ಸಾಲದ ಹಣ ಕಟ್ಟುವಂತೆ ರೌಡಿಗಳಿಂದ ಧಮ್ಕಿಗೆ ರೈತರಿಂದ ಖಂಡನೆ

| Published : Feb 08 2025, 12:31 AM IST

ಸಾರಾಂಶ

ಕಡ್ಲೆಪುರಿ ತಿನ್ನುತ್ತಾ ಎರಡು ಗಂಟೆಗೂ ಹೆಚ್ಚು ಕಾಲ ಗೋ ಬ್ಯಾಂಕ್ ಆಫ್ ಬರೋಡ ಎನ್ನುತ್ತಾ ಧರಣಿ ಮುಂದುವರಿಸಿದರು. ಧರಣಿ ಸ್ಥಳಕ್ಕೆಆಗಮಿಸಿದ ಬ್ಯಾಂಕ್ ಮ್ಯಾನೇಜರನ್ನು ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು.

ಮದ್ದೂರು: ರೌಡಿಗಳನ್ನು ಕಳುಹಿಸಿ ಬ್ಯಾಂಕಿಗೆ ಸಾಲದ ಹಣ ಕಟ್ಟುವಂತೆ ಧಮ್ಕಿ ಹಾಕಿರುವುದನ್ನು ಖಂಡಿಸಿ, ರೈತಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ತಾಲೂಕಿನ ಕೆಸ್ತೂರು ಬ್ಯಾಂಕ್ ಆಫ್ ಬರೋಡಕ್ಕೆ ಮುತ್ತಿಗೆ ಹಾಕಿ ಕಡ್ಲೆಪುರಿ ತಿನ್ನುತ್ತಾ ಪ್ರತಿಭಟನೆ ನಡೆಸಿದರು.ಪೂರ್ಣಿಮಾ ವಸಂತ್ ಕುಮಾರ್ ಅವರ ಮನೆಗೆ ರೌಡಿಗಳನ್ನು ಕಳಿಸಿ ಬ್ಯಾಂಕಿಗೆ ಹಣ ಕಟ್ಟದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿ ಬೆದರಿಸಿದ ಹಿನ್ನೆಲೆಯಲ್ಲಿ ರೈತ ಸಂಘಕ್ಕೆ ವಿಷಯ ಮುಟ್ಟಿಸಿದಾಗ, ರೈತರು ಬ್ಯಾಂಕ್ ಆಫ್ ಬರೋಡಾ ಎದುರು ದಿಢೀರ್ ಪ್ರತಿಭಟನೆ ನಡೆಸಿ ಮ್ಯಾನೇಜರ್ ಶ್ರೀಕಾಂತ್ ವಿರುದ್ಧ ಘೋಷಣೆ ಕೂಗಿದರು.

ಕಡ್ಲೆಪುರಿ ತಿನ್ನುತ್ತಾ ಎರಡು ಗಂಟೆಗೂ ಹೆಚ್ಚು ಕಾಲ ಗೋ ಬ್ಯಾಂಕ್ ಆಫ್ ಬರೋಡ ಎನ್ನುತ್ತಾ ಧರಣಿ ಮುಂದುವರಿಸಿದರು. ಧರಣಿ ಸ್ಥಳಕ್ಕೆಆಗಮಿಸಿದ ಬ್ಯಾಂಕ್ ಮ್ಯಾನೇಜರನ್ನು ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು.

ಮನೆ ಸಾಲ ಪಡೆದಿರುವವರು ವಸಂತ ಕುಮಾರ್, ಬೆಳೆ ಸಾಲ ಪಡೆದಿರುವವರು ಅವರ ತಾಯಿ ಯಶೋಧಮ್ಮ, ನೋಟಿಸ್ ಕೊಟ್ಟು ಬೆದರಿಕೆ ಹಾಕಿರುವುದು ಅವರ ಸೊಸೆ ಪೂರ್ಣಿಮಾಗೆ. ಇದು ಯಾವ ನ್ಯಾಯ. ರೌಡಿಗಳನ್ನು ಕಳುಹಿಸಿ ಬೆದರಿಸುತ್ತೀಯಾ. ಇದಕ್ಕೆ ಸ್ಪಷ್ಟೀಕರಣ ಕೊಡಬೇಕೆಂದು ಪಟ್ಟು ಹಿಡಿದರು.

ಬರೋಡ ಬ್ಯಾಂಕ್ ಮ್ಯಾನೇಜರ್ ಶ್ರೀಕಾಂತ್ ಮಾತನಾಡಿ, ನನ್ನದು ತಪ್ಪಾಗಿದೆ. ಇನ್ನು ಮುಂದೆ ಈ ತಪ್ಪು ಮಾಡುವುದಿಲ್ಲ ಎಂದರು. ಪಿಎಸ್ಐ ನರೇಶ್ ಕುಮಾರ್ ಮಾತನಾಡಿ, ನಾಲ್ವರು ರೌಡಿಗಳನ್ನು ಕರೆಸಿ ತನಿಖೆ ಮಾಡುತ್ತೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ರೈತರನ್ನು ಸಮಾಧಾನಪಡಿಸಿದರು.ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು.