ಮಾಗಡಿ: ತಾಲೂಕಿನ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಅನ್ನದಾತರನ್ನು ಸತತವಾಗಿ ಕಡೆಗಣಿಸುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಕಚೇರಿ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ಆಡಳಿತ ವರ್ಗದ ಧೋರಣೆಯ ವಿರುದ್ಧ ಹರಿಹಾಯ್ದರು. ಒಂದೂವರೆ ವರ್ಷದ ಹಿಂದೆ ಸೋಮೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ತಹಸೀಲ್ದಾರ್ ಶರತ್ ಅವರು ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಯಾವುದೇ ಸಭೆ ನಡೆಸದೆ ರೈತರನ್ನು ವಂಚಿಸಲಾಗಿದೆ ಎಂದು ದೂರಿದರು.

ವಿದ್ಯುತ್ ವ್ಯತ್ಯಯ: ಪ್ರಸ್ತುತ ಬೇಸಿಗೆ ಕಾಲದಲ್ಲಿ ನೀರಿನ ಅವಶ್ಯಕತೆ ಹೆಚ್ಚಿದೆ. ಆದರೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಪಂಪ್‌ಸೆಟ್ ಮೋಟಾರ್ ಹಾಗೂ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿವೆ. ಒಂದು ಮೋಟಾರ್ ದುರಸ್ತಿಗೆ ಕನಿಷ್ಠ 30 ಸಾವಿರ ರು. ವ್ಯಯಿಸಬೇಕಾದ ಪರಿಸ್ಥಿತಿ ಇದ್ದು, ಬೆಳೆಗಳೂ ಒಣಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ರಾಗಿ ಖರೀದಿ ನೋಂದಣಿ ರದ್ದಾಗಿರುವುದರಿಂದ ತಾಲೂಕಿನ ಅನೇಕ ರೈತರು ಬೆಳೆದ ರಾಗಿಯನ್ನು ಮಾರಾಟ ಮಾಡಲಾಗದೆ ಮನೆಯಲ್ಲೇ ಇಟ್ಟುಕೊಳ್ಳುವಂತಾಗಿದೆ. ಕೆ-ಶಿಪ್ ರಸ್ತೆ ಕಾಮಗಾರಿಯ ಅವಾಂತರಗಳಿಂದಾಗಿ ರೈತರ ಮಕ್ಕಳ ಪ್ರಾಣಕ್ಕೆ ಸಂಚಕಾರ ಬಂದಿದೆ. ಇನ್ನೂ ಎಷ್ಟು ಬಲಿಗಳನ್ನು ತಾಲೂಕು ಆಡಳಿತ ವರ್ಗ ನಿರೀಕ್ಷಿಸುತ್ತಿದೆ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಧನಂಜಯ್ಯ, ಶಿವಲಿಂಗಯ್ಯ, ಶಿವರುದ್ರಯ್ಯ, ರವಿಕುಮಾರ್, ಕಾಂತರಾಜು, ಚನ್ನರಾಯಪ್ಪ, ವೆಂಕಟೇಶ್, ಉಮೇಶ್, ಜಗದೀಶ್, ರಾಜಣ್ಣ, ಕೃಷ್ಣಮೂರ್ತಿ, ಹನುಮಂತ, ಕುಮಾರಸ್ವಾಮಿ, ಗಂಗಣ್ಣ ಸೇರಿದಂತೆ ಹಲ ರೈತರು‌ ಭಾಗವಹಿಸಿದ್ದರು.

ಕೋಟ್‌............


ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.

-ಹೊಸಪಾಳ್ಯ ಲೋಕೇಶ್, ತಾಲೂಕು ರೈತ ಸಂಘ ಅಧ್ಯಕ್ಷರು

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕು ಕಚೇರಿ ಮುಂದೆ ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ತಾಲೂಕು ಆಡಳಿತದ ದುರಾಡಳಿತವನ್ನು ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.