ಸಾರಾಂಶ
ನರೇಗಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಬರಗಾಲ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಬುಧವಾರ ಸಂಜೆ ಇಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಬರಗಾಲದ ಗ್ಯಾರಂಟಿಯೂ ಒಂದು. ಇಂತಹ ಕೆಲಸಕ್ಕೆ ಬಾರದ ಗ್ಯಾರಂಟಿಗಳನ್ನು ನಂಬಿ ಮೋಸ ಹೋಗಬೇಡಿ. ಈಗಾಗಲೇ ಅವರು ಮಹಿಳೆಯರಿಗೆ ಹಾಗೂ ರೈತರಿಗೆ ಚೊಂಬು ಕೊಟ್ಟಾಗಿದೆ ಎಂದರು.ಕಾಂಗ್ರೆಸ್ನವರಿಗೆ ಮೋದಿ ಶನಿನೇ. ಯಾರು ಭ್ರಷ್ಟಾಚಾರ ಮಾಡುತ್ತಾರೋ, ಯಾರು ದೇಶವಿರೊಧಿ ಚಟುವಟಿಕೆ ಮಾಡುತ್ತಾರೋ ಅವರಿಗೆ ಮೋದಿ ಶನಿಯಾಗಿ ಕಾಡುತ್ತಾರೆ. ಇತ್ತೀಚೆಗೆ ಕಾಂಗ್ರೆಸ್ನವರು ಹೊಸದೊಂದು ನಾಟಕ ಪ್ರಾರಂಭಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಹಿ ಇರುವ ಗ್ಯಾರಂಟಿ ಕಾರ್ಡ್ನ್ನು ಮನೆಮನೆಗೆ ತಲುಪಿಸಿ ಮಹಿಳೆಯರ ದಾರಿ ತಪ್ಪಿಸುತ್ತಿದ್ದಾರೆ. ಕಾರ್ಡ್ ಮೇಲೆ ಸಹಿ ಮಾಡಲು ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಧಾನ ಮಂತ್ರಿಗಳೇ ಅಥವಾ ರಾಷ್ಟ್ರಪತಿಗಳೇ? ಎಂದು ಪ್ರಶ್ನಿಸಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಕಳಕಪ್ಪ ಬಂಡಿ ಮಾತನಾಡಿದರು.ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಕೆಸಿಸಿ ಬ್ಯಾಂಕ್ ಸದಸ್ಯ ಜಿ.ಪಿ. ಪಾಟೀಲ್, ತಾಲೂಕು ಯುವ ಮೋರ್ಚಾ ಬಿಜೆಪಿ ಅಧ್ಯಕ್ಷ ಉಮೇಶ್ ಪಾಟೀಲ್, ಉಮೇಶ ಸಂಗನಾಳಮಠ, ಎಂ.ಬಿ. ಸಜ್ಜನರ, ಇಂದಿರಾ ತೇಲಿ, ಅಶೋಕ ನವಲಗುಂದ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಕ್ತುಂಸಾಬ ಮುಧೋಳ, ಶಶಿ ಶಂಕಣಗೌಡರ, ಬಸನಗೌಡ ಪೊಲೀಸ್ ಪಾಟೀಲ್, ಬಸವರಾಜ್ ವೆಂಕಲಕುಂಟಿ, ಮಂಜುನಾಥ್ ಕಮಲಾಪುರ, ಮಹೇಶ್ ಶಿವಶಿಂಪಿ ಪಾಲ್ಗೊಂಡಿದ್ದರು.