ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬಹುನಿರೀಕ್ಷಿತ ಪೂರಿಗಾಲಿ ಹನಿನೀರಾವರಿ ಯೋಜನೆ ಬಗ್ಗೆ ಕೆಲವರ ಅಪಪ್ರಚಾರದಿಂದ ಈ ಭಾಗದ ರೈತರಲ್ಲಿ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪೂರಿಗಾಲಿ ಹನಿನೀರಾವರಿ ಬಗ್ಗೆ ಇಲ್ಲಿನ ರೈತರು ಆಸಕ್ತಿ ತೋರುತ್ತಿಲ್ಲ. ಯಾವುದೋ ಕುಚೇಷ್ಟೆಗೆ ಹಾಗೂ ಅಪಪ್ರಚಾರಕ್ಕೆ ಒಳಗಾಗುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 598 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಎಂದರು.ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸದ್ಯದಲ್ಲಿಯೇ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲು ಸಿದ್ಧವಾಗಿದೆ. ಆದರೆ. ಈ ಭಾಗದ ರೈತರು ಯೋಜನೆ ವ್ಯಾಪ್ತಿಗೆ ಒಳಪಡಲು ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಯೋಜನೆಯಲ್ಲಿನ ಪ್ರಯೋಜನಗಳನ್ನು ರೈತರಿಗೆ ಅರ್ಥ ಮಾಡಿಸಲು ಎಷ್ಟು ಬಾರಿ ಒಗ್ಗೂಡಿಸಿದರೂ ಅವರು ಆಸಕ್ತಿ ತೋರುತ್ತಿಲ್ಲ. ಹನಿ ನೀರಾವರಿ ಯೋಜನೆ ಈ ಭಾಗದ ರೈತರ ಮುಂದಿನ ಭವಿಷ್ಯಕ್ಕಾಗಿ ಮಾಡಲಾಗಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನಂತರ ಸಿಎಸ್ಆರ್ ನಡಿ ಸಾಕಷ್ಟು ಅನುದಾನ ತರಲಾಗಿದೆ. ಮೊದಲನೇ ಹಂತವಾಗಿ ಗ್ರಾಮೀಣ ಭಾಗದ ಶಿಕ್ಷಣ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಶಿಕ್ಷಣದ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಎಂದರು.
ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಡಿಜಿಟಲೀಕರಣದತ್ತ ನೂರಕ್ಕೆ ನೂರರಷ್ಟು ಬದಲಾಗುತ್ತಿವೆ. ಕಟ್ಟಡ ಲೋಪ, ಪ್ರತಿ ಶಾಲೆಗೆ ಬೆಂಚು, ಡೆಸ್ಕ್, ಖಾಸಗಿ ಶಾಲೆಯಲ್ಲಿ ಇಲ್ಲದ ವ್ಯವಸ್ಥೆಯ ರೀತಿ ಸರ್ಕಾರಿ ಶಾಲೆಗಳಿಗೆ ಒಂದು ಕ್ಲಸ್ಟರ್ ಗೆ ಒಂದು ಮಲ್ಟಿಮೀಡಿಯಾ ಸೆಂಟರ್ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.ನಂತರ ಶಾಸಕರು ತಾಲೂಕಿನ ದಾಸನದೊಡ್ಡಿ, ಮಲ್ಲಿಕ್ಯಾತನಹಳ್ಳಿ, ಹೊಸಹಳ್ಳಿ, ಕಿರಗಸೂರು, ದ್ಯಾವಪಟ್ಟಣ, ಬಿಜಿಪುರ, ಕೊಡಗಹಳ್ಳಿ, ಹಾನವಾಡಿ, ಹುಲ್ಲಬಳ್ಳಿ, ಚಿಕ್ಕಬಾಗಿಲು, ಕುಂದೂರು, ಜವನಗಹಳ್ಳಿ, ಪೂರಿಗಾಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 4 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ಮುಖಂಡರಾದ ಕೆ.ಜೆ.ದೇವರಾಜು, ಬಿ.ಆರ್.ಸಿದ್ದರಾಜು, ವೆಂಕಟಪ್ಪ, ಎಂ.ಶಾಲಿನಿ, ಎಚ್.ಕೆ.ರೂಪ, ಬಿ.ರಘು, ಶಿವರಾಮು, ನಂಜುಂಡಸ್ವಾಮಿ, ಜಯಪ್ಪ, ಮಹೇಶ್, ರವೀಂದ್ರ, ಉಮೇಶ್, ಡಿ.ಎಲ್.ಶಿವರುದ್ರ, ನಾಗೇಂದ್ರ, ಮಹದೇವಣ್ಣ ಹಾಗೂ ಮುಖಂಡರು ಭಾಗಿಯಾಗಿದ್ದರು.