ಬಗರ್‌ಹುಕುಂ ಪತ್ರಕ್ಕೆ ಆಗ್ರಹಿಸಿ ಅರಸೀಕೆರೆಯಲ್ಲಿ ರೈತರ ಪಾದಯಾತ್ರೆ

| Published : Mar 15 2024, 01:20 AM IST

ಬಗರ್‌ಹುಕುಂ ಪತ್ರಕ್ಕೆ ಆಗ್ರಹಿಸಿ ಅರಸೀಕೆರೆಯಲ್ಲಿ ರೈತರ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

೪೦ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅರಸೀಕೆರೆಯಲ್ಲಿ ರೈತ ಸಂಘದ ಸದಸ್ಯರು ಶಿರಸ್ತೇದಾರ್ ಸೋಮಶೇಖರ್ ಅವರಿಗೆ ರೈತ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಲಾಯಿತು.

ಜಮೀನು ಮಂಜೂರಾತಿಗೆ ಶಿರಸ್ತೇದಾರ್‌ಗೆ ರೈತ ಸಂಘ ಮನವಿ । 40 ಬೇಡಿಕೆ ಈಡೇರಿಕೆಗೆ ಒತ್ತಾಯ । ಡಿಸಿ ಕಚೇರಿಗೆ ಮೆರವಣಿಗೆಕ

ನ್ನಡಪ್ರಭ ವಾರ್ತೆ ಅರಸೀಕೆರೆ

ಜಿಲ್ಲೆಯ ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಐದಲ್ಲ ಕಾವಲು ಸರ್ವೆ ನಂಬರ್‌ನಲ್ಲಿ ಎರಡುವರೆ ಸಾವಿರ ಎಕರೆ ಸರ್ಕಾರಿ ಜಮೀನನ್ನು ೬೫೦ ರೈತರು ಹತ್ತಾರು ಉಳುಮೆ ಮಾಡುತ್ತಿದ್ದು ಈಗ ಅರಣ್ಯ ಇಲಾಖೆ ಜಮೀನು ತಮಗೆ ಸೇರಿದ್ದು ಎಂದು ನೋಟಿಸ್ ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರೈತರಿಗೆ ಜಮೀನು ಮಂಜೂರು ಮಾಡಿ ಮಂಜೂರಾತಿ ಪತ್ರವನ್ನು ನೀಡಬೇಕು ಎಂಬುದು ಸೇರಿದಂತೆ ೪೦ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಿರಸ್ತೇದಾರ್ ಸೋಮಶೇಖರ್ ಅವರಿಗೆ ರೈತ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್, ‘ಅತಿವೃಷ್ಟಿಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಪರಿಹಾರ ಹಣ ನೀಡಬೇಕು, ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ರೈತರಿಗೆ ತಮ್ಮ ಕೃಷಿ ಜಮೀನಿಗೆ ಅಗತ್ಯವಿರುವ ರಸಗೊಬ್ಬರವನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡುವುದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಂಬಲ ಬೆಲೆ ನಿಗದಿ ಮಾಡಬೇಕು. ಬರಗಾಲ, ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದು ತೆಂಗು ಬೆಳೆ ನಾಶವಾಗಿ ಸುಳಿಬಿದ್ದು ನಾಶವಾಗಿದ್ದು ಇಂದು ಬೆಲೆ ಇಲ್ಲದಂತಾಗಿ ಕಳೆದ ವರ್ಷ ೨೦,೦೦೦ ರು. ಆಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಇಂದು ಕೇವಲ ೮-೧೦ ಸಾವಿರ ರು.ಗೆ ಇಳಿದಿದೆ. ನಾಫೆಡ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆ ಕೊಬ್ಬರಿ ಧಾರಣೆ ದಿನೇ ದಿನೇ ಏರಿಕೆಯಾಗುತ್ತದೆ. ಇಲ್ಲದಿದ್ದರೆ ಪ್ರತಿದಿನ ಕಡಿಮೆ ಮಾಡಿ ರೈತರನ್ನು ಶೋಷಣೆ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ನಾಫೆಡ್ ಕೊಬ್ಬರಿ ಕೇಂದ್ರವನ್ನು ಎಲ್ಲಾ ವರ್ಷದ ಎಲ್ಲಾ ಕಾಲದಲ್ಲೂ ತೆರಯಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು

ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಸಮರ್ಪಕ ರಸ್ತೆಗಳ ನಿರ್ಮಾಣ ಮಾಡಬೇಕು, ತೆಂಗಿನ ಮರಗಳನ್ನು ರೋಗ ಬಾಧೆಯಿಂದ ವಿಮುಕ್ತಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ವಾಸಿಸಲು ಯೋಗ್ಯವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು, ‘ಅಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮವನ್ನು ಈಚೆಗೆ ಸರ್ಕಾರ ಹಮ್ಮಿಕೊಂಡಿತ್ತು, ಆದರೆ ಸರ್ಕಾರದ ಯಾವ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೂ ಹಳ್ಳಿ ಕಡೆ ಬಂದಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆಗಳು ಸೇರಿದಂತೆ ಸುಮಾರು ೪೦ ಬೇಡಿಕೆಗಳ ಈಡೇರಿಕೆಗೆ ಮಾ.೧೫ ರಂದು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪಾದಯಾತ್ರೆಯು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಹಾರನಹಳ್ಳಿ ಕೋಡಿಮಠ, ಬೆಲ್ಲವತ್ತಳ್ಳಿ ಮಾರ್ಗವಾಗಿ ಸಾಗುವ ಪಾದಯಾತ್ರೆಯು ದುದ್ದ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಮಾ.೧೫ ರಂದು ದುದ್ದದಿಂದ ಹೊರಡುವ ಪಾದಯಾತ್ರೆ ಚಿಕ್ಕಕಡಲೂರು, ದೊಡ್ಡಪುರ ಮಾರ್ಗವಾಗಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು ಎಂದರು.

ರೈತ ಮುಖಂಡರಾದ ಅಯೂಬ್ ಪಾಶ, ಎಜಾಜ್ ಪಾಶ, ನಂಜಮ್ಮ, ಮಹಮ್ಮದ್ ದಸ್ತಗಿರಿ, ಜವೇನಹಳ್ಳಿ ನಿಂಗಪ್ಪ, ಚಂದ್ರಪ್ಪ ರೆಡ್ಡಿ, ಅಬ್ದುಲ್ ಕುನ್ನಿ, ಹನುಮಂತ, ಮಮತಾ, ಕಾಂತರಾಜು, ಶಿವಣ್ಣ ,ಗಂಗಣ್ಣ, ಅರೇಹಳ್ಳಿ ರಮೇಶ್, ಶಶಿಕುಮಾರ್, ರಂಜಾನ್, ಕೋಲಾರದ ರೆಡ್ಡಪ್ಪ ಇದ್ದರು.

ಬಗರ್‌ಹುಕುಂ ಸಾಗುವಳಿ ಪತ್ರ ನೀಡುವುದು ಸೇರಿ ೪೦ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಅರಸೀಕೆರೆಯಲ್ಲಿ ರೈತ ಸಂಘ ಪಾದಯಾತ್ರೆ ನಡೆಸಿತು.

.