ಸಾರಾಂಶ
ಸಾತನೂರು ಹೋಬಳಿ ಮೇಗಳದೊಡ್ಡಿ ಗ್ರಾಮದ ರಾಚಪ್ಪ ಎಂಬುವವರಿಗೆ ಸೇರಿದ ರಾಗಿ ಮೆದೆ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ ನಾಶಪಡಿಸಿದ್ದು, ಸಾಕಷ್ಟು ನಷ್ಟ ಉಂಟಾಗಿ ರೈತ ಕಂಗಾಲಾಗಿದ್ದಾನೆ.
ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ರೈತನ ಮನವಿ । ಮೇಗಳದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ
ಕನ್ನಡಪ್ರಭ ವಾರ್ತೆ ಕನಕಪುರಕಟಾವು ಮಾಡಿ ಹೊಲದಲ್ಲಿ ಮೇದೆ ಹಾಕಿದ್ದ ರಾಗಿ ಬೆಳೆಯು ಕಾಡಾನೆ ದಾಳಿಗೆ ನಾಶವಾಗಿರುವ ಘಟನೆ ಮೇಗಳದೊಡ್ಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಾತನೂರು ಹೋಬಳಿ ಮೇಗಳದೊಡ್ಡಿ ಗ್ರಾಮದ ರಾಚಪ್ಪ ಎಂಬುವವರಿಗೆ ಸೇರಿದ ರಾಗಿ ಮೆದೆ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ ನಾಶಪಡಿಸಿದ್ದು, ಸಾಕಷ್ಟು ನಷ್ಟ ಉಂಟಾಗಿ ರೈತ ಕಂಗಾಲಾಗಿದ್ದಾನೆ. ತಮ್ಮ ಎರಡುವರೆ ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದ ರೈತ ರಾಚಪ್ಪ, ಮಳೆಯಿಲ್ಲದೇ ಬರಗಾಲದಲ್ಲಿಯೂ ರಾಗಿಗೆ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದರು,ಉತ್ತಮ ಫಸಲು ಸಹ ಬಂದಿತ್ತು. ಕಳೆದ ಕೆಲ ದಿನಗಳ ಹಿಂದೆ ರಾಗಿಯನ್ನು ಕಟಾವು ಮಾಡಿ ಒಕ್ಕಣೆ ಮಾಡಲು ತಮ್ಮ ಜಮೀನಿನಲ್ಲೇ ಮೆದೆ ಹಾಕಿದ್ದರು.ಆದರೆ, ರಾತ್ರೋ ರಾತ್ರಿ ರಾಗಿ ಮೆದೆ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ, ಮೆದೆಯನ್ನು ಚೆಲ್ಲಾಪಿಲ್ಲಿಗೊಳಿಸಿ ತಿಂದು ನಾಶಪಡಿಸಿವೆ. ಕಾಡಾನೆ ದಾಳಿಯಿಂದ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ರಾಗಿ ಬೆಳೆಯು ಒಂದೇ ರಾತ್ರಿಯಲ್ಲಿ ನಾಶವಾಗಿ ರೈತನಿಗೆ ಸಾಕಷ್ಟು ನಷ್ಟ ಉಂಟಾಗಿದೆ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದ್ದು, ಕಾಡಾನೆಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಜೀವ ಪಣಕ್ಕಿಟ್ಟು ಜಮೀನಿನಲ್ಲಿ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತ ರಾಚಪ್ಪನಿಗೆ ಬೆಳೆ ನಾಶದಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದ್ದು, ಪರಿಹಾರಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರೈತರು ನೀಡಿರುವ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಾಗಿ ಮೆದೆಯನ್ನು ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.----ಸಾತನೂರು ಹೋಬಳಿಯ ಮೇಗಳ ದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಮೆದೆ ಹಾಕಿದ್ದ ರಾಗಿ ಬೆಳೆಯನ್ನು ನಾಶ ಮಾಡಿರುವುದು.