ರೈತರಿಗೆ ಹಣಕಾಸು ನಿರ್ವಹಣೆ ಕಿರುತು ಅರಿವು ಅಗತ್ಯ

| Published : Mar 06 2024, 02:15 AM IST

ಸಾರಾಂಶ

ಗ್ರಾಮೀಣ ಜನತೆಯಲ್ಲಿ ಹಣಕಾಸು ನಿರ್ವಹಣೆಯಲ್ಲಿನ ವೈಫಲ್ಯದಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿಲ್ಲ. ಲಾಭದಾಯಕ ಕೃಷಿಯತ್ತ ರೈತರು ಗಮನಹರಿಸಬೇಕು, ಇರುವ ಹಣಕಾಸಿನಲ್ಲೇ ಲಾಭ ಗಳಿಸುವ ಪ್ರಯತ್ನಕ್ಕೆ ಒತ್ತು ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ದೇಶದ ಬೆನ್ನೆಲುಬು ಹಾಗೂ ಆಸ್ತಿಯಾಗಿರುವ ಗ್ರಾಮೀಣ ರೈತರು, ಜನಸಾಮಾನ್ಯರಿಗೆ ಹಣಕಾಸು ನಿರ್ವಹಣೆ ಕುರಿತು ಅರಿವು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಯಂಗ್ ಇಂಡಿಯಾ ಸಂಸ್ಥೆ ಮಾಡುತ್ತಿದೆ ಎಂದು ಯಂಗ್ ಇಂಡಿಯ ಮುಖ್ಯಸ್ಥರು ಹಾಗೂ ಹೋಟೆಲ್‌ ಉದ್ಯಮಿ ಜಹರೀನ್ ತಿಳಿಸಿದರು.

ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಂಗ್ ಇಂಡಿಯಾ ಸಂಸ್ಥೆಯಿಂದ ಗ್ರಾಮೀಣ ಜನತೆಯಲ್ಲಿ ಹಣಕಾಸು ನಿರ್ವಹಣೆ ಕುರಿತು ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಣಕಾಸು ನಿರ್ವಹಣೆ ವೈಫಲ್ಯ

ಗ್ರಾಮೀಣ ಜನತೆಯಲ್ಲಿ ಹಣಕಾಸು ನಿರ್ವಹಣೆಯಲ್ಲಿನ ವೈಫಲ್ಯದಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿಲ್ಲ. ಲಾಭದಾಯಕ ಕೃಷಿಯತ್ತ ರೈತರು ಗಮನಹರಿಸಬೇಕು, ಇರುವ ಹಣಕಾಸಿನಲ್ಲೇ ಲಾಭ ಗಳಿಸುವ ಪ್ರಯತ್ನಕ್ಕೆ ಒತ್ತು ನೀಡಬೇಕು.ಯಂಗ್ ಇಂಡಿಯಾ ಸಂಸ್ಥೆಯಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಯೋಜನೆ ರೂಪಿಸಿದ್ದು, ೧.೧೮ ಕೋಟಿ ರು. ವೆಚ್ಚದಲ್ಲಿ ಆವಣಿ ಶಾಲೆಯ ಸಮಗ್ರ ಅಭಿವೃದ್ಧಿ, ಸ್ಮಾರ್ಟ್ ಕ್ಲಾಸ್, ಕಟ್ಟಡ, ಆಧುನಿಕ ತಂತ್ರಜ್ಞಾನ ಬಳಕೆಗೆ ಅಗತ್ಯಗಳನ್ನು ಪೂರೈಸಲು ಕ್ರಮವಹಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ಯಂಗ್ ಇಂಡಿಯಾದ ಪ್ರಿಯಾ ಮಾತನಾಡಿ, ಗ್ರಾಮೀಣ ಜನತೆ ತಮ್ಮ ಕೃಷಿ, ವ್ಯಾಪಾರದೊಂದಿಗೆ ಸಣ್ಣ ಉದ್ಯೋಗಕ್ಕೂ ಸಿಗುವ ಹಣಕಾಸಿನ ನೆರವು ಪಡೆಯಲು ಮುಂದಾಗಬೇಕು, ಕೃಷಿಯೊಂದಿಗೆ ಇತರೆ ಉಪಕಸುಬುಗಳ ಮೂಲಕ ಆಧಾಯ ಹೆಚ್ಚಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.

ಅವಕಾಶ ಸೃಷ್ಟಿಸಿಕೊಳ್ಳಬೇಕು

ಯಂಗ್ ಇಂಡಿಯಾದ ಗ್ರಾಮೀಣ ಅಭಿವೃದ್ಧಿಯ ಮುಖ್ಯಸ್ಥೆ ಚೌಡಪ್ಪ ಮಾತನಾಡಿ, ರೈತರ ಸಬಲೀಕರಣಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಹಣಕಾಸಿನ ಹೊಂದಾಣಿಕೆಯ ಬಗ್ಗೆ ಮಾಹಿತಿ ನೀಡಿದರು. ರೈತರು ಸುಮ್ಮನಿದ್ದರೆ ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ, ನೀವೇ ಸೃಷ್ಟಿಸಿಕೊಳ್ಳಬೇಕು, ಆರ್ಥಿಕವಾಗಿ ಸಬಲರಾಗಲು ಉತ್ತಮ ಹಾದಿ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಯಂಗ್ ಇಂಡಿಯಾ ಸಂಸ್ಥೆ ಸಾಮಾಜಿಕ ಸೇವೆಗೆ ಮುಂದಾಗಿದೆ, ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೂ ಸುಸಜ್ಜಿತ ಸೌಲಭ್ಯಗಳೊಂದಿಗೆ ಶಿಕ್ಷಣ ದೊರೆಯಬೇಕು ಎಂದು ಬಯಸುತ್ತಿದೆ ಎಂದ ಅವರು, ಈ ಸಂಬಂಧ ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಮ್ಮ ಕೈಲಾದಷ್ಟು ನೆರವಿನ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯಂಗ್ ಇಂಡಿಯನ್ಸ್‌ನ ಅರುಣ್, ಪ್ರದೀಪ್, ಕೋಲಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ವೀರಣ್ಣಗೌಡ, ಆವಣಿ ಆನಂದ್ ಇದ್ದರು.