ಹಿರೇಬಿದರಿ ಗ್ರಾಮದಲ್ಲಿ ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

| Published : Aug 29 2025, 01:00 AM IST

ಹಿರೇಬಿದರಿ ಗ್ರಾಮದಲ್ಲಿ ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಹುಚ್ಚೆಂಗೆಪ್ಪ ಕೆಂಚಪ್ಪ ಹರಿಜನ(45) ಮೃತಪಟ್ಟ ರೈತ. ಇವರು ಕೃಷಿಗಾಗಿ ಅರೇಮಲ್ಲಾಪುರದ ಕೆವಿಜಿ ಬ್ಯಾಂಕಿನಲ್ಲಿ ₹60 ಸಾವಿರ, ಫೈವ್‌ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಎರಡು ವರ್ಷಗಳ ಹಿಂದೆ ₹2 ಲಕ್ಷ ಹಾಗೂ ಪತ್ನಿ ಹೆಸರಿನಲ್ಲಿ ಧರ್ಮಸ್ಥಳ ಸಂಘದಲ್ಲಿ ₹20 ಸಾವಿರ ಸಾಲ ಮಾಡಿದ್ದರು.

ರಾಣಿಬೆನ್ನೂರು: ಸಾಲಬಾಧೆಗೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

ಗ್ರಾಮದ ಹುಚ್ಚೆಂಗೆಪ್ಪ ಕೆಂಚಪ್ಪ ಹರಿಜನ (45) ಮೃತಪಟ್ಟ ರೈತ. ಇವರು ಕೃಷಿಗಾಗಿ ಅರೇಮಲ್ಲಾಪುರದ ಕೆವಿಜಿ ಬ್ಯಾಂಕಿನಲ್ಲಿ ₹60 ಸಾವಿರ, ಫೈವ್‌ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಎರಡು ವರ್ಷಗಳ ಹಿಂದೆ ₹2 ಲಕ್ಷ ಹಾಗೂ ಪತ್ನಿ ಹೆಸರಿನಲ್ಲಿ ಧರ್ಮಸ್ಥಳ ಸಂಘದಲ್ಲಿ ₹20 ಸಾವಿರ ಸಾಲ ಮಾಡಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಬೆಳೆ ಬಾರದೇ ಮಾಡಿರುವ ಸಾಲ ತೀರಿಸುವ ಚಿಂತೆಯಿಂದ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಂಗಳವಾರ ಹಾರಿದ್ದರು. ಶವ ಗುರುವಾರ ಕೋಣನತಂಬಿಗಿ ಗ್ರಾಮದ ಬಳಿ ತೇಲಿ ಬಂದಿದೆ ಎಂದು ಮೃತರ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಮಟ್ಕಾ ಜೂಜಾಟ, ಮೂವರ ವಿರುದ್ಧ ಪ್ರಕರಣ

ಹಾವೇರಿ: ನಗರದ ಹಲವು ಕಡೆ ಮಟ್ಕಾ ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂರು ಜನರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ.

ಕೊರವರ ಓಣಿಯ ನಿವಾಸಿ ಅಶೋಕ ಕೊರವರ ಹಾಗೂ ಮೋಟೆಬೆನ್ನೂರಿನ ನಾಗಪ್ಪ ಸುಣಗಾರ ಎಂಬವರ ವಿರುದ್ಧ ದೂರು ದಾಖಲಾಗಿದೆ. ಈ ಆರೋಪಿತರು ಹಾನಗಲ್ಲ ರಸ್ತೆಯ ಖಾಸಗಿಯವರ ಪೆಟ್ರೋಲ್ ಬಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ ಕಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಗೋಂದಲಗೇರಿಯ ನಿವಾಸಿ ಸಂಜಯ ಗೊಂದಳೆ ಎಂಬಾತ ಜಿಲ್ಲಾ ಗುರುಭವನ ಬಳಿ ಮಟ್ಕಾ ಜೂಜಾಟ ನಡೆಸುತ್ತಿರುವುದಾಗಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಕಾಲಕ್ಕೆ ಸಿಕ್ಕಿ ಬಿದ್ದಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿವೆ.