ಕನ್ನಡಪ್ರಭ ವಾರ್ತೆ ಕೋಲಾರ
ಸಾವಿರಾರು ಕೋಟಿ ವಹಿವಾಟು ನಡೆಯುವ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ ಹೊರ ರಾಜ್ಯದ ಕಾರ್ಮಿಕರ ನಿಗಾ ಇಡಲು ವಿಶೇಷ ಪೋಲಿಸ್ ತಂಡ ರಚನೆ ಮಾಡಿ ದ್ವನಿವರ್ಧಕ ಮುಖಾಂತರ ಮಾದಕ ವಸ್ತುಗಳ ಬಗ್ಗೆ ರೈತ ಕೂಲಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದರು.ಲಕ್ಷಾಂತರ ರು. ಭೂಮಿ ತಾಯಿ ಮೇಲೆ ಬಂಡವಾಳ ಹಾಕಿ ಬೆವರು ಸುರಿಸಿ ೩ ತಿಂಗಳ ಕಾಲ ಬೆಳೆ ರಕ್ಷಣೆ ಮಾಡಿಕೊಂಡು ಮಾರುಕಟ್ಟೆಗೆ ಟೊಮೆಟೋ ತರುವ ರೈತರಿಗೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಜೊತೆಗೆ ಹೊರ ಜಿಲ್ಲೆಗಳಿಂದ ಬರುವ ರೈತರು ಮತ್ತು ಬದುಕು ಕಟ್ಟಿಕೊಳ್ಳಲು ಬರುವ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು ಗುಣಮಟ್ಟದ ಊಟ ಜೊತೆಗೆ ರಾತ್ರಿವೇಳೆ ಮಲಗಲು ವಿಶ್ರಾಂತಿ ಗೃಹಗಳ ಕೊರತೆ ಜೊತೆಗೆ ರಾತ್ರಿ ವೇಳೆ ಸೊಳ್ಳೆಗಳ ಮಧ್ಯೆ ಹಾಗೂ ಸ್ವಚ್ಛತೆ ಇಲ್ಲದ ಕೊಳತ ಟೊಮೆಟೋಗಳ ಮಧ್ಯೆ ಕಾಲಕಳೆದು ಅನಾರೋಗ್ಯ ಪೀಡಿತರಾಗಬೇಕಾದ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟು ಕುಟುಂಬಗಳನ್ನು ನಾಶ ಮಾಡುವ ಮದ್ಯ ಮಾತ್ರ ೨೪ ಗಂಟೆ ದೊರೆಯುತ್ತಿದ್ದರೂ ಸಮಸ್ಯೆ ಗಂಭೀರವಾಗಿ ಪರಿಗಣಿಸುವಲ್ಲಿ ಎ.ಪಿ.ಎಂ.ಸಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಕೋಟಿ ವಹಿವಾಟು ನಡೆಯುವ ಸಾವಿರಾರು ಕೂಲಿಕಾರ್ಮಿಕರು ಬದುಕು ಕಟ್ಟಿಕೊಳ್ಳುವ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಪ್ರತಿ ದಿನವೂ ರೈತರ ದ್ವಿಚಕ್ರ ವಾಹನಗಳು ಕಳ್ಳತನವಾಗುವ ಜೊತೆಗೆ ಭದ್ರತೆ ದೃಷ್ಟಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡದೆ ನಿರ್ಲಕ್ಷ್ಯ ಮಾಡುವ ಜೊತೆಗೆ ಮಳೆ ಬಂದರೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೆ ಕೆರೆ ಕುಂಟೆಗಳಾಗಿ ಮಾರ್ಪಟ್ಟು, ಸ್ವಚ್ಚತೆಗಾಗಿ ಲಕ್ಷಾಂತರ ರು. ಗುತ್ತಿಗೆ ನೀಡಿರುವ ಗುತ್ತಿಗೆದಾರರು ನಾಪತ್ತೆ ಆಗಿ ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.ಪತ್ರಿಕಾ ಹೇಳಿಕೆ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಪಾರುಕ್ಪಾಷ, ಪುತ್ತೇರಿ ರಾಜು, ರಾಜೇಶ್, ಗೀರಿಶ್ ಇದ್ದರು.