಿಕೊಳ್ಳಿ.ನಿರ್ದಿಷ್ಟ ಯೋಜನೆ ಮೂಲಕ ಅಧ್ಯಯನ ಮಾಡಿ ಎಂದರು.
ತುಮಕೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ.ಬೋರೇಗೌಡ ಎಚ್.ಎಸ್.ಮಾತನಾಡಿ, ವಿಷಯದ ಕುರಿತು ಆಳವಾದ ಜ್ಞಾನ,ಸಂವಹನ ಕೌಶಲ್ಯ ಮೈಗೂಡಿಸಿಕೊಳ್ಳಿ. ವಿದ್ಯಾರ್ಥಿ ದೆಸೆಯಿಂದಲೇ ಎಲ್ಲ ರೀತಿಯ ತಾಂತ್ರಿಕ ಕೌಶಲ್ಯ ಕಲಿಯಿರಿ. ಗಣಿತ ವಿಜ್ಞಾನದಲ್ಲಿ ವಿಫುಲವಾದ ಅವಕಾಶಗಳಿವೆ ಎಂದರು.ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಆರ್.ಎಲ್. ಹೈದರಾಬಾದ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಸಿ.ಶಿರಾಳಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಮೂರು ದಿನಗಳ ಕಾಲ ವಿವಿಧ ವಿಷಯ ತಜ್ಞರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರೊ.ಎಚ್.ಎಸ್. ರಾಮನೆ, ಪ್ರೊ. ಪಿ.ಜಿ. ಪಾಟೀಲ, ಪ್ರೊ. ಆರ್.ಎಸ್. ದ್ಯಾವನಾಳ, ಪ್ರೊ. ಆಶಾ ಎಸ್.ಕೆ. ಸೇರಿದಂತೆ ವಿವಿ ಮತ್ತು ಕರ್ನಾಟಕ ವಿಜ್ಞಾನ ಕಾಲೇಜಿ ಮತ್ತು ವಿವಿಧ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.