ಹಾನಗಲ್ಲ: ಹಾನಗಲ್ಲ ತಾಲೂಕಿನ ಅಲ್ಲಾಪುರ, ಹರನಗಿರಿ ಗ್ರಾಮಗಳ ಇಬ್ಬರು ರೈತರ ಜಮೀನಿನಲ್ಲಿ ವಕ್ಫ ಆಸ್ತಿ ಎಂದು ಹೆಸರು ದಾಖಲಿಸಿರುವುದನ್ನು ಪ್ರತಿಭಟಿಸಿ, ಮೇ ೨೯ರಂದು ಈ ರೈತರ ಜಮೀನಿನಲ್ಲಿಯೇ ಕನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅವರ ನೇತೃತ್ವದಲ್ಲಿ ರೈತರ ಭೂಮಿಯಲ್ಲಿ ಧಾನ್ಯಗಳ ಬೀಜ ಬಿತ್ತಿ ರೈತರಿಗೆ ಬೆಂಗಾವಲಾಗಿ ನಿಲ್ಲಲಾಗುವುದು ಎಂದು ಹಾನಗಲ್ಲ ತಾಲೂಕು ರೈತ ಸಂಘದ ಅಧ್ಯಕ್ಷ ರುದ್ರಪ್ಪ ಬಳಿಗಾರ ತಿಳಿಸಿದರು.ಮಂಗಳವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಚನ್ನಪ್ಪ ಬಾಳಿಕಾಯಿ ಹಾಗೂ ಹಜರೇಸಾಬ ಮೊಕಾಸಿ ಅವರ ಜಮೀನಿನ ದಾಖಲೆಯಲ್ಲಿ ಇದು ವಕ್ಫ ಆಸ್ತಿ ಎಂದು ನಮೂದಿಸಲಾಗಿದೆ. ಬೆಳೆದು ನಿಂತ ಬೆಳೆಯನ್ನು ಹಾಳು ಮಾಡಿ ಹಿಂದೆ ರೈತನಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ತೆರವುಗೊಳಿಸುವುದಕ್ಕಾಗಿ ಹಲವು ಹೋರಾಟಗಳು ನಡೆದಿವೆ. ಈಗ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ಮೊಕಾಸಿ ಟ್ರಸ್ಟ ಹೆಸರಿನಲ್ಲಿ ಬೇರೆಯವರು ಈ ಭೂಮಿಯ ಕಬ್ಜಾಕ್ಕೆ ಮುಂದಾಗಿದ್ದಾರೆ. ರೈತನ ಕೃಷಿ ಭೂಮಿಯನ್ನು ಏಕಾ ಏಕಿ ವಕ್ಫ ಆಸ್ತಿ ಎಂದು ರೈತರನ್ನು ಒಕ್ಕಲೆಬ್ಬಿಸುವುದು ಸರಿ ಅಲ್ಲ ಎಂದು ತಿಳಿಸಿದರು.ಮೇ ೨೯ ಕ್ಕೆ ಬಿತ್ತನೆ: ಈ ಜಮೀನನ್ನು ರೈತರ ಕಬ್ಜಾಕ್ಕೆ ನೀಡಲು ಇದೇ ಮೇ ೨೯ರಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅವರ ನೇತೃತ್ವದಲ್ಲಿ ಈ ಭೂಮಿಯಲ್ಲಿ ಬಿತ್ತನೆ ಬೀಜಗಳನ್ನು ಬಿತ್ತಿ ರೈತನ ರಕ್ಷಣೆಗೆ ನಿಲ್ಲುವ ನಿರ್ಣಯ ಕೈಗೊಳ್ಳಲಾಗಿದೆ. ರೈತರಿಗಾದ ಅನ್ಯಾಯವನ್ನು ನಾವು ಸಹಿಸುವುದಿಲ್ಲ. ರೈತರ ರಕ್ಷಣೆಯೇ ರೈತ ಸಂಘದ ಹೊಣೆ. ನಾವು ಅದಕ್ಕೆ ಬದ್ಧ. ಈ ದಿನ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ರಾಜ್ಯ ಕಾರ್ಯಾಧ್ಯಕ್ಷ ಶರಣಪ್ಪ ಮರಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಸುಬೇದಾರ, ಜಿಲ್ಲಾಧ್ಯಕ್ಷ ಹನುಮಂತಂಪ್ಪ ಹುಚ್ಚಣ್ಣನವರ ಹಾಗೂ ರೈತ ಸಂಘದ ಜಿಲ್ಲಾ ತಾಲೂಕು ಮುಖಂಡರು ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಪುಟ್ಟಪ್ಪ ಸಾಬಳದ, ಸಿದ್ದರಾಮಗೌಡ ಕರೇಗೌಡರ, ಗುಡ್ಡಪ್ಪ ಗಾಜಿಪುರ, ಬಸವರಾಜ ಬ್ಯಾತನಾಳ, ಯಲ್ಲನಗೌಡ ಸಿದ್ದನಗೌಡರ ಮೊದಲಾದವರು ಇದ್ದರು.