ಸಾರಾಂಶ
ಬಸವನಬಾಗೇವಾಡಿ : ಇಡೀ ಜಗತ್ತಿಗೆ ಅನ್ನ ನೀಡುವ ರೈತ, ದೇಶದ ಗಡಿ ಕಾಯುವ ಸೈನಿಕ ಇರ್ವರು ಜಗತ್ತಿನ ಎರಡು ಕಣ್ಣುಗಳಿದ್ದಂತೆ. ಇವರು ಇಲ್ಲದೆ ಹೋದರೇ ಜನರು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಬಸವ ಭವನದಲ್ಲಿ ಪುರಸಭೆ, ಮಾಜಿ ಸೈನಿಕ ಹಾಗೂ ಅರೆಸೈನಿಕ ಸಂಘದ ಸಹಯೋಗದಲ್ಲಿ ಮಂಗಳವಾರ ನಡೆದ ಕಾರ್ಗಿಲ್ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಭಾರತೀಯ ಸೈನಿಕರ ಶೌರ್ಯ ಮೆಚ್ಚುವಂತಹದು. ಇಂತಹ ಸೈನಿಕ ಸಾಹಸದಿಂದ ೨೫ ವರ್ಷಗಳ ಹಿಂದೆ ಜರುಗಿದ ಕಾರ್ಗಿಲ್ ಯುದ್ಧಯಲ್ಲಿ ಭಾರತ ವಿಜಯಶಾಲಿಯಾಗಿ ಜಗತ್ತಿನಲ್ಲಿ ಕಂಗೊಳಿಸಿದೆ. ಹಿಂದೆ ನಡೆದ ಅನೇಕ ಯುದ್ಧಗಳಲ್ಲಿಯೂ ದೇಶ ವಿಜಯಶಾಲಿಯಾಗುವಂತೆ ಮಾಡುವಲ್ಲಿ ಸೈನಿಕರ ಪಾತ್ರ ಮರೆಯುವಂತಿಲ್ಲ. ಸೈನಿಕ ಸೇವೆ ಸಲ್ಲಿಸುತ್ತಿರುವ ಬಾಂಧವರ ಕುಟುಂಬಸ್ಥರಿಗೆ ಸರ್ಕಾರ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡುವಂತಾದರೇ ಹೆಚ್ಚು ಜನರು ಸೈನಿಕ ಸೇವೆಗೆ ಸೇರಲು ಬಯಸುತ್ತಾರೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸದ ರಜತಮಹೋತ್ಸವ ಆಚರಣೆಯನ್ನು ಇಲ್ಲಿನ ಮಾಜಿ ಸೈನಿಕ ಸಂಘವು ದೇಶಾಭಿಮಾನ ಮೂಡುವ ನಿಟ್ಟಿನಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ. ಇಲ್ಲಿನ ಸಂಘವು ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸುವಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಕಾರ್ಗಿಲ್ ಯುದ್ಧದ ಸ್ಮರಣೆ ಮಾಡಿಕೊಂಡರೇ ಪ್ರತಿಯೊಬ್ಬರಲ್ಲಿ ದೇಶಾಭಿಮಾನದ ಸ್ಫೂರ್ತಿ ಮೂಡುತ್ತದೆ. ತಮ್ಮ ವೇತನವನ್ನು ಸೈನಿಕರಿಗೆ ಅರ್ಪಿಸಿದ ನರೇಂದ್ರ ಮೋದಿಯಂತಹ ಪ್ರಧಾನಮಂತ್ರಿ ಸಿಕ್ಕಿರುವುದು ನಮ್ಮ ದೇಶದ ಸೌಭಾಗ್ಯವೇ ಸರಿ. ಇನ್ನೂ ಅನೇಕ ಪ್ರದೇಶಗಳು ನಮ್ಮ ದೇಶಕ್ಕೆ ಸೇರಬೇಕಿದೆ. ಇದಕ್ಕಾಗಿ ನಾವು ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ನೀಡುವುದು ಅಗತ್ಯವಿದೆ. ಸೈನಿಕರ ಸೇವೆಗೆ ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸಂಗಮೇಶ ಪೂಜಾರಿ ಉಪನ್ಯಾಸ ನೀಡಿ, ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿದ ಮಹೇಂದ್ರಕುಮಾರ, ಕರಣಸಿಂಗರಂತಹ ಸೈನಿಕರ ಕುರಿತು ಸ್ಮರಿಸಿಕೊಂಡರು.ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರ ಹಾಗೂ ಅರೆಸೈನಿಕರ ಸಂಘದ ಅಧ್ಯಕ್ಷ ಬಿ.ಜಿ.ಬಿರಾದಾರ, ಮುಖಂಡರಾದ ಬಿ.ಕೆ.ಕಲ್ಲೂರ, ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಮುಖಂಡರಾದ ಲೋಕನಾಥ ಅಗರವಾಲ, ಬಸಣ್ಣ ದೇಸಾಯಿ, ಶಿವಾನಂದ ಮಂಗಾನವರ, ಎಂ.ಜಿ.ಆದಿಗೊಂಡ, ಎಸ್.ಕೆ.ಸೋಮನಕಟ್ಟಿ, ಎಫ್.ಡಿ.ಮೇಟಿ, ಮುರಗೇಶ ನಾಯ್ಕೋಡಿ, ಶಿವಾನಂದ ಇಂಡಿ, ಪ್ರಕಾಶ ಡೆಂಗಿ, ಸಿದ್ರಾಮ ಶೇಗುಣಸಿ, ಅಶೋಕ ಚಲವಾದಿ ಇತರರು ಇದ್ದರು. ಎಸ್.ಐ.ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು. ಎಸ್.ಪಿ.ಮಡಿಕೇಶ್ವರ, ಕೊಟ್ರೇಶ ಹೆಗ್ಡಾಳ, ಬಿ.ವಿ.ಚಕ್ರಮನಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಮಾಜಿ ಸೈನಿಕರನ್ನು, ವಿವಿಧ ಕ್ಷೇತ್ರದ ಮಹನೀಯರನ್ನು, ವೀರನಾರಿ ಲಕ್ಷ್ಮೀಬಾಯಿ ಜಾಧವ, ಶ್ರೀದೇವಿ ಬಿಸಲದಿನ್ನಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ವೇದಿಕೆಯ ಬೃಹತ್ ಎಲ್ಡಿ ಸ್ಕ್ರೀನ್ದಲ್ಲಿ ಪ್ರದರ್ಶನಗೊಂಡ ಕಾರ್ಗಿಲ್ ಯುದ್ಧ ನೈಜ ಚಿತ್ರವು ಸಮಾರಂಭಕ್ಕೆ ಆಗಮಿಸಿದ್ದ ಶ್ರೀಗಳು, ಗಣ್ಯರು ಸೇರಿದಂತೆ ಜನತೆ, ವಿವಿಧ ಶಾಲಾ ಮಕ್ಕಳಿಗೆ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರ ಶೌರ್ಯ,ಪರಾಕ್ರಮ, ತ್ಯಾಗ-ಬಲಿದಾನ ಸ್ಮರಿಸಿತು.ಚಿತ್ರ ಮುಗಿಯುವರೆಗೂ ಇಡೀ ಬಸವ ಭವನ ಮಂತ್ರಮುಗ್ಧವಾಗಿತ್ತು. ನಂತರ ಮನಗೂಳಿಯ ಕೌಟಿಲ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಕಾರ್ಗಿಲ್ ಕಥಾ ಚಿತ್ರದ ಪ್ರದರ್ಶನ ಬಹುತೇಕ ಎಲ್ಲರ ಕಣ್ಣಿನಲ್ಲಿ ನೀರು ಬರುವಂತೆ ಮಾಡಿತು. ಹೊಳೆಆಲೂರದ ಬಾಲಪ್ರತಿಭೆ ಆರ್ಯವರ್ಧನ ಕೋಟಿ ತನ್ನ ಜ್ಞಾಪಕ ಶಕ್ತಿಯ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಜನರ ಗಮನ ಸೆಳೆದನು.
ಕಾರ್ಯಕ್ರಮಕ್ಕೂ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಅಮರಜ್ಯೋತಿ ಪಥಸಂಚಲನದಲ್ಲಿ ಸಾರವಾಡದ ಗೊಂಬೆಗಳು, ವಿವಿಧ ವಾದ್ಯಮೇಳ, ಭಾರತ ಸೇವಾದಳ ಮಕ್ಕಳು, ಸ್ಕೌಟ್ ಆ್ಯಂಡ್ ಗೈಡ್ಸ್ ಮಕ್ಕಳು, ಕರಾಟೆ ತರಬೇತಿ ಮಕ್ಕಳು, ವಿವಿಧೆಡೆಗಳಿಂದ ಆಗಮಿಸಿದ್ದ ಮಾಜಿ ಸೈನಿಕರು, ವಿರಕ್ತಮಠದ ಶ್ರೀಗಳು, ವಿವಿಧ ಗಣ್ಯರು ಭಾಗವಹಿಸುವ ಮೂಲಕ ಪಥಸಂಚಲನದ ಮೆರವಣಿಗೆಗೆ ಮೆರಗು ಬಂದಿತ್ತು. ಪ್ರಮುಖ ಬೀದಿಗಳಲ್ಲಿ ಜರುಗಿದ ಪಥಸಂಚಲನಯುದ್ದಕ್ಕೂ ರಾಷ್ಟ್ರಧ್ವಜ ರಾರಾಜಿಸಿದವು. ಪಥ ಸಂಚಲನ ಆರಂಭಕ್ಕೂ ಮುನ್ನ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿರುವ ಕಾರ್ಗಿಲ್ ಯುದ್ಧದ ಹುತಾತ್ಮ ಯೋಧ ಅಶೋಕ ಜಾಧವ ಪ್ರತಿಮೆಗೆ ಮಾಜಿ ಸೈನಿಕರಿಂದ ರಿತ್ ಪಿರಡ್ ನಡೆಯಿತು. ಈ ಸಂದರ್ಭದಲ್ಲಿ ಬಿಇಒ ವಸಂತ ರಾಠೋಡ ಸೇರಿದಂತೆ ಇತರರು ಇದ್ದರು.