ಸಾರಾಂಶ
ಶಿಗ್ಗಾಂವಿ: ತಾಲೂಕಿನಲ್ಲಿ ಡಿಎಪಿ ಸೇರಿದಂತೆ ರಸಗೊಬ್ಬರದ ಅಭಾವ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಮೇ ೨೬ರಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ರೈತ ಮುಖಂಡರು ಎಚ್ಚರಿಸಿದರು.ಈ ಕುರಿತು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ತಾಲೂಕು ರೈತ ಮುಖಂಡ ಆನಂದ ಕೆಳಗಿನಮನಿ ಮಾತನಾಡಿ, ಶಿಗ್ಗಾಂವಿ ತಾಲೂಕಿಗೆ ೩ ಸಾವಿರ ಮೆಟ್ರಿಕ್ ಟನ್ ಡಿಎಪಿ ಗೊಬ್ಬರದ ಬೇಡಿಕೆ ಇದ್ದು, ಇಲ್ಲಿಯವರೆಗೂ ಕೇವಲ ೩೦೦ ಮೆಟ್ರಿಕ್ ಟನ್ ಮಾತ್ರ ಸರಬರಾಜು ಮಾಡಲಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭಿಸಿರುವ ರೈತರಿಗೆ ಗೊಬ್ಬರದ ಕೊರತೆಯಾಗುತ್ತಿದೆ. ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳದಿರುವುದೆ ಇದಕ್ಕೆ ಕಾರಣವಾಗಿದ್ದು, ಮೇ ೨೬ರರೋಳಗೆ ಸಮಸ್ಯ ಬಗೆಹರಿಯದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ತಾಲೂಕು ಘಟಕದಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಂದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ ಕಂಕನವಾಡ, ಶಂಕರಗೌಡ ಪಾಟೀಲ, ಗಿರಿಶ ಪಾಟೀಲ, ಸಿ.ಬಿ. ಹಿರೇಮಠ, ರಮೇಶ ಜೋಳದ, ಈಶ್ವರ ದೇವರಮನಿ, ಬಸವರಾಜ, ಮಾರುತಿ ಇತರರಿದ್ದರು.ಇಂದು ಸಭೆ: ತಾಲೂಕಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಸಿದ್ಧತೆ ಕುರಿತಂತೆ ಚರ್ಚಿಸಲು ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರ ಆದೇಶದ ಮೇರೆಗೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಜಲಿ ಅವರು ರೈತರು ಮತ್ತು ರೈತ ಮುಖಂಡರ ಸಭೆಯನ್ನು ಮೇ ೨೪ರ ಸಾಯಂಕಾಲ ೪ ಗಂಟೆಗೆ ಪಟ್ಟಣದ ಆಡಳಿತ ಭವನದ ಸಭಾಭವನದಲ್ಲಿ ಆಯೋಜಿಸಿದ್ದಾರೆ.ಪ್ರತಿ ವರ್ಷಕ್ಕಿಂತ ಈ ವರ್ಷ ೩೬ ಮೆಟ್ರಿಕ್ ಟನ್ ಹೆಚ್ಚುವರಿ ಸೇರಿಸಿ ೨೯೪೬ ಮೆಟ್ರಿಕ್ ಟನ್ ಡಿಎಪಿ ಗೊಬ್ಬರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಮೇ ೨೩ರ ವರೆಗೆ ೬೨೦ ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ದಾಸ್ತಾನು ಇದ್ದು, ೬೦೨ ಮೆಟ್ರಿಕ್ ಟನ್ ಗೊಬ್ಬರವನ್ನು ತಾಲೂಕಿನಲ್ಲಿ ಮಾರಾಟ ಮಾಡಲಾಗಿದೆ. ನಮ್ಮ ಬೇಡಿಕೆಗೆ ಅನುಗುಣವಾಗಿ ಡಿಎಪಿ ಗೊಬ್ಬರ ಸರಬರಾಜು ಆಗಬಹುದು. ಡಿಎಪಿಗೆ ಪರ್ಯಾಯವಾಗಿ ವೈಜ್ಞಾನಿಕವಾಗಿ ರೈತರು ಬಳಸಬಹುದಾದ ಇತರ ಸಂಯುಕ್ತ ಗೊಬ್ಬರಗಳು ೫೦೫೭ ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೊಟ್ರೆಶ ಗೆಜ್ಜಲಿ ತಿಳಿಸಿದರು.ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹಾವೇರಿ: 2024- 25ನೇ ಸಾಲಿನ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜೂ. 1ರಂದು ಜರುಗಲಿದೆ.ಎಸ್ಸೆಸ್ಸೆಲ್ಸಿಯ ಮೂರು ಪಠ್ಯಕ್ರಮದ ಮತ್ತು ಪಿಯುಸಿಯ ಮೂರೂ ವಿಭಾಗದ(ಕಲೆ, ವಾಣಿಜ್ಯ ಹಾಗೂ ವಿಜ್ಞಾನ) ಶೇ. 90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹರು ಹಾವೇರಿ ತಾಲೂಕು ಅಧ್ಯಕ್ಷರು, ರೇಣುಕಾ ಏಜೆನ್ಸಿ, ಅಶ್ವಿನಿ ನಗರ, ಹಾವೇರಿ. ಇವರಿಗೆ ಮೇ 29ರೊಳಗಾಗಿ ಅರ್ಜಿ ತಲುಪಿಸಲು ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.