ಅನೇಕ ಯೋಜನೆಗಳು ಬಂದರೂ ಬಗಿಹರಿಯದ ರೈತರ ಸಮಸ್ಯೆ: ಸಂಸದ ಪಿ.ಸಿ. ಗದ್ದಿಗೌಡರ

| Published : Jun 23 2025, 12:33 AM IST

ಅನೇಕ ಯೋಜನೆಗಳು ಬಂದರೂ ಬಗಿಹರಿಯದ ರೈತರ ಸಮಸ್ಯೆ: ಸಂಸದ ಪಿ.ಸಿ. ಗದ್ದಿಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ತಂದಿದ್ದರೂ ಸಹ ಇನ್ನೂವರೆಗೆ ರೈತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ತಂದಿದ್ದರೂ ಸಹ ಇನ್ನೂವರೆಗೆ ರೈತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ವಿಷಾದ ವ್ಯಕ್ತಪಡಿಸಿದರು.

ತೋಟಗಾರಿಕೆ ವಿವಿಯ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಭಾರತ ಸರ್ಕಾರ ಹೈದರಾಬಾದ್‌ನ ಎಂ.ಎ.ಎನ್.ಎ.ಜಿ.ಇ, ಎಸ್.ಎ.ಎಂ.ಇ.ಟಿಐ (ಉತ್ತರ), ಧಾರವಾಡ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ತೋವಿವಿ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಡಪ್ಲೋಮಾ ಪದವಿ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಅವರು, ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ತಮಗೆಲ್ಲ ತರಬೇತಿ ನೀಡಿ, ಪ್ರಮಾಣ ಪತ್ರ ನೀಡಲಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ರೈತರ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ರೈತರಿಗೆ ಬೀಜ, ಗೊಬ್ಬರ, ಮಣ್ಣಿನ ಫಲವತ್ತತೆ ಹಾಗೂ ಪ್ರಮಾಣ, ವಾತಾವರಣ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ನೀಡುವ ವಿವಿಧ ಮಾದರಿಯ ಬೆಳೆ ಬೆಳೆಯುವ ಮಾದರಿಗಳ ಬಗ್ಗೆ ತರಬೇತಿ ಪಡೆದ ನೀವು ರೈತರಿಗೆ ತಿಳಿಸುವ ಕಾರ್ಯವಾಗಬೇಕು. ಜಮೀನು ಇದ್ದಷ್ಟೇ ಇದ್ದು, ಜನಸಂಖ್ಯೆ ಬೆಳೆಯುತ್ತ ಹೋಗುತ್ತಿದೆ. ಹೀಗಾಗಿ ಆಹಾರ ಭದ್ರತೆಗಾಗಿ ಅಲ್ಪಾವಧಿಯಲ್ಲಿ ಅಧಿಕ ಇಳುವರಿ ಕೊಡುವ ಹಾಗೂ ಎಲ್ಲ ತರಹದ ಬೆಳೆಗಳನ್ನು ನಮ್ಮ ಭಾಗದಲ್ಲಿ ಬೆಳೆಯುವಂತಹ ರೈತರಿಗೆ ಹುರಿದುಂಬಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶ. ಕೃಷಿ ಪ್ರಧಾನವಾದ ದೇಶ. ರೈತ ದೇಶದ ಬೆನ್ನೆಲುಬು ಮತ್ತು ರೈತ ಅನ್ನದಾತ ಎಂದು ಹೊಗಳುವುದೇ ಇಂದು ಹೆಚ್ಚಾಗಿದ್ದು, ರೈತರಿಗೆ ಸ್ಪಂದಿಸುವ ಕಾರ್ಯ ಇದುವರೆಗೆ ಆಗುತ್ತಿಲ್ಲ. ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು ವಿವಿಧ ಮಾದರಿಯ ಬೆಳೆಗಳನ್ನು ಸಂಶೋಧಿಸಬೇಕಿದೆ. ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂ, ಔಷಧಿಯ ಸಸ್ಯಗಳನ್ನು ಬೆಳೆಯಲು ನಮ್ಮ ಜಿಲ್ಲೆಯ ನೆಲ ಉಪಯುಕ್ತವಾಗಿದೆ. ಈಗಾಗಲೇ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ರೈತರೊಬ್ಬರು ಸೇಬು ಹಣ್ಣು ಬೆಳೆದು ತೋರಿಸಿದ್ದಾರೆ. ಹಿಂದೆ ಕಾಶ್ಮೀರ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಬೆಳೆಯಬಹುದಾಗಿದ್ದ ಸೇಬು ಇಂದು ನಮ್ಮ ಭಾಗದಲ್ಲಿ ಬೆಳೆಯುತ್ತಿದೆ ಎಂದರೆ ಇನ್ನುಳಿದ ಬೆಳೆಗಳು ಕೂಡ ಇಲ್ಲಿ ಬೆಳೆಯಬಹುದಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಂ.ವಿ. ಮಂಜುನಾಥ ಮಾತನಾಡಿ, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ರೈತರಿಗೆ ಉಪಯುಕ್ತವಾಗುವ ತರಬೇತಿ ನೀಡಲಾಗಿದ್ದು, ಅದರಲ್ಲಿ 9991 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲು ನಿಯೋಜಿಸಲಾಗಿದೆ. ಇದರಿಂದ 2.5 ಕೋಟಿ ಜನ ರೈತರಿಗೆ ಮುಂಗಾರು ಬೆಳೆಗಳ ಅಭಿಯಾನ ನಡೆಸಲಾಗಿದ್ದು, ಪ್ರತಿ ಹೆಕ್ಟೇರ್‌ ಗೆ ಸರಾಸರಿ ಒಂದು ಕ್ವಿಂಟಾಲ್‌ ನಷ್ಟಾದರೂ ಹೆಚ್ಚಿಸುವ ಕಾರ್ಯವಾಗಬೇಕು ಎಂದರು.

ತರಬೇತಿ ಪಡೆದವರಲ್ಲಿ ಬಂಗಾರದ ಪದಕ ಪಡೆದ ಚಂದ್ರಶೇಖರ, ಬೆಳ್ಳಿ ಪದಕ ಪಡೆದ ಸವಿತಾ ಕರಬೂರ ಹಾಗೂ ಕಂಚು ಪದಕ ಪಡೆದ ವೆಂಕಟರೆಡ್ಡಿ ಅವರಿಗೆ ಪದಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಕೃಷಿ ವಿಶೇಷ ಅಧಿಕಾರಿ ಜಾಧವ, ಕೃಷಿ ಉಪನಿರ್ದೇಶಕ ರೂಢಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.