ತೊಗರಿ ಖರೀದಿ ಕೇಂದ್ರ ಪ್ರಾರಂಭಕ್ಕೆ ರೈತರ ಆಗ್ರಹ

| Published : Dec 25 2024, 12:47 AM IST

ಸಾರಾಂಶ

ಕೃಷಿ ಅಧಿಕಾರಿಗಳು ಎಪಿಎಂಸಿ ವರ್ತಕರ ಮೇಲೆ ಸರಿಯಾದ ಕ್ರಮವನ್ನು ಕೈಗೊಳ್ಳದೇ ಇದರೇ ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಮನಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಎಪಿಎಂಸಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ, ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮನವಿ ಸಲ್ಲಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮನವಿ ಸ್ವಿಕರಿಸಿ, ನಿಮ್ಮ ಮನವಿ ಸರಕಾರದ ಮುಂದೆ ತಂದು ಆದಷ್ಟು ತೀವ್ರ ಖರೀದಿ ಕೇಂದ್ರ ಪ್ರಾರಂಭ ಮಾಡಿಸಲಾಗುವುದು ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಕಾಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಈಗಾಗಲೇ ತೊಗರಿ ಬೆಳೆ ಕಟಾವು ನಡೆಯುತ್ತಿದ್ದು ರೈತರು ರಾಶಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ರೈತರು ಸುಮಾರು ೧೫ ದಿನಗಳ ಹಿಂದೆ ರಾಶಿ ಮಾಡಿ ಎಪಿಎಂಸಿ ಮಾರುಕಟ್ಟೆಗೆ ಒಯ್ದಿದ್ದಾರೆ. ಸುಮಾರು ರೈತರು ಕ್ವಿಂಟಲ್‌ಗೆ ₹೧೨೦೦೦ ನಂತೆ ತೊಗರಿ ಮಾರಿದ್ದಾರೆ. ಆದರೇ ದಿನದಿಂದ ದಿನಕ್ಕೆ ತೊಗರಿ ಬೆಲೆ ಕುಸಿಯುತ್ತ ಈಗ ₹೬೦೦೦ ಕಡಿಮೆಯಾಗುತ್ತಿದೆ. ಈ ವರ್ಷದಲ್ಲಿ ತೊಗರಿಯನ್ನು ಸುಮಾರು ಕ್ಷೇತ್ರದಲ್ಲಿ ಬಿತ್ತಿದ್ದು ಅತಿವೃಷ್ಠಿ ಹಾಗೂ ಹವಾಮಾನದ ವೈಪರೀತ್ಯದಿಂದ ಸಾಕಷ್ಟುರೋಗ ಪೀಡಿತವಾಗಿ ಬೆಳೆ ಉಳಿಸಿಕೊಳ್ಳಲು ರೈತರು ೧ ಎಕರೆಗೆ ₹೨೫ ರಿಂದ ₹೪೦ ಸಾವಿರದಷ್ಟು ಬೀಜ, ಗೊಬ್ಬರ, ಹಾಗೂ ಕೀಟನಾಶಕ್ಕಾಗಿ ಖರ್ಚು ಮಾಡಿದ್ದು. ಈ ರೀತಿ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ. ಖರ್ಚು ಮಾಡಿದ ಹಣವೂ ಕೂಡ ಬಾರದಂತಾಗಿ ರೈತರಿಗೆ ದಿಕ್ಕೆ ತೋಚದಂತಾಗಿದೆ. ಹೀಗಾಗಿ ರೈತರು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿದೆ. ಪ್ರತಿವರ್ಷವು ರೈತರಿಗೆ ಬೆಳೆಯಿಂದ ಲಾಭ ಸಿಗದೇ ಹಾನಿಯೇ ಆಗುತ್ತದೆ. ಕಾರಣ ರೈತರಿಂದ ಸುಮಾರು ₹೮೦೦೦, ₹೯೦೦೦ ಬೆಂಬಲ ಬೆಲಯಲ್ಲಿ ತೊಗರಿ ಖರೀದಿಸಲು ಖರೀದಿ ಕೇಂದ್ರಗಳನ್ನು ಶೀಘ್ರವೇ ತೆರೆದು ರೈತರ ಬದುಕಿಗೆ ಆಸರೆಯಾಗಿ ಸರಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಮಾಡುತ್ತಿರುವ ಮೋಸವನ್ನು ತಡೆಗಟ್ಟಬೇಕು ಮತ್ತು ರೈತರಿಗೆ ಬಿಳಿ ಚೀಟಿಯನ್ನು ನೀಡಬಾರದು. ತಮ್ಮಗೆ ಬೇಕಾದ ರೀತಿಯಲ್ಲಿ ತೊಗರಿಗಳನ್ನು ಖರೀದಿಸುತ್ತಿದ್ದು, ಇದು ನಿಲ್ಲಬೇಕು. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ನಿಗದಿ ಮಾಡಬೇಕು. ಕೃಷಿ ಇಲಾಖೆ ನಿಮಯಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕೃಷಿ ಅಧಿಕಾರಿಗಳು ಎಪಿಎಂಸಿ ವರ್ತಕರ ಮೇಲೆ ಸರಿಯಾದ ಕ್ರಮವನ್ನು ಕೈಗೊಳ್ಳದೇ ಇದರೇ ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಮನಿ ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಟರದಾನಿ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು, ತಹಸೀಲ್ದಾರ್‌ ಸತೀಶ ಕೂಲಡಗಿ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ರೈತ ಸಂಘದ ಮನವಿ ಸ್ವೀಕರಿಸಿ, ಆದಷ್ಟು ಬೇಗನೆ ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಬಸನಗೌಡ ಪೈಲ್, ರಸೂಲಸಾಬ ತಹಸೀಲ್ದಾರ, ಬಸನಗೌಡ ಪಾಟೀಲ, ರಾಜಮಹಮ್ಮದ ನದಾಫ್, ರಾಜಶೇಖರ ಹುಡೇದಮನಿ, ಮಹಾಲಿಂಗಪ್ಪ ಕೂಡ್ಲೂರ, ಸಿದ್ದು ಘಂಟಿ, ದೊಡ್ಡಪ್ಪ ಕವಡಿಮಟ್ಟಿ ಪ್ರದೀಪ ಅಮರಣ್ಣನವರ, ಮಾಯವ್ವ ಗಾಜಿ ಮತ್ತು ರೈತರು ಇದ್ದರು.