ಸಂತೆಗೆ ಖ್ಯಾತಿ, ಸೌಲಭ್ಯ ನೋಡಿದರೆ ಕುಖ್ಯಾತಿ

| Published : May 28 2025, 01:54 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಜಾನುವಾರುಗಳ ಸಂತೆ ಎಂದರೆ ಎಲ್ಲೆಡೆ ಹೆಸರು ವಾಸಿ. ಆದರೆ, ಇಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಕಾಣದೇ ಸಮಸ್ಯೆಗಳ ಸುಳಿಯಲ್ಲಿಯೇ ದಿನ ದೂಡುತ್ತಿದೆ. ಇದರಿಂದ ಜಾನುವಾರು ಹಾಗೂ ಸಂತೆಗೆ ಬರುವ ರೈತರು ರೋಸಿ ಹೋಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಹೌದು, ಜಾನುವಾರುಗಳ ಸಂತೆಗೆ ವಿವಿಧ ಮೂಲಸೌಕರ್ಯಗಳಿಲ್ಲದೇ ಬಳಲುತ್ತಿದೆ. ಪ್ರತಿ ಸೋಮವಾರ ನಡೆಯುವ ಜಾನುವಾರುಗಳ ಸಂತೆಗೆ ಜಾನುವಾರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಸುತ್ತಮುತ್ತಲಿನ ತಾಲೂಕುಗಳು ಮತ್ತು ಗ್ರಾಮಗಳಿಂದ ಅಪಾರ ಸಂಖ್ಯೆ ರೈತರು ಆಗಮಿಸುತ್ತಾರೆ. ಆದರೆ, ಸಂತೆಗೆ ಬಂದವರು ಇಲ್ಲಿಯ ವ್ಯವಸ್ಥೆ ಕಂಡು ಹೈರಾಣಾಗುತ್ತಿದ್ದಾರ

ವಿಶೇಷ ವರದಿ: ಮಲ್ಲಿಕಾರ್ಜುನ ಪಟ್ಟಣಶೆಟ್ಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಜಾನುವಾರುಗಳ ಸಂತೆ ಎಂದರೆ ಎಲ್ಲೆಡೆ ಹೆಸರು ವಾಸಿ. ಆದರೆ, ಇಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಕಾಣದೇ ಸಮಸ್ಯೆಗಳ ಸುಳಿಯಲ್ಲಿಯೇ ದಿನ ದೂಡುತ್ತಿದೆ. ಇದರಿಂದ ಜಾನುವಾರು ಹಾಗೂ ಸಂತೆಗೆ ಬರುವ ರೈತರು ರೋಸಿ ಹೋಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಹೌದು, ಜಾನುವಾರುಗಳ ಸಂತೆಗೆ ವಿವಿಧ ಮೂಲಸೌಕರ್ಯಗಳಿಲ್ಲದೇ ಬಳಲುತ್ತಿದೆ. ಪ್ರತಿ ಸೋಮವಾರ ನಡೆಯುವ ಜಾನುವಾರುಗಳ ಸಂತೆಗೆ ಜಾನುವಾರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಸುತ್ತಮುತ್ತಲಿನ ತಾಲೂಕುಗಳು ಮತ್ತು ಗ್ರಾಮಗಳಿಂದ ಅಪಾರ ಸಂಖ್ಯೆ ರೈತರು ಆಗಮಿಸುತ್ತಾರೆ. ಆದರೆ, ಸಂತೆಗೆ ಬಂದವರು ಇಲ್ಲಿಯ ವ್ಯವಸ್ಥೆ ಕಂಡು ಹೈರಾಣಾಗುತ್ತಿದ್ದಾರೆ.

ಮಳೆ ಬಂತೆಂದರೆ ಸಾಕು ಸಂತೆಯ ಪ್ರದೇಶವೆಲ್ಲ ನೀರಿನ ಹೊಂಡವಾಗಿ ಮಾರ್ಪಡುತ್ತದೆ. ಸಂತೆ ಪಕ್ಕದಲ್ಲಿ ದೊಡ್ಡ ಚರಂಡಿಯೇ ಹರಿಯುತ್ತಿದ್ದು, ಬರುವವರು ರೈತರು ಇದನ್ನು ಸಹಿಸಿಕೊಂಡು ಮೂಗಿಗೆ ಕರವಸ್ತ್ರ ಹಿಡಿದುಕೊಂಡೆ ಬರಬೇಕು. ಆದರೂ ಇದು ಅನಿವಾರ್ಯ. ಮೇಲಾಗಿ, ಇಲ್ಲಿ ಸೊಳ್ಳೆ, ನೊಣಗಳ ಕಾಟ ಬರೀ ವ್ಯಾಪಾರಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಜೀವವನ್ನು ಹಿಂಡುತ್ತಿವೆ. ಸಂತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು. ಬೇಕಾಬಿಟ್ಟಿ ಓಡಾಡುವ ಜಾನುವಾರುಗಳು, ಕಾಲಿಗೆ ಮೆತ್ತಿಕೊಳ್ಳುವ ಕೆಸರು. ಹೀಗೆ ಇಂಥ ಅನೇಕ ಸಮಸ್ಯೆಗಳ ಸರಮಾಲೆಯಲ್ಲಿಯೇ ಇಂದಿಗೂ ಸಂತೆ ನಡೆಯುತ್ತಿದೆ. ಇದು ಜಾನುವಾರುಗಳ ಸಂತೆಯ ಸಮಸ್ಯೆಯಾದರೆ, ಪ್ರತಿ ಸೋಮವಾರ ತರಕಾರಿ ಸಂತೆಯ ಪರಿಸ್ಥಿತಿಯೂ ಇದೆ ಆಗಿದೆ. ಸಂತೆಗೆ ದೂರದ ಹಳ್ಳಿಗಳಿಂದ ಬರುವ ಜನ- ಜಾನುವಾರುಗಳಿಗೆ ಕುಡಿಯಲು ಹನಿ ನೀರು ಸಿಗುವುದಿಲ್ಲ. ಅಕ್ಕಪಕ್ಕದವರನ್ನೂ ಆಶ್ರಯಿಸಬೇಕು. ಜತೆಯಲ್ಲಿ ತಂದ ಒಂದಿಷ್ಟೂ ಮೇವು ಹಾಕಬೇಕು. ಇದು ಪ್ರತಿ ಸಲವೂ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಎಪಿಎಂಸಿ ಮಾತ್ರ ಶುಲ್ಕ ವಸೂಲಿ ಮಾಡುತ್ತದೆ, ಆದರೆ ಸೌಲಭ್ಯಗಳನ್ನು ಮಾಡುವುದನ್ನು ಮರೆತಂತೆ ಕಾಣುತ್ತಿದೆ.

ಸಂತೆ ಪ್ರದೇಶ ಸಿಂದಗಿ ಎಪಿಎಂಸಿ ಹಾಗೂ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದು, ವಿಪರ್ಯಾಸವೆಂದರೆ ಸಂತೆಯಲ್ಲಿ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತಿದೆ. ರೈತರಿಂದ ಹಾಗೂ ವ್ಯಾಪಾರಿಗಳಿಂದ ಶುಲ್ಕದ ರೂಪದಲ್ಲಿ ಹಣ ಸಂಗ್ರಹವಾಗುತ್ತಿದೆ. ಆದರೂ, ಸಂತೆಗೆ ಸೌಲಭ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ನಿರಾಸಕ್ತಿ ಹೊಂದಿರುವುದು ಶೋಚನೀಯ ಸಂಗತಿ. ಎತ್ತುಗಳು ನಿಲುಗಡೆಗೆ ಗೂಟ್‌ದ ವ್ಯವಸ್ಥೆ, ಅವುಗಳಿಗೆ ಕುಡಿಯುವ ನೀರಿನ ಹೌಸ್ ನಿರ್ಮಾಣ, ರೈತರಿಗೆ ನೀರಿನ ವ್ಯವಸ್ಥೆ ಎಲ್ಲವನ್ನೂ ಎಪಿಎಂಸಿಯೆ ಮಾಡಿಸಬೇಕು. ಆದರೆ ಅದ್ಯಾವುದು ಈ ಜಾನುವಾರು ಸಂತೆಯಲ್ಲಿ ಕಾಣುವುದಿಲ್ಲ.

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಇಲ್ಲಿ ದನಗಳ ಸಂತೆ ಹುಟ್ಟಿಕೊಂಡಿದ್ದಾಗಿನಿಂದ ಇದೇ ಗೋಳು. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಮಾರಾಟ ಹಾಗೂ ಖರೀದಿಗೆ ಬರುವವರು ಒಳಗೊಳಗೆ ಹಿಡಿ ಶಾಪ ಹಾಕುತ್ತ, ಏನು ಮಾಡಲು ಸಾಧ್ಯವಾಗದೇ ಗುನುಗಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾರೆ. ಆದರೆ, ಮಾರಾಟಕ್ಕೆ ಬರುವ ದನಕರುಗಳದ್ದು ಮಾತ್ರ ನರಕಯಾತನೆ. ಇಲಾಗೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಎನ್ನಲಾಗುತ್ತಿದೆ. ಸಂತೆಗೆ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಕುಡಿಯುವ ನೀರು, ಸ್ವಚ್ಛತೆ, ಮೂತ್ರಾಲಯಕ್ಕೆ ಪ್ರಥಮಾಧ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ನಂತರ ಮರೆತು ಬಿಡುತ್ತಿದ್ದಾರೆ. ಇದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.------

ಕೋಟ್‌ಯಾವುದೇ ವ್ಯವಸ್ಥೆ ಇಲ್ಲದೇ ಎಲ್ಲರೂ ಬಳಲುತ್ತಿದ್ದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ. ಜಾನುವಾರುಗಳ ಗತಿ ಏನು. ಮೂಕ ಪ್ರಾಣಿಗಳ ಹಿತ ದಷ್ಟಿಯಿಂದಾದರೂ ಎಪಿಎಂಸಿಯು ದನಗಳ ಸಂತೆಗೆ ಸೌಕರ್ಯದ ಬಗ್ಗೆ ಹಾಗೂ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಗಾಡಿಗಳು ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆಯಾಗುವ ಬಗ್ಗೆ ಚರ್ಚಿಸಿ ಬಗೆಹರಿಸಬೇಕು. ಜನ, ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಇಲ್ಲದಿದ್ದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ.ರಹೀಮಾನ್ ಕನಕಲ್. ಕನ್ನಡಪರ ಸಂಘಟನೆ ಮುಖಂಡ-----ದೇವರಹಿಪ್ಪರಗಿ ಜಾನುವಾರಗಳ ಸಂತೆ ಕಂದಾಯ ಇಲಾಖೆಯಿಂದ ಲೀಜ್ ಪಡೆಯಲಾಗಿದ್ದು, ಸಿಬ್ಬಂದಿ ಹಾಗೂ ಸಂತೆ ಸಮಸ್ಯೆಯ ಬಗ್ಗೆ ಹೊಸ ಕಮಿಟಿಯ ಮುಂದೆ ತಂದು ಮೂಲಭೂತ ಸೌಕರ್ಯ ಒದಗಿಸಲಾಗುವುದು. ಪೊಲೀಸ್ ಇಲಾಖೆ ಸಹಕಾರ ನೀಡಿದರೆ ಸಂತೆಯ ದಿನ ಟ್ರಾಫಿಕ್ ಜಾಮ್ ನಿವಾರಿಸಬಹುದು. ಸಂತೆಗೆ ಸ್ವಂತ ಜಾಗ ಇಲ್ಲದ ಕಾರಣ ಸಂತೆ ಕಳೆದುಕೊಳ್ಳಬಾರದು ಎಂದು ಲೀಜ್‌ಗೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಕಳಿಸಲಾಗಿದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು.ಬಿ.ಎಲ್.ಜುಮ್ಮನಾಳ, ಎಪಿಎಂಸಿ ಕಾರ್ಯದರ್ಶಿ, ಸಿಂದಗಿ