ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು,ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಈಡಾಗದೇ ಏಕಾಗ್ರತೆ ಆತ್ಮವಿಶ್ವಾಸದಿಂದ ಶಾಂತ ಚಿತ್ತರಾಗಿ ಉತ್ತರ ಬರೆದು ಯಶಸ್ಸು ಸಾಧಿಸಿ ಎಂದು ಶಾಸಕ ಕೆ.ಎನ್.ರಾಜಣ್ಣ ಸಲಹೆ ನೀಡಿದರು.

ಕನ್ನಡಪ್ರಭವಾರ್ತೆ,ಮಧುಗಿರಿ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು,ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಈಡಾಗದೇ ಏಕಾಗ್ರತೆ ಆತ್ಮವಿಶ್ವಾಸದಿಂದ ಶಾಂತ ಚಿತ್ತರಾಗಿ ಉತ್ತರ ಬರೆದು ಯಶಸ್ಸು ಸಾಧಿಸಿ ಎಂದು ಶಾಸಕ ಕೆ.ಎನ್.ರಾಜಣ್ಣ ಸಲಹೆ ನೀಡಿದರು.

ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ತಿಪ್ಪಾಪುರ,ದಾಗೊಂಡನಹಳ್ಳಿ,ಯರಗುಂಟೆ,ಗರಣಿ,ಹಳೇ ಗೊಲ್ಲರಹಟ್ಟಿ,ದಾಸಪ್ಪನಪಾಳ್ಯ ಬ್ರಹ್ಮಸಮುದ್ರ ಹಲವು ಗ್ರಾಮಗಳಲ್ಲಿ 8 ಕೋಟಿ ರು.ವೆಚ್ಚದ ಗ್ರಾಮೀಣ ರಸ್ತೆ ಅಭಿವೃದ್ಧಿ ಹಾಗೂ 1 ಕೋಟಿ ರು.ವೆಚ್ಚದ ಶಾಲಾ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾರ್ಯಕ್ಕೆ ಕೆಲವು ಅಡಚಣೆಗಳಿದ್ದು, ಅವುಗಳ ನಿವಾರಣೆ ಮಾಡಬೇಕೆಂದು ಕೇಂದ್ರ ಜಲ ಶಕ್ತಿ ಸಚಿವ ವಿ.ಸೋಮಣ್ಣರನ್ನು ದೆಹಲಿಯಲ್ಲಿ ಖುದ್ದು ಬೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅದೇ ರೀತಿ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರ ಜೊತೆ ಚರ್ಚಿಸಿ ರೋಪ್ ವೇಗೆ ತೊಡಕಾಗಿರುವುದನ್ನು ನಿವಾರಣೆ ಮಾಡಿಕೊಡಲಿದ್ದು,ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಬಲ ಬಂದಂತಾಗಿದೆ ಎಂದರು.

ಸರ್ಕಾರಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲ ಸವಲತ್ತುಗಳನ್ನು ಒದಗಿಸಿದ್ದು, ಒಂದು ಮಗುವು ಸಹ ಶಿಕ್ಷಣದಿಂದ ತಾಲೂಕಿನಲ್ಲಿ ವಂಚಿತವಾಗ ಬಾರದು. ಮಕ್ಕಳನ್ನು ವೈಯಕ್ತಿಕ ಮನೆಗೆಲಸಕ್ಕೆ ಇಟ್ಟರೆ ಅಂತಹ ಪೋಷಕರನ್ನು ಕಾನೂನಿಗೆ ಗುರಿ ಪಡಿಸಲಾಗುವುದು.ಇದರ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಗೊಲ್ಲರಹಟ್ಟಿ ಸೇರಿ ಎಲ್ಲರಿಗೂ ಡಿಸಿಸಿ ಬ್ಯಾಂಕ್‌ ನಿಂದ ಕುರಿ, ಹಸು ಇತರೆ ಹೈನುಗಾರಿಕೆ ಸಾಕಿ ಆರ್ಥಿಕವಾಗಿ ಸದೃಢರಾಗಿ ಜೀವನ ಮಟ್ಟ ಸುಧಾರಣೆಗೆ ಸಾಲ ಸೌಲಭ್ಯ ನೀಡಲಾಗುವುದು. ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲೆಲ್ಲಿ ಸಾರಿಗೆ ಬಸ್‌ ತೊಂದರೆ ಇದೆ ಆ ಗ್ರಾಮಗಳಿಗೆ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ರಾಜಣ್ಣ ಭರವಸೆ ನೀಡಿದರು.

ಜಿಪಂ ಮಾಜಿ ಅದ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜಣ್ಣನವರು ಯಾವ ದಾರಿಯಲ್ಲಿ ಸಾಗುತ್ತಾರೋ ಅದೇ ದಾರಿಯಲ್ಲಿ ಸಾಗಬೇಕು. ನಾವೆಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ಡಿಡಿಪಿಐ ಮಾಧವರೆಡ್ಡಿ, ಬಿಇಒ ಹನುಮಂತರಾಯಪ್ಪ, ಕಿರು ತೆರೆ ನಿರ್ಮಾಪಕ ರವಿ ಆರ್.ಗರಣಿ, ತಾಪಂ.ರೊಓ ಲತ್ಕ್ಷ್ಮಣ್,ಎಡಿ ಧನಂಜಯ್,ತಾಪಂ ಮಾಜಿ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ತುಂಗೋಟಿ ರಾಮಣ್ಣ,ಪಿ.ಟಿ.ಗೋವಿಂದಯ್ಯ,ಸಿದ್ದಾಪುರ ರಂಗಶ್ಯಾಮಯ್ಯ,ತಾಪಂ ಮಾಜಿ ಸದಸ್ಯ ಗರಣಿರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಗುತ್ತಿಗೆದಾರರಾದ ಶಿವಾನಂದ,ಮಾರುತಿ,ರಾಜ್ ಗೋಪಾಲ್, ಸತೀಶ್, ಸಾಧಿಕ್ ಇತರರಿದ್ದರು.