ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ೧೧೦ ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಶಂಕುಸ್ಥಾಪನೆ ಏಪ್ರಿಲ್ ೨೧ರಂದು ಗುಂಡ್ಲುಪೇಟೆಯಲ್ಲಿ ನಡೆಯಲು ಕಾರಣರಾದ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆಯೂರು ಗ್ರಾಮದ ಸುತ್ತ ಮುತ್ತಲಿನ ರೈತರು ಅಭಿನಂದಿಸಿದರು.

ಮೈಸೂರು ನಗರದ ದೇವಗೀತಾ ನಿವಾಸದಲ್ಲಿ ಶನಿವಾರ ಬೆಳಗ್ಗೆ ಮಲೆಯೂರು ಗ್ರಾಮದ ಸುತ್ತ ಮುತ್ತಲಿನ ರೈತರು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.

೧೦೦ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆಯೂರು ಗ್ರಾಮದ ಸಮೀಪ ಕನಕಗಿರಿ ಕ್ಷೇತ್ರದ ಬಳಿಯ ಕೆರೆ ಹಾಗೂ ಶ್ರೀರಾಂಪುರ ಹೊಸಕೆರೆಗೆ ನೀರು ತುಂಬಿಸಿ ಎಂದು ರೈತರು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕನಕಗಿರಿ ಕ್ಷೇತ್ರದ ಬಳಿಯ ಕೆರೆ ಹಾಗೂ ಶ್ರೀರಾಂಪುರ ಹೊಸಕೆರೆಗೆ ನೀರು ತುಂಬಿಸುವ ಭರವಸೆಯನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರೈತರಿಗೆ ನೀಡಿದ್ದಾರೆ.