ನರಗುಂದ: ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಲು ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ತಿಳಿಸಿದರು.

ಪಟ್ಟಣದ ಜ್ಞಾನಮುದ್ರಾ ಪಬ್ಲಿಕ್ ಶಾಲೆಯಲ್ಲಿ 3 ದಿನ ನಡೆದ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಆತ್ಮವಿಶ್ವಾಸ ಮತ್ತು ನಿರ್ಭಯದಿಂದ ಪರೀಕ್ಷೆ ಎದುರಿಸಿ ನಿಮ್ಮ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಿ ಶಾಲೆ, ತಾಲೂಕಿಗೆ ಮತ್ತು ತಂದೆ- ತಾಯಿಗಳಿಗೆ ಶ್ರೇಯಸ್ಸನ್ನು ತಂದುಕೊಡಬೇಕೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ ಮಾತನಾಡಿ, ವರ್ಷಪೂರ್ತಿ ಅಭ್ಯಾಸ ಮಾಡಿ ಓದಿದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗಲೆಂದು ಕಾರ್ಯಾಗಾರ ಏರ್ಪಡಿಸಲಾಗಿದೆ. ಕಾರ್ಯಗಾರದ ಮುಖ್ಯ ಉದ್ದೇಶ ಎಂದರೆ ವಾರ್ಷಿಕ ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಧೈರ್ಯ ತುಂಬುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜ್ಞಾನಮುದ್ರಾ ಪಬ್ಲಿಕ್ ಶಾಲೆಯ ಅಧ್ಯಕ್ಷ ವಿ.ಜಿ. ಮಮಟಗೇರಿ, ಉಪಾಧ್ಯಕ್ಷ ಸಿ.ಎನ್. ಮಂಟೂರ, ಕಾರ್ಯದರ್ಶಿ ಎ.ಸಿ. ವಿರಕ್ತಮಠ, ಶಿವಪ್ರಕಾಶ ಹೊಸಕೇರಿಮಠ, ಮಂಜುನಾಥ ನಾಯಕ, ಪ್ರಾಚಾರ್ಯೆ ದೀಪಾ ಕುಲಕರ್ಣಿ, ಜಿ.ಎನ್. ದೊಡ್ಡಲಿಂಗಪ್ಪನವರ, ಎಂ.ಎಸ್. ಕುರಿ, ಬಿ.ಆರ್. ರಾಯನಗೌಡ್ರ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಲ್. ಮರಿಗೌಡ್ರ, ಪಿ.ಸಿ. ಕಲಹಾಳ, ತಾಲೂಕಿನ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.