ಸಾರಾಂಶ
ರೇಷ್ಮೆ ಬೆಳೆಗಾರರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸದಾಗಿ ಹಿಪ್ಪು ನೇರಳೆ ತೋಟಗಳಿಗೆ, ಹುಳು ಸಾಕಾಣಿಕೆ ಮನೆಗಳಿಗೆ ಸಹ ಜಿಪಂನಿಂದ ಸಹಾಯಧನ ನೀಡಲಾಗುವುದು.
ಹಲಗೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ದ್ವಿತಳಿ ರೇಷ್ಮೆಗೆ ಬೇಡಿಕೆ ಇರುವುದರಿಂದ ರೈತರು ಹೆಚ್ಚು ದ್ವಿತಳಿ ರೇಷ್ಮೆಯನ್ನು ಬೆಳೆದರೆ ನಿಮ್ಮ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಬಹುದು ಜಿಲ್ಲಾ ಪಂಚಾಯಿತಿ ರೇಷ್ಮೆ ಕೃಷಿ ನಿರ್ದೇಶಕ ಪಿ.ಬಿ.ಪುಟ್ಟಸ್ವಾಮಿ ತಿಳಿಸಿದರು.
ಅಂತರವಳ್ಳಿಯಲ್ಲಿ ತಾಲೂಕು ಪಂಚಾಯಿತಿ ಮತ್ತು ತಾಂತ್ರಿಕ ಸೇವಾ ಕೇಂದ್ರ ವತಿಯಿಂದ ನಡೆದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ನೂತನ ತಾಂತ್ರಿಕತೆಗಳ ಮಾಹಿತಿ ನೀಡುವ ಸಲುವಾಗಿ ಕ್ಷೇತ್ರ ಮಟ್ಟದಲ್ಲಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮವನ್ನು ರೇಷ್ಮೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.ಮಳವಳ್ಳಿ ರೇಷ್ಮೆ ಸಹಾಯಕ ನಿರ್ದೇಶಕ ಎಚ್.ಸಿ.ಸುರೇಶ ಮಾತನಾಡಿ, ರೇಷ್ಮೆ ಬೆಳೆಗಾರರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸದಾಗಿ ಹಿಪ್ಪು ನೇರಳೆ ತೋಟಗಳಿಗೆ, ಹುಳು ಸಾಕಾಣಿಕೆ ಮನೆಗಳಿಗೆ ಸಹ ಜಿಪಂನಿಂದ ಸಹಾಯಧನ ನೀಡಲಾಗುವುದು. ಮುಂದಿನ ದಿನಗಳಲ್ಲಿ ನೀರಿಗೆ ಬರ ಬರುವ ಸಂಭವವಿದೆ. ಹನಿ ನೀರಾವರಿ ಅಳವಡಿಸಿಕೊಂಡು ನೀರನ್ನು ಮಿತವಾಗಿ ಬಳಕೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯತ್ತಂಬಾಡಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅರ್ಜುನ್, ಸುಂದ್ರಮ್ಮ, ಶಿವಮ್ಮ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ, ತಾಂತ್ರಿಕ ಸೇವಾ ಕೇಂದ್ರ ಮಳವಳ್ಳಿ ಕಿರಣ್ ಘಾಟಗೆ, ಹಲಸಹಳ್ಳಿ ತಾಂತ್ರಿಕ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಸ್.ವಿ.ನರಸಿಂಹಮೂರ್ತಿ, ಬೆಳಕವಾಡಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಚ್.ಜಿ. ಆಶಾ, ಪುರಿಗಾಲಿ ತಾಂತ್ರಿಕ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಟಿ.ಆರ್.ಪೂಜ, ಹಲಗೂರು ತಾಂತ್ರಿಕ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಶ್ರೀನಿವಾಸ ಗೌಡ, ನವೀನ್ ಕುಮಾರ್, ನಳಿನಾಕ್ಷಮ್ಮ, ಕುಮಾರ್ ಸೇರಿದಂತೆ ಇತರರು ಇದ್ದರು.