ಸಾರಾಂಶ
ಕುಕನೂರು:
ಶಿಕ್ಷಣ ಇಲಾಖೆ ಧ್ಯೇಯ ಗುಣಮಟ್ಟದ ಕಲಿಕೆ ಆಗಿದೆ ಎಂದು ಯಲಬುರ್ಗಾ ಬಿಇಒ ಸೋಮಶೇಖರಗೌಡ ಪಾಟೀಲ್ ಹೇಳಿದರು.ತಾಲೂಕಿನ ಇಟಗಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಟಗಿ ಕ್ಲಸ್ಟರ್ನ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 6 ವರ್ಷ ತುಂಬಿದ ಪ್ರತಿಯೊಂದು ಮಗು ಶಾಲೆಗೆ ದಾಖಲಾಗಿ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬದುಕಿನಲ್ಲಿ ಶಿಕ್ಷಣ ಪ್ರಮುಖ ಅಂಶವಾಗಿದೆ ಎಂದ ಅವರು, ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು, ಮೊಟ್ಟೆ, ಬಾಳೆ ಹಣ್ಣು ವಿತರಿಸುವ ಜತೆಗೆ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಬದ್ಧವಾಗಿವೆ ಎಂದು ಹೇಳಿದರು.ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಹೊಸಬಾವಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರತ್ನವ್ವ ಭಜಂತ್ರಿ, ಸದಸ್ಯರಾದ ಗವಿಸಿದ್ದಪ್ಪ ಮುದ್ದಾಬಳ್ಳಿ, ಕಲಾವತಿ, ರೇಣುಕಾ ಅಡೆಯಪ್ಪನವರ, ಮಹೇಶ ಹಿರೇಮನಿ, ಎಸ್ಡಿಎಂಸಿ ಸದಸ್ಯರಾದ ವೀರಣ್ಣ ಬೋಳಣ್ಣವರ, ರಾಜಭಕ್ಷ ನೂರ್ ಭಾಷಾ, ಹನುಮಗೌಡ, ಗಂಗಮ್ಮ ಹುಜರತ್ತಿ, ಮುತ್ತಯ್ಯ ಕಳ್ಳಿಮಠ, ಸಿದ್ದಪ್ಪ ಮಾಸ್ತರ ಸಜ್ಜನ್, ಅಂದಾನಪ್ಪ ಅಂಗಡಿ, ಅಂದಪ್ಪ ಹುರುಳಿ, ಬಸಪ್ಪ ಮಂಡಲಗೇರಿ, ಮಹೇಶ ದೊಡ್ಡಮನಿ, ಬಿಆರ್ಪಿ ಮಹೇಶ ಅಸೂಟಿ, ಕುಕನೂರು ನಗರ ಸಿಆರ್ಪಿ ಪೀರಸಾಬ್ ದಪೇದರ್ ಇದ್ದರು.ಎತ್ತಿನ ಬಂಡಿಯಲ್ಲಿ ಸರಸ್ವತಿ ಭಾವಚಿತ್ರ ಮೆರವಣಿಗೆಶೃಂಗಾರಗೊಂಡ ಎತ್ತಿನ ಬಂಡಿಯಲ್ಲಿ ಮಹಾ ಸರಸ್ವತಿ ಭಾವಚಿತ್ರಕ್ಕೆ ಬಿಇಒ ಸೋಮಶೇಖರಗೌಡ ಪಾಟೀಲ್ ಪುಷ್ಪಾರ್ಚನೆ ಮಾಡಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ದಾಖಲಾತಿ ಆಂದೋಲನ ಮೆರವಣಿಗೆ ಜರುಗಿತು. ಬಿಇಒ ಎತ್ತಿನ ಬಂಡಿ ಮುನ್ನೆಡೆಸಿದರು. ಶಾಲೆಯನ್ನು ಅತ್ಯಂತ ಸುಂದರವಾಗಿ ಶೃಂಗಾರ ಮಾಡಿ ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳು ಕುಂಭ ಹೊತ್ತು ಸಾಗಿದರು. ಮಕ್ಕಳಿಂದ ಡೊಳ್ಳು ಕುಣಿತ ಹಾಗೂ ಕೋಲಾಟವೂ ಕೂಡ ಜರುಗಿತು. ಗ್ರಾಮದ ಬೀದಿಗಳಲ್ಲಿ ಮಕ್ಕಳನ್ನ ಶಾಲೆಗೆ ದಾಖಲಿಸುವಂತೆ ಘೋಷಣೆ ಕೂಗಲಾಯಿತು.