ರಾಸಾಯನಿಕ ಮಿಶ್ರಿತ ನೀರು, ತಾಜ್ಯ ಎಲ್ಲೆಂದರಲ್ಲಿ ಹಾಕುತ್ತಿರುವ ಕಾರ್ಖಾನೆಗಳು

| Published : Jun 02 2025, 11:49 PM IST

ರಾಸಾಯನಿಕ ಮಿಶ್ರಿತ ನೀರು, ತಾಜ್ಯ ಎಲ್ಲೆಂದರಲ್ಲಿ ಹಾಕುತ್ತಿರುವ ಕಾರ್ಖಾನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ರಾಸಾಯನಿಕ ಮಿಶ್ರಿತ ನೀರು ಹಾಗೂ ತಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿರುವ ಮದ್ದೂರು ತಾಲೂಕಿನ ಸೋಮನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಗೆ ಪಂಚಾಯ್ತಿ ಆಡಳಿತ ಮಂಡಳಿ ತೀರ್ಮಾನದಂತೆ ನೋಟಿಸ್ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಸಾಯನಿಕ ಮಿಶ್ರಿತ ನೀರು ಹಾಗೂ ತಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿರುವ ತಾಲೂಕಿನ ಸೋಮನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಗೆ ಪಂಚಾಯ್ತಿ ಆಡಳಿತ ಮಂಡಳಿ ತೀರ್ಮಾನದಂತೆ ನೋಟಿಸ್ ನೀಡಲಾಗಿದೆ ಎಂದು ಗ್ರಾಪಂ ಅಧಿಕಾರಿ ಶುಂಭುಲಿಂಗಯ್ಯ ತಿಳಿಸಿದರು.

ಸೋಮವಾರ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಶ್ರೀಸಾಯಿ ಇಂಡಸ್ಟ್ರೀಯಲ್ಸ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದರು. ಶ್ರೀಸಾಯಿ ಇಂಡಸ್ಟ್ರೀಯಲ್ಸ್, ಆರ್ಕಮ್ ಆರ್ಗ್ಯಾನಿಕ್ಸ್ ಬೆಂಗಳೂರು ಪ್ರವೈಟ್ ಲಿಮಿಟೆಡ್, ಮಂಜುನಾಥ ಇಂಡಸ್ಟ್ರೀಯಲ್ಸ್ ಹಾಗೂ ಬಾಲಾಜಿ ಪೇಪರ್ ಮಾರ್ಟ್ ಕಾರ್ಖಾನೆಗಳು ರಾಸಾಯಾನಿಕ ಮಿಶ್ರಿತ ನೀರನ್ನು ಶುದ್ಧೀಕರಣ ಮಾಡದೆ ಹೊರಗಡೆ ಬಿಡುತ್ತಿದ್ದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎಂಬ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದರು.

ಕಾರ್ಖಾನೆ ಕೆಮಿಕಲ್ ಮಿಶ್ರಿತ ನೀರನ್ನು ಹೇಗೆ ಶುದ್ಧೀಕರಣ ಮಾಡುತ್ತಿದ್ದೀರಿ, ಎಲ್ಲಿಗೆ ಹರಿಸುತ್ತಿದ್ದೀರಿ ಮತ್ತು ತ್ಯಾಜ್ಯ ವಸ್ತುಗಳನ್ನು ಎಲ್ಲಿಗೆ ಹಾಕುತ್ತಿದ್ದೀರಿ ಎಂಬ ಬಗ್ಗೆ ನೋಟಿಸ್ ಜಾರಿಗೆ ಮಾಡಿದ್ದು, ಇನ್ನು 3 ದಿನಗಳಲ್ಲಿ ನೋಟಿಸ್‌ಗೆ ಉತ್ತರ ನೀಡದೆ ಹೋದರೆ ಅಂತಹ ಕಾರ್ಖಾನೆ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಿರೀಶ್ ಗಾರ್ಮೆಂಟ್ಸ್ ಕಾರ್ಖಾನೆ ಆಡಳಿತ ಮಂಡಳಿಯವರು ಪೈಪ್ ಲೈನ್ ಮೂಲಕ ಕಲುಷಿತ ನೀರನ್ನು ನಾಲೆಗೆ ಹರಿಸಿದ್ದು, ಇದರಿಂದ ಈ ಭಾಗದ ಜನರಿಗೆ ರೋಗ ರುಜೀನದ ಆತಂಕ ಉಂಟಾಗಿದೆ. ಆದ್ದರಿಂದ ಇವರಿಗೂ ನೋಟಿಸ್ ನೀಡಲಾಗುವುದು ಎಂದರು.

ಹಲವು ಕಾರ್ಖಾನೆಗಳು ಪಂಚಾಯ್ತಿಗೆ ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲ. ಪರವಾನಿಗೆ ನವೀಕರಣ ಮಾಡಿಲ್ಲ. ಕಲುಷಿತ ನೀರನ್ನು ಎಲ್ಲಿಗೆ ಹರಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಅದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲ ತಿಂಗಳ ಹಿಂದೆ ಸೋಮನಹಳ್ಳಿ ಬಳಿ ಕುರಿ ಕಾಯುತ್ತಿದ್ದ ರೈತ ಪ್ರಕಾಶ್ ಕಾಲಿಗೆ ತೀವ್ರ ಗಾಯವಾಗಿ ಮೈಸೂರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೇ, ಕೆಮಿಕಲ್ ಮಿಶ್ರಿತ ನೀರು ಕುಡಿದು 23 ಕುರಿಗಳು ಸಾವನ್ನಪ್ಪಿವೆ. ಕೆಮಿಕಲ್ ಮಿಶ್ರಿತ ನೀರನ್ನು ಚರಂಡಿ ಹಾಗೂ ನಾಲೆಗಳಲ್ಲಿ ಬಿಡುತ್ತಿರುವುದು, ಎಲ್ಲೆಂದರಲ್ಲಿ ತ್ಯಾಜ್ಯ ಹಾಕುತ್ತಿದ್ದು, ಪಂಚಾಯ್ತಿ ವ್ಯಾಪ್ತಿಯ ಜನರಿಗೆ ರೋಗಗಳು, ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಗ್ರಾಪಂ ಸದಸ್ಯ ತೈಲೂರು ಸ್ವಾಮಿ, ಕರ ವಸೂಲಿಗಾರ ಶಿವರಾಮ್ ಇತರರು ಇದ್ದರು.