ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಕರ್ತವ್ಯಲೋಪದಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಹನುಮಂತಪ್ಪ ಎಂಬ ವ್ಯಕ್ತಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಗಳು, ಗ್ರಾಮಸ್ಥರು ಆಸ್ಪತ್ರೆ ಎದುರು ಹನುಮಂತಪ್ಪನ ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
- ಆಡಳಿತ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದಿದ್ದರೆ ಆಸ್ಪತ್ರೆ ಎದುರೇ ಶವ ಸಂಸ್ಕಾರದ ಎಚ್ಚರಿಕೆ
- - -- ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳು ಸಂತೆಬೆನ್ನೂರಿಗೆ ಭೇಟಿ: ಭರವಸೆ ಮೇರೆಗೆ ಧರಣಿ ಅಂತ್ಯ
- - ತೋಟದಲ್ಲಿದ್ದಾಗ ಎದೆನೋವಿನಿಂದ ಅಸ್ವಸ್ಥಗೊಂಡಿದ್ದ ಮಂಗೇನಹಳ್ಳಿ ರೈತ ಹನುಮಂತಪ್ಪ- - -
ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಕರ್ತವ್ಯಲೋಪದಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಹನುಮಂತಪ್ಪ ಎಂಬ ವ್ಯಕ್ತಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಗಳು, ಗ್ರಾಮಸ್ಥರು ಆಸ್ಪತ್ರೆ ಎದುರು ಹನುಮಂತಪ್ಪನ ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮಂಗೇನಹಳ್ಳಿ ಗ್ರಾಮದ ರೈತ ಹನುಮಂತಪ್ಪ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಪಕ್ಕದ ತೋಟದ ರೈತರೊಬ್ಬರು ಗ್ರಾಮದ ಹತ್ತಿರದಲ್ಲೇ ಇರುವ ಸಂತೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ 7 ಗಂಟೆಗೆ ಕರೆತಂದಿದ್ದಾರೆ. ಈ ಸಂದರ್ಭ ಚಿಕಿತ್ಸೆ ನೀಡಬೇಕಾದ ವೈದ್ಯರಾಗಲಿ, ನರ್ಸ್ಗಳಾಗಲಿ ಯಾರೂ ಸ್ಥಳದಲ್ಲಿ ಇರಲಿಲ್ಲ. ಹನುಮಂತಪ್ಪ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಎಂದು ಗ್ರಾಮದ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಲೋಹಿತ್ ಕುಮಾರ್ ಆಸ್ಪತ್ರೆ ವೈದ್ಯ-ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯೆ ವಿರುದ್ಧ ಕಿಡಿಕಾರಿದರು.24*7 ತುರ್ತು ಚಿಕಿತ್ಸಾ ಕೇಂದ್ರ ಎಂದು ಬೋರ್ಡ್ ಹಾಕಿಕೊಂಡು ವೈದ್ಯರೇ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಸ್ವಂದಿಸುತ್ತಿಲ್ಲ. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೀಗೆ ಲೋಪಮಾಡಿದರೆ ಜನರ ಗತಿ ಏನು?. ಕೂಡಲೇ ತಾಲೂಕು ಆಡಳಿತ, ಜಿಲ್ಲಾಡಳಿತ ಆಸ್ಪತ್ರೆಗೆ ಆಗಮಿಸಬೇಕು. ಶೀಘ್ರ ಸಮಸ್ಯೆಗಳನ್ನು ಸರಿಪಡಿಸದೆ ಇದ್ದರೆ ಆಸ್ಪತ್ರೆ ಎದುರುಗಡೆಯೇ ಶವ ಸಂಸ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಳಿಕ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿ ಘಟನೆ ವಿವರಗಳನ್ನು ಪಡೆದರು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ. ಕರ್ತವ್ಯಲೋಪ ಎಸಗಿದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಸಂಬಂಧಿಗಳು, ಗ್ರಾಮಸ್ಥರು ಹನುಮಂತಪ್ಪ ಅವರ ಶವವನ್ನು ಆಸ್ಪತ್ರೆ ಬಳಿಯಿಂದ ತೆರವುಗೊಳಿಸಿದರು. ಶುಕ್ರವಾರ ಸಂಜೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.- - -
-10ಕೆಸಿಎನ್ಜಿ1: ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶವವನ್ನು ಇಟ್ಟು ಪ್ರತಿಭಟನೆ ನಡೆಸುತ್ತೀರುವುದು