ಸ್ವಯಂಚಾಲಿತವಾಗಿ ಹವಾಮಾನ ಇಂದೀಕರಿಸುವ ಮಾಹಿತಿ ಕೆಂದ್ರಗಳು ಸುಸ್ಥಿತಿಯಲ್ಲಿಲ್ಲ
ಹಾನಗಲ್ಲ: ಅಡಕೆ ಬೆಳೆವಿಮೆ ಬಿಡುಗಡೆಗೊಳಿಸುವಲ್ಲಿ ವಿಮಾ ಕಂಪನಿ ರೈತರಿಗೆ ದೊಡ್ಡ ಮೋಸ ಮಾಡಿದ್ದು, ತಾಲೂಕಿನ ೧೩ ಸಾವಿರ ಹೆಕ್ಟೇರ್ ಅಡಕೆ ಬೆಳೆಯುವ ರೈತರ ಶಾಪಕ್ಕೆ ಬೆಳೆವಿಮಾ ಕಂಪನಿ ತುತ್ತಾಗಬೇಕಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಕಿಡಿಕಾರಿದ್ದು, ಸೆ. ೨೫ರೊಳಗೆ ಇದನ್ನು ಸರಿಪಡಿಸದಿದ್ದರೆ ಸೆ. ೨೬ರಂದು ನಾಲ್ಕರ ಕ್ರಾಸ್ ಬಳಿ ಇರುವ ಬಹುದೊಡ್ಡ ಕೂಡು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬುಧವಾರ ತಹಸೀಲ್ದಾರರು ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕಳೆದ ವರ್ಷ ಭಾರಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಅಡಕೆ ಬೆಳೆ ರೈತನ ಪಾಲಿಗೆ ನಷ್ಟ ತಂದೊಡ್ಡಿದೆ. ಇದಕ್ಕೆ ವಿಮಾ ಕಂಪನಿ ಎಕರೆಗೆ ₹೨- ೩ ಸಾವಿರ ವಿಮಾ ಪರಿಹಾರ ನೀಡಿರುವುದು ರೈತರು ವಿಮಾ ಕಂಫನಿಯ ಮೇಲೆ ವಿಶ್ವಾಸ ಕಳೆದುಕೊಂಡಂತಾಗಿದೆ. ಇದರಿಂದ ರೈತರಿಗಾದ ಆರ್ಥಿಕ ಅನ್ಯಾಯ ಸರಿಪಡಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ತಾಲೂಕಿನಲ್ಲಿ ೪೨ ಗ್ರಾಮ ಪಂಚಾಯಿತಿಗಳಲ್ಲಿರುವ ಮಳೆಮಾಪನ ಕೇಂದ್ರಗಳು ಕೆಲಸ ಮಾಡುತ್ತಿಲ್ಲ. ಸ್ವಯಂಚಾಲಿತವಾಗಿ ಹವಾಮಾನ ಇಂದೀಕರಿಸುವ ಮಾಹಿತಿ ಕೆಂದ್ರಗಳು ಸುಸ್ಥಿತಿಯಲ್ಲಿಲ್ಲ. ಇದು ಸಂಬಂಧಿಸಿದ ಅಧಿಕಾರಿಗಳೇ ನೀಡಿದ ವರದಿಯಲ್ಲಿದೆ. ಇಷ್ಟು ಕಡಿಮೆ ಅಡಕೆ ಬೆಳೆವಿಮೆಗೆ ಕಾರಣ. ಈ ಯಂತ್ರಗಳ ಲೋಪವೂ ಒಂದಾಗಿದೆ. ಮಳೆಮಾಪನ ಕೇಂದ್ರ ಸರಿಪಡಿಸಲು ಹತ್ತಾರು ತಿಂಗಳಿನಿಂದ ಆಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜವಾಗಿಲ್ಲ. ಇದರ ದುಷ್ಟರಿಣಾಮವನ್ನು ರೈತರು ಎದುರಿಸಬೇಕಾಗಿದೆ. ಕೂಡಲೇ ಇಂತಹ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜೆಡಿಎಸ್ ಮುಖಂಡರಾದ ಮೂದಪ್ಪ ಪಡೆಪ್ಪನವರ, ಸಲಿಂ ಸಮನಳ್ಳಿ, ಗೌಸಮೋದ್ದೀನ ಆಲದಕಟ್ಟಿ, ರೈತರಾದ ರುದ್ರಗೌಡ ಪಾಟೀಲ, ಚಂದ್ರಪ್ಪ ಮಾಳಣ್ನನವರ, ವೀರೇಶ ಕಲಗುಡ್ಡಿ, ಭರಮಣ್ಣ ಹಿತ್ತಲಮನಿ, ಬ್ರಮ್ಮಾನಂದ ಮುದೆಣ್ಣನವರ, ನಂದೀಶ ಕ್ಷೌರದ, ಪ್ರಕಾಶ ಕೊಂಡೋಜಿ, ಚಾಮರಾಜ ಹಕ್ಲಣ್ಣನವರ, ಬಸವರಾಜ ಆಲದಕಟ್ಟಿ, ಸಿದ್ದಪ್ಪ ಬ್ಯಾತನಾಳ, ಚನಬಸು ಮೂಲಿಮನಿ ಇದ್ದರು. ತಹಸೀಲ್ದಾರ್ ವಿಠಲ್ ಚೌಗುಲಾ, ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಸೊಪ್ಪಂಡಿ, ತಾಲೂಕು ತೋಟಗಾರಿಕಾ ಇಲಾಖೆ ಅಧಿಕಾರಿ ಜಿ.ಆರ್. ವೀರಭದ್ರಸ್ವಾಮಿ ಅವರು ಈ ಸಂದರ್ಭದಲ್ಲಿದ್ದರು.