ಮಕ್ಕಳಿಗಾಗಿ ಸಂಪತ್ತನ್ನು ಕ್ರೋಡೀಕರಿಸುವ ಪಾಲಕರು, ಗಳಿಸಿ ಬಿಟ್ಟು ಹೋಗುವ ಸಂಪತ್ತನ್ನು ಯಾವ ರೀತಿಯಲ್ಲಿ ಸದ್ವಿನಿಯೋಗಿಸಬೇಕು

ಹಗರಿಬೊಮ್ಮನಹಳ್ಳಿ: ನಮ್ಮ ದೇಶವು ಆಚಾರ, ಸದ್ಗುಣ, ವಿಚಾರಗಳ ಬೀಡಾಗಿದೆ. ಶತಮಾನಗಳ ಪರಕೀಯರ ಆಳ್ವಿಕೆಯ ನಂತರವೂ ಇಲ್ಲಿನ ಮೂಲ ಸಂಸ್ಕೃತಿಗೆ ಧಕ್ಕೆ ಬಂದಿಲ್ಲ. ಇದಕ್ಕೆ ಕಾರಣವಾದ ಹಬ್ಬ, ಜಾತ್ರೆಗಳು ಪರಸ್ಪರರಲ್ಲಿ ಭಾವೈಕ್ಯತೆ ಬೆಳೆಸುವ ಕೊಂಡಿಯಾಗಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀ ಪ್ರತಿಪಾದಿಸಿದರು.

ತಾಲೂಕಿನ ಬನ್ನಿಗೋಳು ಗ್ರಾಮದ ಐತಿಹಾಸಿಕ ಆಂಜನೇಯ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಮಕ್ಕಳಿಗಾಗಿ ಸಂಪತ್ತನ್ನು ಕ್ರೋಡೀಕರಿಸುವ ಪಾಲಕರು, ಗಳಿಸಿ ಬಿಟ್ಟು ಹೋಗುವ ಸಂಪತ್ತನ್ನು ಯಾವ ರೀತಿಯಲ್ಲಿ ಸದ್ವಿನಿಯೋಗಿಸಬೇಕು ಎಂಬ ಸಂಸ್ಕೃತಿಯನ್ನು ಮಕ್ಕಳಲ್ಲಿ ಬಿತ್ತಿ ಅವರನ್ನು ಧಾರ್ಮಿಕವಾಗಿ ಶ್ರೀಮಂತರಾಗಿಸಬೇಕು ಎಂದು ಸಲಹೆ ನೀಡಿದರು.

ನಂದೀಪುರದ ಡಾ.ಮಹೇಶ್ವರ ಶ್ರೀಗಳು ಮಾತನಾಡಿ, ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಹಬ್ಬಗಳು ಕೇವಲ ಆಚರಣೆಗಳಲ್ಲ. ಬದಲಿಗೆ ಸಮಾಜದಲ್ಲಿ ಸಹೋದರತೆ ಏಕತೆ ಮತ್ತು ಸಾಂಸ್ಕೃತಿಕ ಮನೋಭಾವ ಬೆಳೆಸಲು ಸಹಾಯಕ. ಜಾತ್ರೆಗಳು, ಪ್ರತಿಯೊಬ್ಬರ ಧಾರ್ಮಿಕ ನಂಬುಗೆಗಳು ಮತ್ತು ಆಧ್ಯಾತಿಕ ಉನ್ನತಿಗೆ ಪೂರಕವಾಗಿವೆ ಎಂದರು.

ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀಗಳು, ಕಡ್ಲಬಾಳು ಶಾಖಾ ಗವಿಮಠದ ಮರಿ ಶಾಂತವೀರ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.

ಮೂಲಿಮನಿ ರವಿಪ್ರಸಾದ್, ಹ್ಯಾಟಿ ಆನಂದರೆಡ್ಡಿ, ಮೈನಳ್ಳಿ ಕೊಟ್ರೇಶಪ್ಪ, ಶಿಕ್ಷಕ ವೆಂಕರೆಡ್ಡಿ, ಎಸ್.ಬಸವರೆಡ್ಡಿ, ಮಡಿವಾಳರ ಹನಮಂತಪ್ಪ. ನಂದೆಪ್ಪನವರ ಸುರೇಶ್ ಮತ್ತು ಗ್ರಾಮದ ನೂರಾರು ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನಿವೃತ್ತ ಮುಖ್ಯಗುರು ಹುಗ್ಗಿ ಕೊಟ್ರೇಶ್ ಪ್ರಾರ್ಥಿಸಿದರು. ಗುಡ್ಡದ ಮೋಹನರೆಡ್ಡಿ ಸ್ವಾಗತಿಸಿದರು. ಡಾ.ಅಂಜಿನಪ್ಪ ಗಡಾದ ವಂದಿಸಿದರು.