ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಾಡಾನೆಗಳ ಉಪಟಳಕ್ಕೆ ಭಾನುವಾರ ರೈತನೊಬ್ಬ ಮೃತಪಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿ, ಆನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ನೂರಾರು ಗ್ರಾಮಸ್ಥರು ರಸ್ತೆ ತಡೆದು ಶವ ಪರೀಕ್ಷೆಗೆ ಅಡ್ಡಿಪಡಿಸಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು.ಭಾನುವಾರ ತಾಲೂಕಿನ ದೋಣಿಮಡಗು ಗ್ರಾಮ ಪಂಚಾಯತಿಯ ಪೊಲೇನಹಳ್ಳಿ ಗ್ರಾಮದ ರೈತ ನಾರಾಯಣಪ್ಪ ವೀಳ್ಯೆದೆಲೆ ವ್ಯಾಪಾರಕ್ಕೆಂದು ಪಟ್ಟಣಕ್ಕೆ ಹೋಗಲು ಬಸ್ ಹಿಡಿಯಲು ಹೋಗುತ್ತಿರುವಾಗ ಎರಡು ಕಾಡಾನೆಗಳು ದಾಳಿ ಮಾಡಿ ಸಾಯಿಸಿವೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ಆನೆಗಳ ಹಾವಳಿ ಮಿತಿ ಮೀರಿದೆ. ಆದರೂ ಸರ್ಕಾರವಾಗಲಿ ಇಲ್ಲ ಅರಣ್ಯ ಇಲಾಖೆಯಾಗಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶಪದೇ ಪದೇ ಆನೆಗಳು ನಾಡಿನತ್ತ ಬಂದು ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿ ಲಕ್ಷಾಂತರ ರು.ನಷ್ಟು ಉಂಟು ಮಾಡುತ್ತಿವೆ. ಆದರೂ ರೈತರಿಗೆ ಇದುವರೆಗೂ ೧೩ ರೈತನ್ನು ಬಲಿ ಪಡೆದಿವೆ, ಆದರೂ ಸರ್ಕಾರ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಆನೆ ದಾಳಿಗೆ ನಾರಾಯಣಪ್ಪ ಬಲಿಯಾಗಿರುವುದರಿಂದ ಅವರ ಕುಟುಂಬ ಬೀದಿಗೆ ಬಂದಿದೆ, ಸರ್ಕಾರ ಅವರ ಕಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು, ೫೦ ಲಕ್ಷ ಪರಿಹಾರ ನೀಡಬೇಕು, ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಇಲ್ಲದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಹಾಕಲಾಗವುದು ಎಂದು ದೋಣಿಮಡಗು ಗ್ರಾಮ ಪಂಚಾಯ್ತಿಯ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಅರಣ್ಯಾಧಿಕಾರಿ ಭರವಸೆಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡುಕೊಂಡಲು, ಹಾಗೂ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಬೇಟಿ ನೀಡಿ ಗ್ರಾಮಸ್ಥರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದು ಶವ ಪರೀಕ್ಷೆಗೆ ಅನುವು ಮಾಡಿಕೊಟ್ಟರು.