ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಂಗೀತ ಮನುಷ್ಯನ ಮನಸನ್ನು ಅರಳಿಸುತ್ತದೆ. ಸಂಗೀತವು ರೋಗ ಮುಕ್ತರಾಗಿ ಮಾಡಬಲ್ಲ ಸಂಜಿವೀನಿಯಾಗಿದೆ. ಹೀಗಾಗಿ ನಮ್ಮ ಗ್ರಾಮೀಣ ಜನಪದ ಸಂಗೀತ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೇಷನ್ ಮುಖ್ಯಸ್ಥ ಸಿ.ಬಿ.ಅಸ್ಕಿ ಹೇಳಿದರು.ಪಟ್ಟಣದ ಶ್ರೀ ಬನಶಂಕರಿ ಜಾತ್ರಾ ಮಹೋತ್ಸವದ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಿರುತೆರೆ ಹಾಸ್ಯ ಕಲಾವಿದ ಗೋಪಾಲ ಹೂಗಾರ ನೇತೃತ್ವದ ಇಂಚರ ಮೇಲೋಡಿಸ್ ತಂಡದಿಂದ ಹಾಸ್ಯ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯದ ನಾಡು ಭಾರತ. ಅಸಂಖ್ಯಾತ ಜಾತ್ರೆಗಳು ಮತ್ತು ಹಬ್ಬಗಳಿಗೆ ಹೆಸರುವಾಸಿಯಾಗಿರುವ ದೇಶವಾಗಿದೆ. ಜಾತ್ರೆಗಳು ಮತ್ತು ಉತ್ಸವಗಳು ದೇಶದ ಸಂಸ್ಕೃತಿ ಪ್ರತಿಬಿಂಬಿಸುತ್ತವೆ. ಅಲ್ಲದೇ ಸಂಬಂಧಗಳನ್ನು ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಇಲ್ಲಿನ ಜಾತ್ರೆ ಮತ್ತು ಉತ್ಸವಗಳನ್ನು ಆನಂದಿಸಲೆಂದೇ ಅನೇಕ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. ಇದು ಜನರ ನಿಜವಾದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಹಬ್ಬಗಳು ಮತ್ತು ಜಾತ್ರೆಗಳು ಭಾರತದ ಸಂಸ್ಕೃತಿಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಇವು ಜನಜೀವನದ ಅವಿಭಾಜ್ಯ ಅಂಗವಾಗಿವೆ. ದೂರದಲ್ಲಿರುವ ಕುಟುಂಬದವರು ಜಾತ್ರೆಗಳಲ್ಲಿ ತವರೂರಿಗೆ ಬಂದು ಸಡಗರದಿಂದ ಆಚರಿಸುವ ಬಗೆ ಮಾತ್ರ ಎಲ್ಲಿಲ್ಲದ ಸಂತಸಕ್ಕೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.
ಇಂದು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದ ನಿಜವಾದ ನಮ್ಮ ದೇಶಿಯ ಸಂಸ್ಕೃತಿ, ಪರಂಪರೆ, ಸಂಗೀತ ಕೇಳುವುದು ಕಡಿಮೆಯಾಗಿದೆ. ಜೊತೆಗೆ ನಿತ್ಯ ತಮ್ಮ ದೈನಂದಿನ ಒತ್ತಡದ ಬದುಕಿನಲ್ಲಿ ಸಂಸಾರದ ಜಂಜಾಟದಲ್ಲಿ ನಗುವನ್ನು ಮರೆತು ಬಿಟ್ಟಿದ್ದೇವೆ ಎಂದ ಅವರು, ಮನುಷ್ಯ ತಾವು ಎಷ್ಟೇ ಗಳಿಸಲಿ. ತಾನು ದುಡಿದ ಒಂದು ಭಾಗವನ್ನು ದಾನ ಧರ್ಮಕ್ಕೆ ಖರ್ಚು ಮಾಡಿ ಸುಖಕರವಾದ ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಇದಕ್ಕೆ ಜಾತ್ರೆಗಳು ಮತ್ತು ಹಬ್ಬಗಳು ಪೂರಕವಾಗಿವೆ ಎಂದು ವಿವರಿಸಿದರು.ಸದ್ಯ ನೂರಾರು ವರ್ಷಗಳಿಂದ ಪಟ್ಟಣದ ಬನಶಂಕರಿ ದೇವಿ ಜಾತ್ರಾ ಮಹೋತ್ಸವನ್ನು ಆಚರಿಸಿಕೊಂಡು ಬರುತ್ತಿರುವುದು ಸಾಮಾನ್ಯದ ಸಂಗತಿ. ಆದರೆ, ಪ್ರತಿ ವರ್ಷವೂ ವಿವಿಧ ಸ್ಪರ್ಧೆಗಳನ್ನು ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾತ್ರೆಗೆ ಬರುವ ಭಕ್ತರಿಗೆ ಮನರಂಜನೆ ನೀಡಿ ಆಕರ್ಷಿಸುವಂತೆ ಮಾಡುತ್ತಿರುವ ಜಾತ್ರಾ ಕಮೀಟಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ವೇಳೆ ಜಾತ್ರಾ ಕಮಿಟಿ ಮುಖ್ಯಸ್ಥ ಚನಬಸ್ಸು ಗುಡ್ಡದ, ಗಣ್ಯ ವ್ಯಾಪಾರಸ್ಥ ಸಿದ್ದಲಿಂಗಯ್ಯ ಕಲ್ಯಾಣಮಠ, ಯುವ ಮುಖಂಡ ಕಾಮರಾಜ ಬಿರಾದಾರ, ರಾಜು ಹೊನ್ನುಟಗಿ, ಪುರಸಭೆ ಸದಸ್ಯ ಗುಂಡಪ್ಪ್ಪ ತಟ್ಟಿ, ಗಣ್ಯ ಹೋಟೆಲ್ ಉದ್ಯಮಿ ಸದಾಶಿವ ಮಠ, ಅಶೋಕ ಚೆಟ್ಟೆರ, ಸಂಗಪ್ಪ ಮೇಲಿಮನಿ, ಶ್ರೀಶೈಲ ಪೂಜಾರಿ, ಈರಣ್ಣ ಬಡಿಗೇರ, ಕಾಂತು ಚಳಿಗೇರಿ, ಶಾಯಿಲ್ ನಾಗಠಾಣ ಸೇರಿದಂತೆ ಹಲವರು ಇದ್ದರು.