ಹನುಮಸಾಗರ: ಸರಿಯಾದ ಸಮಯಕ್ಕೆ ವಿದ್ಯುತ್‌ ನೀಡದಕ್ಕೆ ಸಮೀಪದ ಚಳಗೇರಿ, ಮಲಕಾಪುರ, ಹೊಸಳ್ಳಿ, ಹುಲಸಗೇರಿ, ಅಡವಿಭಾವಿ, ಮಿಯ್ಯಪೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಚಳಗೇರಾ ಗ್ರಾಮದ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಗೇಟ್‌ಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಿದರು.

ಹಗಲು ಹೊತ್ತಿನಲ್ಲಿ ವಿದ್ಯುತ್‌ ನೀಡುವದಿಲ್ಲ. ರಾತ್ರಿ ಮಾತ್ರ ಕೆಲ ಹೊತ್ತು ನೀಡುತ್ತಾರೆ. ಅದು ಕೂಡಾ ನಿಯಮಿತವಾಗಿಲ್ಲ. ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಗಲು ಹೊತ್ತಿನಲ್ಲಿ ಏಳು ಗಂಟೆ ವಿದ್ಯುತ್‌ ಕೊಡುವವರೆಗೂ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಶಾಖಾಧಿಕಾರಿ ಮೌಲಾಸಾಬ್‌ ಸ್ಥಳಕ್ಕೆ ಆಗಮಿಸಿ ನಾಳೆಯಿಂದ ಮಧ್ಯಾಹ್ನ ೧೨ ರಿಂದ ಸಂಜೆ ೭ಗಂಟೆಯವರೆಗೆ ವಿದ್ಯುತ್ ನೀಡುವದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದು ಮುಂದೆ ಕೂಡಾ ಈ ರೀತಿಯಾದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಹುಲಸಗೇರಿಯ ಸಿದ್ದನಗೌಡ ಗೌಡ್ರ, ವೆಂಕಟೇಶ ಭಟ್ಟರ, ಕನಕರಾಯ ತಳವಾರ, ಶರಣಪ್ಪ ಬಡಿಗೇರ, ಯಲ್ಲಪ್ಪ ಹರಿಜನ, ಶರಣಪ್ಪ ಸಂಕ್ಲಾಪೂರ, ರಾಮಲಿಂಗಪ್ಪ ಸಂಕ್ಲಾಪೂರ, ಮಲಕಾಪೂರದ ಬಸಯ್ಯ ನಿಡಗುಂದಿಮಠ, ಶರಣಪ್ಪ ಕಬ್ಬಿಣದ, ನಾಗರಾಜ ಉಪ್ಪಾರ, ದುರುಗಪ್ಪ ಕಟ್ಟಿಮನಿ, ದುರುಗಪ್ಪ ಮಾದರ, ದೇವಪ್ಪ ಮೂಲಿಮನಿ, ಅಡವಿಭಾವಿಯ ಹನುಮಂತ ಎಚ್.ಪೂಜಾರಿ, ಶಿವಶರಣಗೌಡ ಮಾಲಿಪಾಟೀಲ, ರಾಮಣ್ಣ ಕುಮಟಗಿ, ಯಮನೂರ ತೊಣಸಿಹಾಳ, ಮುತ್ತಪ್ಪ ಬಡಿಗೇರ, ನಿಂಗನಗೌಡ ಮಾಲೀಪಾಟೀಲ, ಹೊಸಳ್ಳಿಯ ಯಲ್ಲಪ್ಪ ಬಕ್ಕಂಡಿ, ಹನಮಂತ ಗುಡದೂರ, ಹೇಮಣ್ಣ ಹಂಚಿನಾಳ ಸೇರಿದಂತೆ ನೂರಾರು ರೈತರು, ರೈತ ಮುಖಂಡರು ಇದ್ದರು.